ಸ್ಮರಣೆ: ಅರುಣ್ ಪ್ರಸಾದ್ ,ಆನಂದಪುರ.
ಶಿವಮೊಗ್ಗ ಜಿಲ್ಲೆ, ಸಾಗರ ತಾಲ್ಲೂಕಿನ ಹೆಗ್ಗೋಡಿನ ಅಕ್ಷರ ತಪಸ್ವಿ, ರಂಗಕರ್ಮಿ ಹಾಗೂ ನೀನಾಸಂ ಸಂಸ್ಥೆಯ ಸಂಸ್ಥಾಪಕ ಕೆ.ವಿ. ಸುಬ್ಬಣ್ಣ ಅವರ 21ನೇ ಪುಣ್ಯತಿಥಿಯ ಅಂಗವಾಗಿ ಇಂದು ವಿವಿಧೆಡೆ ಗೌರವ ನಮನ ಸಲ್ಲಿಸಲಾಯಿತು.
ಮಲೆನಾಡಿನ ಸಣ್ಣ ಹಳ್ಳಿಯಾದ ಹೆಗ್ಗೋಡನ್ನು ಜಾಗತಿಕ ರಂಗಭೂಮಿಯ ಭೂಪಟದಲ್ಲಿ ಗುರುತಿಸುವಂತೆ ಮಾಡಿದ ಕೆ.ವಿ. ಸುಬ್ಬಣ್ಣ ಅವರು ಕೇವಲ ನಾಟಕಕಾರ, ಲೇಖಕ ಅಥವಾ ನಿರ್ದೇಶಕರಷ್ಟೇ ಅಲ್ಲದೆ, ಕನ್ನಡದ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಮಹಾನ್ ಚೇತನರಾಗಿದ್ದರು.
ನೀಲಕಂಠೇಶ್ವರ ನಾಟ್ಯ ಸೇವಾ ಸಂಘ (ನೀನಾಸಂ) ಮೂಲಕ ಗ್ರಾಮೀಣ ಜನರಿಗೆ ರಂಗಭೂಮಿ, ಸಿನಿಮಾ ಮತ್ತು ಸಾಹಿತ್ಯದ ಪರಿಚಯ ಮಾಡಿಕೊಟ್ಟ ಅವರು, ವಿಶ್ವದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತಂದು ಕಲೆಯು ಎಲ್ಲರಿಗೂ ತಲುಪಬೇಕು ಎಂಬ ಧ್ಯೇಯವನ್ನು ಸಾಕಾರಗೊಳಿಸಿದರು.
ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಮ್ಯಾಗ್ಸೇಸೆ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಲಭಿಸಿವೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಯನ್ನು ಅವರು ವಿನಯದಿಂದ ನಿರಾಕರಿಸಿದ್ದೂ ಅವರ ವ್ಯಕ್ತಿತ್ವದ ವಿಶೇಷತೆಯಾಗಿದೆ.
1932ರ ಫೆಬ್ರವರಿ 20ರಂದು ಸಾಗರ ತಾಲ್ಲೂಕಿನ ಮುಂಡಿಗೆಸರದಲ್ಲಿ ಕೆ.ವಿ. ರಾಮಪ್ಪ ಮತ್ತು ಸಾವಿತ್ರಮ್ಮ ದಂಪತಿಗೆ ಜನಿಸಿದ ಸುಬ್ಬಣ್ಣ ಅವರು 1949ರಲ್ಲಿ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದರು. ಲೇಖಕರಾಗಿ 20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು, ನೀನಾಸಂನ ಅಕ್ಷರ ಪ್ರಕಾಶನದ ಮೂಲಕ 500ಕ್ಕೂ ಹೆಚ್ಚು ಕನ್ನಡ ಪುಸ್ತಕಗಳ ಪ್ರಕಟಣೆಗೆ ಮಾರ್ಗದರ್ಶನ ನೀಡಿದರು.
