IAS Hemanth N ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯದ ಸೂಚನೆಯಂತೆ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಎಂ-ಜನ್ ಮನ್ ಹಾಗೂ ಡಿಎ-ಜೆಜಿಯುಎ ಯೋಜನೆಗಳ ಅಡಿಯ “ಜನ್ ಭಾಗೀದಾರಿ ಎಲ್ಲರಿಗಿಂತ ದೂರ, ಎಲ್ಲರಿಗಿಂತ ಮೊದಲು” ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಅಭಿಯಾನವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಜಿ.ಪಂ. ಸಿಇಓ ಎನ್.ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ 18 ರಂದು ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳಿಂದ ಉದ್ಘಾಟನೆಗೊಂಡಿದ್ದ ಈ ವಿಶೇಷ ಅಭಿಯಾನದ ಸಮಾರೋಪ ಸಮಾರಂಭವು ಮೇ 25 ರಂದು ಶಿವಮೊಗ್ಗ ತಾಲ್ಲೂಕಿನ ಸದಾಶಿವಪುರ ಗ್ರಾಮದಲ್ಲಿ ಜರುಗಿತು. ಜಿಲ್ಲೆಯ ವಿರುಪಿನಕೊಪ್ಪ ಹಾಗೂ ಸದಾಶಿವಪುರ ಗ್ರಾಮಗಳಲ್ಲಿ ಈ ಅಭಿಯಾನವನ್ನು ಸಕ್ರಿಯವಾಗಿ ನಡೆಸಲಾಗಿತ್ತು.
17 ಇಲಾಖೆಗಳ ಸಮನ್ವಯದೊಂದಿಗೆ ಜಾಗೃತಿ:
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರಧಾನ ಮಂತ್ರಿ ಜನಜಾತಿಯ ಉನ್ನತ ಗ್ರಾಮ ಅಭಿಯಾನ ಯೋಜನೆಯಡಿ ಒದಗಿಸಲಾಗುವ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಬುಡಕಟ್ಟು ಬಹುಪಯೋಗಿ ಮಾರ್ಕೆಟಿಂಗ್ ಕೇಂದ್ರಗಳು, ಆಶ್ರಮ ಶಾಲೆಗಳು, ವಿದ್ಯಾರ್ಥಿನಿಲಯಗಳು ಹಾಗೂ ಬುಡಕಟ್ಟು ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆ, ಕೌನ್ಸಲಿಂಗ್ ಬೆಂಬಲ, ಮತ್ತು ಅರಣ್ಯ ಹಕ್ಕು ಕಾಯ್ದೆ-2006 ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹದಿನೇಳು ವಿವಿಧ ಇಲಾಖೆಗಳ ಯೋಜನೆಗಳನ್ನು ತಲುಪಿಸುವ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಿದ್ದಾರೆ.
IAS Hemanth N ಅಭಿಯಾನದ ಅಂಗವಾಗಿ ಬುಡಕಟ್ಟು ಸಮುದಾಯದ ಜನರಿಗಾಗಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ, ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲಾತಿಗಳನ್ನು ಒದಗಿಸುವ ಕುರಿತು ಜಾಗೃತಿ ಮೂಡಿಸಲಾಗಿದೆ.
ಬುಡಕಟ್ಟು ಸಮುದಾಯದ ಅಲೆಮಾರಿ ಜನಾಂಗವಾದ ‘ಹಕ್ಕಿಪಿಕ್ಕಿ’ ಜನರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಿವಮೊಗ್ಗ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಕರೆ ನೀಡಿದ್ದು, ಸಮುದಾಯದ ಯುವಕರು ಉನ್ನತ ಶಿಕ್ಷಣ ಪಡೆದರೆ ದೇಶ-ವಿದೇಶಗಳ ಪ್ರವಾಸ ಕೈಗೊಳ್ಳುವಾಗ ಹಾಗೂ ವ್ಯಾಪಾರ ವಹಿವಾಟು ನಡೆಸುವ ಸಂದರ್ಭದಲ್ಲಿ ಯಾವುದೇ ಅಡೆತಡೆಗಳು ಎದುರಾಗುವುದಿಲ್ಲ ಎಂದು ಅವರು ಸಭೆಗೆ ವಿವರಿಸಿದ್ದಾರೆ.
ಈ ವಿಶೇಷ ಅಭಿಯಾನದ ಮೂಲಕ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಕುರಿತು ಬುಡಕಟ್ಟು ಜನಾಂಗದವರಿಗೆ ಸಮಗ್ರ ಮಾಹಿತಿ ನೀಡಿ, ವಿವಿಧ ಯೋಜನೆಗಳಡಿ ಸಲ್ಲಿಕೆಯಾಗಿರುವ ಅರ್ಜಿಗಳ ಫಲಾನುಭವಿಗಳಿಗೆ ಶೀಘ್ರವಾಗಿ ಸೌಲಭ್ಯಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೇಮಂತ್ ಎನ್. ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮೀನುಗಾರಿಕೆ, ಪಂಚಾಯತ್ ರಾಜ್, ಆರೋಗ್ಯ, ಕೌಶಲ್ಯಾಭಿವೃದ್ಧಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದ್ದಾರೆ.
IAS Hemanth ಶಿವಮೊಗ್ಗದಲ್ಲಿ ” ಜನ್ ಭಾಗಿದಾರಿ” ಯಶಸ್ವಿ. 17 ಇಲಾಖೆಗಳ ಸಮನ್ವಯದಿಂದ ಜಾಗೃತಿ ವಿಶೇಷ ಅಭಿಯಾನ- ಎನ್.ಹೇಮಂತ್.
Date:
