ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸೆಪ್ಟೆಂಬರ್ 5 ಮತ್ತು 6 ರಂದು ಕೃಷಿ ಮಹಾವಿದ್ಯಾಲಯ, ನವಿಲೆ ಆವರಣದಲ್ಲಿ ‘ಸಹ್ಯಾದ್ರಿ ಕೃಷಿ ಸಂತೆ-2026ʼಯನ್ನು ಆಯೋಜಿಸಲಾಗಿದೆ.
ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 8 ರವರೆಗೆ ಈ ಸಹ್ಯಾದ್ರಿ ಕೃಷಿ ಸಂತೆ ಜರುಗಲಿದ್ದು, ಈ ಮೇಳದಲ್ಲಿ ಹಣ್ಣಿನ ಸಸಿಗಳ ನರ್ಸರಿ, ಅಲಂಕಾರಿಕ ಗಿಡಗಳು, ತರಕಾರಿ ಮತ್ತು ಹೂವಿನ ಬೀಜಗಳು, ತಾರಸಿ / ಕೈತೋಟದ ಪರಿಕರಗಳ ಮಾರಾಟ ಮಳಿಗೆಗಳು, ಅಲಂಕಾರಿಕ ಮೀನುಗಳು, ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಒಳಗೊಂಡ 50 ಕ್ಕೂ ಅಧಿಕ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ.
ಮುಖ್ಯವಾಗಿ ಈ ಮೇಳವು ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬೀಜಗಳು, ಸಸಿಗಳು ಮತ್ತು ಪರಿಕರಗಳು ಒಂದೇ ಸೂರಿನಡಿ ಪ್ರದರ್ಶನ, ಮಾರಾಟ ಮತ್ತು ತಾಂತ್ರಿಕ ಮಾಹಿತಿಯನ್ನು ರೈತ ಸಮೂಹಕ್ಕೆ ನೀಡುವ ಉದ್ದೇಶ ಹೊಂದಿದೆ. ಅಲ್ಲದೆ ಹಾಗೂ ತಾರಸಿ ತೋಟ/ಕೈತೋಟ / ಪೌಷ್ಠಿಕ ತೋಟ ಸ್ಥಾಪಿಸಲು ಆಸಕ್ತಿಯುಳ್ಳ ಸಾರ್ವಜನಿಕರಿಗೆ ಈ ಮೇಳದಲ್ಲಿ ಪರಿಕರಗಳು ಮತ್ತು ತಾಂತ್ರಿಕ ಮಾಹಿತಿ ಲಭ್ಯವಿರುತ್ತದೆ. ಈ ಸಂತೆಯಲ್ಲಿ ಮಲೆನಾಡು ವಿಶಿಷ್ಟ ಸಿಹಿ ಖಾದ್ಯ ತೊಡೆದೇವು, ಉತ್ತರ ಕರ್ನಾಟಕದ ತಿಂಡಿ-ತಿನಿಸುಗಳು ಹಾಗೂ ಸಿರಿಧಾನ್ಯಗಳ ಉತ್ಪನ್ನಗಳು ಮತ್ತು ಸ್ಥಳೀಯ ವಿಶಿಷ್ಟ ಖಾದ್ಯಗಳು, ಜೇನುತುಪ್ಪದ ಮೌಲ್ಯವರ್ಧಿತ ಉತ್ಪನ್ನಗಳ ಮಳಿಗೆಗಳೂ ಕೂಡ ಈ ಸಂತೆಯಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ.
ಅಲ್ಲದೆ, ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಆವರಣದ ಪ್ರಾತ್ಯಕ್ಷಿಕೆಯ ತಾಕುಗಳಾದ ಸಮಗ್ರ ಕೃಷಿ ಪದ್ದತಿ, ಜೇನು ಸಾಕಾಣಿಕೆ ಘಟಕ, ಕುರಿ ಮತ್ತು ಕೋಳಿ ಸಾಕಾಣಿಕೆ ಘಟಕ, ಜಲ ಕೃಷಿ (ಹೈಡ್ರೋಫೋನಿಕ್ಸ್), ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೊಳವೆ ಬಾವಿ ಜಲ ಮರುಪೂರಣ ಮಾದರಿ, ತಾರಸಿ ತೋಟ, ಅಲಂಕಾರಿಕ ಮೀನು ಘಟಕಗಳನ್ನು ಸಂದರ್ಶಿಸಿ ಮಾಹಿತಿ ಪಡೆಯಲು ಅವಕಾಶವಿದೆ. ರೈತರು, ರೈತ ಮಹಿಳೆಯರು, ಯುವ ವ್ಯವಸಾಯಗಾರರು, ಉದ್ದಿಮೆದಾರರು, ಗ್ರಾಹಕರು, ವಿದ್ಯಾರ್ಥಿಗಳು, ಯುವಕರು, ಪೋಷಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರು ಭಾಗವಹಿಸಿ, ಈ ಮೇಳವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕೋರಿದ್ದಾರೆ.
ಸೆಪ್ಟೆಂಬರ್ 5 ರಿಂದ ನವಿಲೆ ಕೃಷಿ ಕಾಲೇಜಿನ ಕೃಷಿ ವಿಜ್ಞಾನ ಕೇಂದ್ರ ಆಶ್ರಯದಲ್ಲಿ “ಕೃಷಿಸಂತೆ- 2026”
Date:
