Karnataka Urdu Academy ಕರ್ನಾಟಕ ಉರ್ದು ಅಕಾಡೆಮಿಯ ವತಿಯಿಂದ ಬೆಂಗಳೂರು ಕೆ.ಎಂ.ಡಿ.ಸಿ ಭವನದಲ್ಲಿ ಉರ್ದು ಸಾಹಿತ್ಯಕ್ಕೆ ಸಹಾಯಹಸ್ತ ನೀಡಿದ ಸಾಹಿತಿಗಳು, ಕವಿ, ಲೇಖಕರು ಮತ್ತು ಪತ್ರಕರ್ತರನ್ನು ಗೌರವಿಸುವ ಪ್ರಶಸ್ತಿ ವಿತರಣಾ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಆಜ್ ಕಾ ಇನ್ಕ್ವಿಲಾಬ್ ದಿನಪತ್ರಿಕೆಯ ಸಂಪಾದಕ ಮುದಸ್ಸಿರ್ ಅಹ್ಮದ್ ಮತ್ತು ದಾವಣಗೆರೆಯ ವರದಿಗಾರ ಅಲ್ತಾಫ್ ರಿಜ್ವಿ ಅವರನ್ನು ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು.
ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಯು ನಿಸಾರ್ ಅಹ್ಮದ್ ಮುಖ್ಯ ಅತಿಥಿಯಾಗಿ ಮಾತನಾಡಿ, “ಕರ್ನಾಟಕ ಉರ್ದು ಅಕಾಡೆಮಿ ಕಳೆದ ಒಂದು ವರ್ಷದ ಹಿಂದೆ ಪುನಶ್ಚೇತನಗೊಂಡಿದ್ದು, ನಿರಂತರ ಸೇವೆಗಳನ್ನು ಒದಗಿಸುತ್ತಿದ್ದು, ಇದು ಶ್ಲಾಘನೀಯವಾಗಿದೆ. ಉರ್ದು ಅಕಾಡೆಮಿ, ಕೆ.ಎಂ.ಡಿ.ಸಿ ಮತ್ತು ಅಲ್ಪಸಂಖ್ಯಾತ ಆಯೋಗ ಒಟ್ಟಾಗಿ ಸಮುದಾಯದ ಅಭಿವೃದ್ಧಿಗೆ ಹಾಗೂ ಯುವಕರಿಗೆ ಉದ್ಯೋಗ ಅವಕಾಶ ಒದಗಿಸಲು ಕಾರ್ಯನಿರ್ವಹಿಸುತ್ತಿವೆ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಂ.ಎಲ್.ಸಿ ಬಿಲ್ಕೀಸ್ ಬಾನು ಅವರು ಮಾತನಾಡಿ, “ಉರ್ದು ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ. ಇದರಿಂದ ಉರ್ದು ಭಾಷೆಯ ಪ್ರಚಾರ-ಪ್ರಸಾರ ತಗ್ಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಿಹೇಳಿದರು.
ಮುಖ್ಯಮಂತ್ರಿ ಸಲಹೆಗಾರ ನಸೀರ್ ಅಹ್ಮದ್ ಅವರು ಮಾತನಾಡಿ, “ಉರ್ದು ಒಂದು ಬದುಕಿರುವ ಭಾಷೆಯಾಗಿದ್ದು, ವಿಶ್ವದ ಅನೇಕ ದೇಶಗಳಲ್ಲಿ ಮಾತನಾಡಲಾಗುತ್ತದೆ. ಆದರೆ, ಕರ್ನಾಟಕದಲ್ಲಿ ಉರ್ದು ಶಾಲೆಗಳ ಸಂಖ್ಯೆ 12,000ರಿಂದ 4,000ಕ್ಕೆ ಇಳಿದಿರುವುದು ವಿಷಾದನೀಯ ಸಂಗತಿಯಾಗಿದೆ. ಉರ್ದು ಅಕಾಡೆಮಿಯು ಉರ್ದು ಮದರಸಾಗಳ ಸ್ಥಿತಿಗತಿಗಳ ಅಧ್ಯಯನ ಮಾಡಬೇಕಿದೆ” ಎಂದು ಸಲಹೆ ನೀಡಿದರು.
ಕರ್ನಾಟಕ ಉರ್ದು ಅಕಾಡೆಮಿಯ ಅಧ್ಯಕ್ಷ ಮೌಲಾನಾ ಕಾಜಿ ಮೊಹಮ್ಮದ್ ಅಲಿ ಅವರು ಸ್ವಾಗತ ಭಾಷಣದಲ್ಲಿ, “ಅಕಾಡೆಮಿ ಸೀಮಿತ ಸಂಪತ್ತು ಹೊಂದಿದ್ದರೂ ಯಶಸ್ವಿಯಾಗಿ ಉರ್ದು ಸೇವಕರನ್ನು ಗೌರವಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಪುರಸ್ಕೃತ ವ್ಯಕ್ತಿಗಳನ್ನು ಗೌರವಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಹ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಲಾಗುವುದು” ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಜೊತೆಗೆ, ಕರ್ನಾಟಕ ಉರ್ದು ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗಳು ಮತ್ತು ಇತರ ಸನ್ಮಾನಗಳನ್ನು ಹಂಚಲಾಯಿತು.
ಕಾರ್ಯಕ್ರಮದ ಆರಂಭ ಮುನೀರ್ ಅಹ್ಮದ್ ಜಾಮಿ ಅವರ ನಾತ್ ಗಾಯನದಿಂದ ಜರುಗಿತು. ನಿರೂಪಣೆಯನ್ನು ಅಕಾಡೆಮಿಯ ಸದಸ್ಯ ಅಜಂ ಶಾಹಿದ್ ನಡೆಸಿದರು. ಪ್ರಶಸ್ತಿ ಪ್ರಕಟಣೆಯನ್ನು ಅಜೀಮ್ ಉದ್ದೀನ್ ಕಿನಿಗಲ್ ಮತ್ತು ಶರೀಫ್ ಅಹ್ಮದ್ ಶರೀಫ್ ಮಾಡಿದರು, ಡಾ. ದಾವೂದ್ ಮೊಹ್ಸಿನ್ ಧನ್ಯವಾದ ವ್ಯಕ್ತಪಡಿಸಿದರು.