“ಶಿವಮೊಗ್ಗ ನಗರ ಹಾಗೂ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಯಾವುದೇ ರೀತಿಯ ವಿಳಂಬವಾಗಬಾರದು. ಮಹಾನಗರ ಪಾಲಿಕೆ ಹಾಗೂ ಕಂದಾಯ ಇಲಾಖಾಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ, ಅರ್ಹ ಪ್ರತಿಯೊಬ್ಬ ಸಂತ್ರಸ್ತನಿಗೂ ತಕ್ಷಣವೇ ಪರಿಹಾರ ತಲುಪಿಸಬೇಕು,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನ್ಯ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ನಗರ ಹಾಗೂ ತಾಲೂಕು ಮಟ್ಟದ ‘ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರಗತಿ ಪರಿಶೀಲನಾ ಸಭೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಭೆಯಲ್ಲಿ ಶಾಸಕರು ಮಂಡಿಸಿದ ಪ್ರಮುಖ ವಿಷಯಗಳು ಹಾಗೂ ಆಗ್ರಹಗಳು:
೧. ಪರಿಹಾರ ಧನ ₹5 ಲಕ್ಷಕ್ಕೆ ಏರಿಕೆಗೆ ಆಗ್ರಹ: ಮನೆ ಹಾನಿಗೆ ಈ ಹಿಂದೆ ನೀಡಲಾಗುತ್ತಿದ್ದ ₹5 ಲಕ್ಷ ಪರಿಹಾರವನ್ನು ಪ್ರಸ್ತುತ ₹1,20,000 ಕ್ಕೆ ಇಳಿಸಿರುವುದನ್ನು ತಕ್ಷಣವೇ ಪರಿಷ್ಕರಿಸಿ, ಪುನಃ ₹5 ಲಕ್ಷಕ್ಕೆ ಏರಿಸಬೇಕು. ಅಧಿಕೃತ ಮತ್ತು ಅನಧಿಕೃತ ಎನ್ನದೆ ಮನೆ ಕಳೆದುಕೊಂಡ ಪ್ರತಿಯೊಂದು ಬಡ ಕುಟುಂಬಕ್ಕೂ ಪರಿಹಾರ ಮಂಜೂರು ಮಾಡಬೇಕು.
೨. ನೂತನ ನೀರು ಶುದ್ಧೀಕರಣ ಘಟಕ (WTP): ಶಿವಮೊಗ್ಗ ನಗರದ ಭವಿಷ್ಯದ ಕುಡಿಯುವ ನೀರಿನ ಅಗತ್ಯತೆಗಾಗಿ ನೂತನ ನೀರು ಶುದ್ಧೀಕರಣ ಘಟಕ ಸ್ಥಾಪಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಜಾಗ ಗುರುತಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಯೋಜನೆಗೆ ಅನುದಾನ ಮಂಜೂರು ಮಾಡಲು ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಅಲ್ಲದೇ ಮುಂಬರುವ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಲು ತಕ್ಷಣವೇ ಡಿಪಿಆರ್ (DPR) ಸಿದ್ಧಪಡಿಸುವಂತೆ ವಿನಂತಿಸಿದರು.
೩. ಅಂಗನವಾಡಿ ಮತ್ತು ಶಾಲೆಗಳ ಪುನಶ್ಚೇತನ: ಶಿವಮೊಗ್ಗ ನಗರದ 160ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಅಗತ್ಯವಿರುವ ಚಾಪೆ, ಜಮಖಾನ ಹಾಗೂ ಅಡುಗೆ ಕುಕ್ಕರ್ಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಅಂದಾಜು ಪಟ್ಟಿ ತಯಾರಿಸಿ ತಕ್ಷಣವೇ ಒದಗಿಸಬೇಕು. ಮಳೆಯಿಂದ ಹಾನಿಗೊಳಗಾಗಿರುವ ಶಾಲೆಗಳು ಹಾಗೂ ಅಂಗನವಾಡಿ ಕಟ್ಟಡಗಳನ್ನು ಶೀಘ್ರ ದುರಸ್ತಿಗೊಳಿಸಲು ಸಭೆಯ ಗಮನ ಸೆಳೆಯಲಾಯಿತು.
ಸಾರ್ವಜನಿಕರ ಹಿತರಕ್ಷಣೆ ಹಾಗೂ ಕ್ಷೇತ್ರದ ಪ್ರಗತಿಗೆ ಜನಪ್ರತಿನಿಧಿಯಾಗಿ ಸದಾ ಶ್ರಮಿಸುವುದಾಗಿ ಈ ಸಂದರ್ಭದಲ್ಲಿ ಶಾಸಕರು ಪುನರುಚ್ಛರಿಸಿದರು.
