ಚಿಕ್ಕ ಮಕ್ಕಳ ಮೊಬೈಲ್ ಫೋನ್ ಗೀಳು ತಪ್ಪಿಸಲು ಪೋಷಕರು ಮನೆಗಳಲ್ಲಿ ಪುಟ್ಟ ಪುಟ್ಟ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವ ರೂಢಿ ಬೆಳೆಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಾ. ಎಚ್.ಬಿ. ಮಂಜುನಾಥ ಹೇಳಿದರು.
ಅವರಿಂದು ದಾವಣಗೆರೆ ನಗರದ ನಿಟುವಳ್ಳಿಯ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಅಖಂಡ ನಾಮಸ್ಮರಣೆ ಹಾಗೂ ಗುರುಚರಿತ್ರೆ ಪಾರಾಯಣ ಕಾರ್ಯಕ್ರಮದ ಉಪನ್ಯಾಸ ನೀಡುತ್ತಾ ಪೋಷಕರು ಇದಕ್ಕಾಗಿ ತಮ್ಮ ಬಾಲ್ಯದಲ್ಲಿ ಓದಿದ ಕೇಳಿದ ಪುಟ್ಟ ಕಥೆಗಳನ್ನು ಪುನಃ ಜ್ಞಾಪಿಸಿಕೊಳ್ಳಬೇಕು ಇಲ್ಲವಾದಲ್ಲಿ ಪಂಚತಂತ್ರ, ರಾಮಾಯಣ ಮಹಾಭಾರತದ ಉಪಖ್ಯಾನಗಳಲ್ಲಿನ ಪುಟ್ಟ ಪುಟ್ಟ ಉಪಕಥೆಗಳು, ಹಳೆಯ ಚಂದಮಾಮ ಬಾಲಮಿತ್ರಗಳ ನೀತಿ ಕಥೆಗಳು, ಅಷ್ಟಾದಶ ಪುರಾಣಗಳಲ್ಲಿನ ಪುಟ್ಟಪುಟ್ಟ ಆದರ್ಶ ಕಥೆಗಳು ಇವುಗಳನ್ನು ಅಂತರ್ಚಾಲಗಳ ಮೂಲಕ ಪೋಷಕರು ಮೊದಲು ಓದಿಕೊಂಡು ಮಕ್ಕಳಿಗೆ ಅವುಗಳನ್ನು ಹೇಳಬೇಕು, ಹೀಗೆ ಮಾಡುವುದರಿಂದ ಪೋಷಕರಿಗೂ ತಮ್ಮ ಜ್ಞಾಪಕ ಶಕ್ತಿ ಪುನರಾವರ್ತನೆ ಆಗುತ್ತದೆ ತಮ್ಮ ಬಾಲ್ಯವೂ ನೆನಪಾಗುತ್ತದೆ ಮಕ್ಕಳೊಂದಿಗಿನ ಬಾಂಧವ್ಯವೂ ವೃದ್ಧಿಯಾಗುತ್ತದೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆ, ಕಥೆಗಳ ಮೂಲಕ ವಿವರಿಸಿದರು.
ಭಗವನ್ನಾಮ ಸ್ಮರಣೆಯು ಬದುಕಿಗೆ ಭರವಸೆಯನ್ನು ನೀಡಿದರೆ ಗುರುಚರಿತ್ರೆ ಪಾರಾಯಣವು ಬದುಕಿಗೆ ಸನ್ಮಾರ್ಗವನ್ನು ತೋರಿಸುತ್ತದೆ ಎಂದರು.
ಉಪನ್ಯಾಸಕ ಡಾ.ಎಚ್.ಬಿ.ಮಂಜುನಾಥರನ್ನು ಶ್ರೀ ಶಿವಚಿದಂಬರ ಸೇವಾ ಸಂಘದ ಉಮೇಶ್ ಕುಲಕರ್ಣಿ, ವಿಜಯಕುಮಾರ ಜೋಶಿ,ಸೋಮನಾಥ ಕುಲಕರ್ಣಿ, ವಿಶ್ವನಾಥ ದೀಕ್ಷಿತ್, ವಿನಾಯಕ ಕುಲಕರ್ಣಿ ಮುಂತಾದವರು ಫಲಪ್ರಸಾದದೊಂದಿಗೆ ಸನ್ಮಾನಿಸಿ ಗೌರವಿಸಿದರು
