ಪ್ರವಾಸ ಮಾಡುವುದರಿಂದ ಹೊಸ ಪ್ರಾಕೃತ್ತಿನ ಸಂಪತ್ತಿನ ಪರಿಚಯ ಆಗುವುದರ ಜತೆಯಲ್ಲಿ ಜೀವನದಲ್ಲಿ ಉತ್ಸಾಹ ವೃದ್ಧಿಸುತ್ತದೆ ಎಂದು ಜಿಲ್ಲಾ ಪ್ರವಾಸ ಮತ್ತು ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಆಯೋಜಿಸಿದ್ದ ಭೂತಾನ್ ದೇಶಕ್ಕೆ ಪ್ರವಾಸ ಹೊರಟ 30 ಸದಸ್ಯರ ತಂಡಕ್ಕೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಪ್ರವಾಸದಲ್ಲಿ ಹೊಸಬರನ್ನು ಭೇಟಿಯಾಗುವ ಸಂದರ್ಭ ಬರುತ್ತದೆ. ಹೊಸಬರ ಪರಿಚಯವಾಗುತ್ತದೆ. ಮನಸ್ಸಿಗೆ ಉಲ್ಲಾಸ ಹಾಗೂ ಹೊಸ ಚೈತನ್ಯ ಇರುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ನಗರದ ಜನತೆ ಪ್ರವಾಸದ ಬಗ್ಗೆ ಅತ್ಯಂತ ಹೆಚ್ಚು ಅಭಿರುಚಿ ಹೊಂದಿದ್ದು, ಎಲ್ಲರಿಗೂ ಅನುಕೂಲ ಆಗುವಂತಹ ಕಾರ್ಯಕ್ರಮ ಆಯೋಜನೆ ಮಾಡಲು ಈಗಾಗಲೇ ಹಲವು ಯೋಜನೆಗಳನ್ನು ನಮ್ಮ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪ್ರಾರಂಭಿಸಿದ್ದು, ಶ್ರೀಲಂಕ ಪ್ರವಾಸ ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ತಿಂಗಳು ಭೂತಾನ್ ದೇಶಕ್ಕೆ ಮೂವತ್ತು ಸದಸ್ಯರ ತಂಡ ಹೊರಟಿದೆ. ಮುಂದಿನ ದಿನಗಳಲ್ಲಿ ಅಂಡಮಾನ್ ಪ್ರವಾಸ ಮತ್ತು ಇನ್ನೂ ಅನೇಕ ದೇಶಗಳಿಗೆ ಪ್ರವಾಸ ಕೈಗೊಳ್ಳಲು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿದರು.
ಸಹ ಕಾರ್ಯದರ್ಶಿ ಅ.ನಾ.ವಿಜಯೇಂದ್ರ ಮಾತನಾಡಿ, ಎಲ್ಲರಿಗೂ ಪ್ರವಾಸ ಮಾಡುವ ಹಂಬಲ ಇರುತ್ತದೆ. ಆದರೆ ದುಬಾರಿ ಹಣದ ಕಾರಣಕ್ಕೆ ಪ್ರವಾಸ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ. ಗೊತ್ತಿಲ್ಲದ ಭಾಷೆ, ಅಲ್ಲಿಯ ಆಚಾರ ವಿಚಾರಗಳು, ಕಾನೂನು ಬೇರೆ. ಆದ್ದರಿಂದ ಯಾವುದೇ ಹೆಚ್ಚಿನ ಲಾಭಾಂಶ ಇಲ್ಲದೆ ಅತ್ಯಂತ ಕಡಿಮೆ ವೆಚ್ಚದಲ್ಲಿ, ಉತ್ತಮ ಸೌಲಭ್ಯ ಹಾಗೂ ಸ್ನೇಹಮಯ ನುರಿತ ತಂಡ ಹೊಂದಿದ ಎಸ್ಜಿಎಸ್ ಟೂರ್ಸ್ ನಮ್ಮೊಂದಿಗೆ ಕೈ ಜೋಡಿಸಿದ್ದು, ಅವರ ಸಹಕಾರದಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.
ನಿರ್ದೇಶಕ ಧ್ವಜ ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ತರುಣೋದಯ ಘಟಕದ ಚೇರ್ಮನ್ ವಾಗೇಶ್, ಮಲ್ಲಿಕಾರ್ಜುನ್ ಕಾನೂರು, ರವೀಂದ್ರ, ಲಕ್ಷ್ಮೀ, ದಿಲೀಪ್ ನಾಡಿಗ್, ಡಾ. ಧನಂಜಯ, ಜಿ.ಎನ್.ಎನ್.ಮೂರ್ತಿ, ಎನ್.ರಾಜು, ರವಿಕುಮಾರ್, ಶೋಭಾ, ಸುಮತಿ, ಜ್ಯೋತಿ, ಉಷಾ, ನಾಗಾರ್ಜುನ್, ಸಿಂಧು ಇತರರಿದ್ದರು.
