Saturday, June 27, 2026
Saturday, June 27, 2026

ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟಕ್ರಮ : ಬಿ.ನಿಖಿಲ್

Date:

ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಣೆ, ಬಳಕೆ ಹಾಗೂ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆಯು ಹಲವು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿ, ವ್ಯವಸ್ಥಿತವಾಗಿ ಅನುಷ್ಟಾನಕ್ಕೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಬಿ.ನಿಖಿಲ್‌ ಅವರು ಹೇಳಿದರು.
ಅವರು ಡಿ.ಎ.ಆರ್. ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಾಧಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಜಿಲ್ಲಾ ಪೊಲೀಸ್‌ ವತಿಯಿಂದ ವಿವಿಧ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಕಳೆದ ಆರು ತಿಂಗಳ ಅವಧಿಯಲ್ಲಿ ಸುಮಾರು 25ಲಕ್ಷ ರೂ.ಗಳ ಮೌಲ್ಯದ 59ಕೆ.ಜಿ. ತೂಕದ ಮಾದಕ ವಸ್ತು ಗಾಂಜಾವನ್ನು ಮಾಧ್ಯಮದ ಪ್ರತಿನಿಧಿಗಳ ವೀಕ್ಷಣೆಗೆ ಇರಿಸಿ, ನಂತರ ವಶಪಡಿಸಿಕೊಂಡ ನಿಷೇಧಿತ ವಸ್ತುಗಳನ್ನು ಕಾನೂನುಬದ್ಧವಾಗಿ ಸಾರ್ವಜನಿಕವಾಗಿ ನಾಶಪಡಿಸಲು ಮಾಚೇನಹಳ್ಳಿಯ ಸುಶ್ರುತ ಬಯೋಮೆಡಿಕಲ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸೊಸೈಟಿಗೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹೊರ ಜಿಲ್ಲೆಯ ಕೆಲವು ಮಾದಕ ವಸ್ತುಗಳ ಸಾಗಾಣಿಕೆದಾರರು ನೆರೆಯ ಆಂದ್ರ ಪ್ರದೇಶದ ವಿಜಯನಗರ ಮತ್ತು ಒಡಿಸ್ಸಾದ ಭುವನೇಶ್ವರದಿಂದ ಮೂರನೇ ವ್ಯಕ್ತಿಯ ಮೂಲಕ ಜಿಲ್ಲೆಗೆ ಸರಬರಾಜು ಮಾಡುತ್ತಿದ್ದ 08ಜನರನ್ನು ಇಲ್ಲಿನಿಂದಲೇ ಮಾಹಿತಿ ರವಾನಿಸಿ, ಅವರನ್ನು ಜೈಲಿಗೆ ಕಳುಹಿಸಿಕೊಡಲಾಗಿದ್ದು, ಇಂತಹ ಕುಕೃತ್ಯದಲ್ಲಿ ತೊಡಗಿರುವ ಇನ್ನಷ್ಟು ವ್ಯಕ್ತಿಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಮಾದಕ ವಸ್ತುಗಳ ಬಳಕೆ ಮತ್ತು ಸಾಗಾಣಿಕೆಯಂತಹ ಕಾರ್ಯದಲ್ಲಿ 18-30ವಯೋಮಾನದ ಹದಿಹರೆಯದ ಯುವಕರೆ ಹೆಚ್ಚಿನ ಸಂಖ್ಯೆಯನ್ನು ಕಂಡುಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದ ಅವರು, ಇದರ ನಿಯಂತ್ರಣಕ್ಕಾಗಿ ಜಿಲ್ಲೆಯ ಆಯ್ದ 21 ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯ ಸಹಕಾರದೊಂದಿಗೆ 484 ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ತಪಾಸಿಸಲಾಗಿ, ಅದರಲ್ಲಿ ಗಾಂಜಾ ಸೇವಿಸಿದ ಮೂರು ವಿದ್ಯಾರ್ಥಿಗಳನ್ನು ಗುರುತಿಸಿ ಆಪ್ತ ಸಮಾಲೋಚನೆ ನಡೆಸಿ, ಗಾಂಜಾ ಸೇವನೆಯ ವಿರುದ್ಧ ಕೈಗೊಳ್ಳಲಾಗುವ ಕಾನೂನು ಕ್ರಮ ಹಾಗೂ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಗಿದೆ. ಅಲ್ಲದೆ ಅವರ ಪೋಷಕರ ಗಮನಕ್ಕೆ ತರಲಾಗಿದೆ. ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಸೇವನೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜು, ಹಾಸ್ಟೆಲ್‌ ಮತ್ತಿತರ ಕಡೆಗಳಲ್ಲಿ ಇಂತಹ ಇನ್ನಷ್ಟು ಕಾರ್ಯಾಚರಣೆ ನಡೆಸಲಾಗುವುದು ಎಂದ ಅವರು, ವ್ಯಸನಿಗಳಿಗೆ, ಮಾರಾಟಗಾರರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಜೀವನ ಸುಧಾರಣೆಯೂ ಆಗಬೇಕಾದ ನಿಟ್ಟಿನಲ್ಲಿಯೂ ಪೊಲೀಸ್‌ ಇಲಾಖೆ ಕಾರ್ಯನಿರ್ವಹಿಸಲಿದೆ. ಸಮಾಜದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವ್ಯಾಪಕ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯತ್ತ ಜನರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ನಶೆಮುಕ್ತ ಶಿವಮೊಗ್ಗ ಎಂಬ ಪರಿಕಲ್ಪನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಅಲ್ಲದೇ ವರ್ಷಪೂರ್ತಿ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮಗಳು, ತಪಾಸಣೆ ಮತ್ತು ದೂರು ಸಲ್ಲಿಕೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ನಿರಂತರ ದಾಳಿ ಮತ್ತು ತಪಾಸಣೆ ಕಾರ್ಯಗಳನ್ನು ಮುಂದುವರೆಸಲಾಗುತ್ತಿದ್ದು, ಅಕ್ರಮವಾಗಿ ಮಾದಕ ವಸ್ತುಗಳ ಸಾಗಾಟ ಮಾಡುವವರ ಮೇಲೆ ದಾಳಿ ನಡೆಸಿ, ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು. ವಿಶೇಷವಾಗಿ ಕಾಡಂಚಿನ ಗ್ರಾಮಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ, ಜನರಲ್ಲಿ ಮಾದಕ ವಸ್ತುಗಳ ಬಳಕೆ ಕುರಿತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಡ್ರಗ್ ಪೆಡ್ಲರ್‌ಗಳನ್ನು ಮತ್ತು ಅವರ ಜಾಲವನ್ನು ಪತ್ತೆ ಹಚ್ಚಲು ವಿಶೇಷ ತಾಂತ್ರಿಕ ಮತ್ತು ಸೈಬರ್ ತನಿಖೆಯನ್ನು ನಡೆಸಲಾಗುತ್ತದೆ. ಅಗತ್ಯವಿರುವಲ್ಲಿ ಡ್ರೋಣ್‌ ಕ್ಯಾಮರಾಗಳ ಕಣ್ಗಾವಲನ್ನು ಇರಿಸಲಾಗುತ್ತಿದೆ. ಸಾರ್ವಜನಿಕರು ಸುಲಭವಾಗಿ ಮಾಹಿತಿ ನೀಡಲು ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿರಿಸುವ ಭರವಸೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ದಿನೇ ದಿನೇ ತೀವ್ರವಾಗುತ್ತಿರುವ ಮಾದಕ ವಸ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದೆ. ಅದಕ್ಕಾಗಿ ಪಬ್ಲಿಕ್‌ಐ ಎಂಬ ವಾಟ್ಸಾಪ್‌ ಸೇವೆಯನ್ನು ಜಾರಿಗೊಳಿಸಲಾಗಿದೆ. ಮೊ.