ರಾಜ್ಯದಲ್ಲಿ ಒಂದೆಡೆ ಭೀಕರ ಬರಗಾಲದಿಂದ ರೈತರು, ಸಾರ್ವಜನಿಕರು ಬಿಂದಿಗೆ ನೀರಿಗೂ ಪರದಾಡುತ್ತಾ ಕಣ್ಣೀರು ಹಾಕುತ್ತಿದ್ದರೆ, ಇನ್ನೊಂದೆಡೆ ಅತಿವೃಷ್ಟಿಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಂತೂ ಇಂತೂ 2 ತಿಂಗಳ ನಂತರ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಸದಸ್ಯರು, ಇನ್ನೇನು ಜನರ ಬಳಿಗೆ ತೆರಳುತ್ತಿದ್ದಾರೆ, ಜನರ ಸಂಕಷ್ಟ ಆಲಿಸಲಿದ್ದಾರೆ ಎಂದುಕೊಳ್ಳುವ ಹೊತ್ತಿಗೆ, ಕಾಂಗ್ರೆಸ್ ಪಕ್ಷದ ಅಸಲಿ ಮುಖವಾಡ ಮತ್ತೊಮ್ಮೆ ಕಳಚಿ ಬಿದ್ದಿದೆ.
‘ಬರ ಅಧ್ಯಯನ’ಕ್ಕೆಂದು ಬಳ್ಳಾರಿಗೆ ತೆರಳಿದ ಸಚಿವ ಶ್ರೀ ಬಿ.ನಾಗೇಂದ್ರ ಅವರು ಕಾಂಗ್ರೆಸ್ ಕಾರ್ಯಕರ್ತರ ಅದ್ದೂರಿ ಸಂಭ್ರಮಾಚರಣೆ, ಸತ್ಕಾರ ಹಾಗೂ ಬೃಹತ್ ಹಾರ-ತುರಾಯಿ ಹಾಕಿಸಿಕೊಳ್ಳುವ ಮೂಲಕ ಸಂಭ್ರಮೋತ್ಸವ ಆಚರಿಸಿಕೊಂಡಿರುವುದು ಕಾಂಗ್ರೆಸ್ ಪಕ್ಷದ ಬೇಜಾವಾಬ್ದಾರಿ, ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ಎಂದು ಬಿಜೆಪಿ ಕರ್ನಾಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರ್ಕಾರದ ಸಚಿವರ ನಡೆವಳಿಕೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ರೈತರು ಕಣ್ಣೀರು ಹಾಕುತ್ತಿದ್ದರೆ ನಮಗೇನು, ತಾವು ಸಚಿವರಾಗಿರುವುದೇ ದೊಡ್ಡ ಸಾಧನೆ ಎನ್ನುವಂತೆ ಇವರ ವರ್ತನೆ ನೋಡಿ ಜನರೇ ಹಿಡಿ ಶಾಪ ಹಾಕುತ್ತಿದ್ದಾರೆ.
ಇದು ಬರ ಅಧ್ಯಯನ ಪ್ರವಾಸವೋ, ಸಚಿವರ ವೈಯಕ್ತಿಕ ಸಂಭ್ರಮಾಚರಣೆಯೋ ಎನ್ನುವುದನ್ನು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರೇ ಉತ್ತರಿಸಬೇಕು. ಸಚಿವ ಸ್ಥಾನಗಳಿಂದ ಹಿಡಿದು ಪ್ರತಿಯೊಂದಕ್ಕೂ ‘ರೇಟ್ ಕಾರ್ಡ್’ ಇಟ್ಟು ಹೆಚ್ಚು ಬೆಲೆ ಕೂಗಿದವರಿಗೆ ಆದ್ಯತೆ ನೀಡಲಾಗುತ್ತಿರುವ ಕಾಂಗ್ರೆಸ್ ಸಂಸ್ಕೃತಿಯನ್ನು ಅವರದೇ ಪಕ್ಷದ ನಾಯಕರು ಬಯಲು ಮಾಡಿದ್ದಾರೆ. ಹಾಗಾಗಿ, ಗಂಭೀರ ಆರೋಪ ಹೊತ್ತಿದ್ದರೂ, ಹೆಚ್ಚು ಮೊತ್ತ ನೀಡಿ ಸ್ಥಾನ ‘ಗಿಟ್ಟಿಸಿಕೊಂಡ’ ಸಚಿವರಿಗೆ ಈ ಸಂಭ್ರಮೋತ್ಸವ ಕೂಡ ಸಹಜವಾದದ್ದೇ!
ನಮ್ಮ ಅನ್ನದಾತರು, ಜನ ಜಾನುವಾರುಗಳು ಸಂಕಷ್ಟದಲ್ಲಿರುವ ಕಾಲದಲ್ಲಿ, ಅವರ ಪರಿಸ್ಥಿತಿಗಳನ್ನು ಅಪಹಾಸ್ಯ ಮಾಡುವ ರೀತಿಯ ಇಂತಹ ವರ್ತನೆಗಳನ್ನು, ಹಾರ-ತುರಾಯಿ ಸಂಭ್ರಮಗಳನ್ನು ಬದಿಗಿಟ್ಟು ಸಚಿವರುಗಳು ಕೂಡಲೇ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಲಿ ಎಂದು ಆಗ್ರಹಿಸುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