ಸಾಮಾಜಿಕ ಕಳಕಳಿಯ ವ್ಯಕ್ತಿಯಾಗಿದ್ದ ಅವರು ಗುಟ್ಕಾ ಸೇವನೆಯ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸುವಲ್ಲಿ ಹಾಗೂ ಪರಿಸರ ಸಂಬಂಧಿತ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇಕ್ಕೇರಿ ಬಂಗಾರದ ಗಣಿ ವಿರೋಧಿ ಹೋರಾಟದಲ್ಲಿಯೂ ಅವರು ಪ್ರಮುಖ ಧ್ವನಿಯಾಗಿದ್ದರು.
ಈ ಸಂದರ್ಭದಲ್ಲಿ ಕೆ.ವಿ. ಸುಬ್ಬಣ್ಣ ಅವರ ಹೆಸರಿನಲ್ಲಿ ಆಚಾಪುರ ಗ್ರಾಮ ಪಂಚಾಯಿತಿಯ ಮುರುಘಾಮಠದ ಸರ್ಕಾರಿ ಶಾಲಾ ಆವರಣದಲ್ಲಿ ನಿರ್ಮಿಸಲಾದ “ಕೆ.ವಿ. ಸುಬ್ಬಣ್ಣ ರಂಗಮಂದಿರ”ದ ನೆನಪುಗಳನ್ನು ಹಂಚಿಕೊಳ್ಳಲಾಯಿತು. ರಂಗಮಂದಿರಕ್ಕೆ ಅವರ ಹೆಸರನ್ನು ಇಡುವ ಕುರಿತು ಆರಂಭದಲ್ಲಿ ಅವರು ಮುಜುಗರ ವ್ಯಕ್ತಪಡಿಸಿದ್ದರೂ, ಮನವಿ ಮಾಡಿದ ಬಳಿಕ ಲಿಖಿತ ಅನುಮತಿ ನೀಡಿದ್ದರು. ಆದರೆ ತಮ್ಮ ಹೆಸರಿನ ರಂಗಮಂದಿರವನ್ನು ಸ್ವತಃ ಉದ್ಘಾಟಿಸಲು ಅವರು ಒಪ್ಪದ ಹಿನ್ನೆಲೆಯಲ್ಲಿ ಸ್ಥಳೀಯ ಗಣ್ಯರು, ಶಿಕ್ಷಕರು ಹಾಗೂ ಮಠಾಧೀಶರ ಸಮ್ಮುಖದಲ್ಲಿ ಉದ್ಘಾಟನೆ ನೆರವೇರಿಸಲಾಯಿತು.
1999ರ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಸಾಗರದಲ್ಲಿ ನಡೆದ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ತಮ್ಮ ಭಾಷಣವನ್ನು ಮೆಚ್ಚಿ ಕೆ.ವಿ. ಸುಬ್ಬಣ್ಣ ಅವರು ಎದ್ದು ನಿಂತು ಅಭಿನಂದಿಸಿದ್ದ ಕ್ಷಣ ಜೀವನದ ಅವಿಸ್ಮರಣೀಯ ನೆನಪಾಗಿ ಉಳಿದಿದೆ ಎಂದು ಅವರು ಸ್ಮರಿಸಿದರು.
ಭೌತಿಕವಾಗಿ ನಮ್ಮನ್ನಗಲಿ ಎರಡು ದಶಕಗಳಾದರೂ, ಕೆ.ವಿ. ಸುಬ್ಬಣ್ಣ ಅವರು ಹಾಕಿಕೊಟ್ಟ ರಂಗಹಾದಿ, ಅವರ ವಿಚಾರಧಾರೆಗಳು ಹಾಗೂ ನೀನಾಸಂ ಮೂಲಕ ಬೆಳೆಸಿದ ಸಾಂಸ್ಕೃತಿಕ ಚಳವಳಿ ಇಂದಿಗೂ ಕನ್ನಡಿಗರಿಗೆ ದಾರಿದೀಪವಾಗಿವೆ.
ಕನ್ನಡ ನೆಲದ ಈ ಅಪ್ರತಿಮ ರಂಗಯೋಗಿಗೆ ರಾಜ್ಯದಾದ್ಯಂತ ಭಾವಪೂರ್ಣ ನಮನಗಳು ಸಲ್ಲಿಸಲಾಯಿತು.