ನಂ.8277982900 ಸಂಖ್ಯೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯ ವಾಟ್ಸಾಪ್ ಸಂಖ್ಯೆಗೆ ಮಾದಕ ವಸ್ತು ಸೇವನೆ, ಮಾರಾಟ ಅಥವಾ ಸಾಗಾಟ ಮಾಡುವವರ ಬಗ್ಗೆ ನೇರವಾಗಿ ಮಾಹಿತಿ ಹಂಚಿಕೊಳ್ಳಬಹುದು. ಮಾಹಿತಿದಾರರ ವಿವರಗಳನ್ನು ಪೊಲೀಸ್ ಇಲಾಖೆ ಸಂಪೂರ್ಣ ಗೌಪ್ಯವಾಗಿಟ್ಟುಕೊಳ್ಳಲಿದೆ ಎಂದರು.
ಇತ್ತೀಚಿನ 6ತಿಂಗಳಲ್ಲಿ 31ಗಾಂಜಾ ಅಮಾನತ್ತು ಪ್ರಕರಣಗಳನ್ನು ದಾಖಲಿಸಲಾಗಿದೆ.64ಆರೋಪಿಗಳ ವಿರುದ್ಧ ಅಮಾನತ್ತು ಪ್ರಕರಣ ದಾಖಲಿಸಲಾಗಿದೆ. 1426 ವ್ಯಕ್ತಿಗಳಿಗೆ ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಿ, 385 ವ್ಯಕ್ತಿಗಳು ಗಾಂಜಾ ಸೇವಿಸಿರುವುದನ್ನು ಖಚಿತಪಡಿಸಲಾಗಿದ್ದು, 349ಪ್ರಕರಣಗಳನ್ನು ದಾಖಲಿಸಲಾಗಿದೆ. ಅದರಲ್ಲೂ ವಿಶೇಷವಾಗಿ 352 ಮಂದಿ ಆಪ್ತ ಸಮಾಲೋಚನೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಪ್ರಕರಣಗಳಲ್ಲಿ ಭದ್ರಾವತಿ ಮತ್ತು ಶಿವಮೊಗ್ಗದ ಆಯ್ದ ಸ್ಥಳಗಳನ್ನು ಕೇಂದ್ರೀಕರಿಸಲಾಗಿರುವುದು ವಿಶೇಷವಾಗಿದೆ. ಕಾರ್ಯಾಚರಣೆಯಲ್ಲಿ 116 ಆರೋಪಿಗಳನ್ನು ಗುರುತಿಸಿ ಅವರಿಗೆ ಅರಿವು ಮೂಡಿಸಲಾಗಿದೆ ಅವರಲ್ಲಿ ಸುಮಾರು 54ಮಂದಿ ವ್ಯಸನಮುಕ್ತರಾಗಿ, ಸಮಾಜದ ಮುಖ್ಯವಾಹಿನಿಗೆ ಬಂದಿರುವುದು ವಿಶೇಷವಾಗಿದೆ. ಶಾಲೆಗಳಲ್ಲಿ 396 ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, 26000ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಕಾರ್ಯಗತಗೊಳಿಸಿದ ಎನ್.ಡಿ.ಪಿ.ಎಸ್. ವಾರೆಂಟ್‌ಗಳಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ 102 ವ್ಯಕ್ತಿಗಳನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ ಸೇರಿದಂತೆ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶ್ರೀ ಕೆಂಪೇಗೌಡರು ದೂರದೃಷ್ಟಿಯಿಂದ ನಾಡನ್ನು‌ ಕಟ್ಟಿ ಮಾದರಿಯಾಗಿದ್ದಾರೆ : ಬಿ.ವೈ.ರಾಘವೇಂದ್ರ

B.Y. Raghavendra ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ...

Samanvaya Trust ವಿ.ಚಂದ್ರಕಲಾ ಅವರಿಗೆ ಸಮನ್ವಯ ಪರಿಸರ ಕುಟುಂಬ ಪ್ರಶಸ್ತಿ

Samanvaya Trust ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವಿನೋಬನಗರ ನಿವಾಸಿ...