ರಾಜ್ಯದಲ್ಲಿ ಗೋಕಳ್ಳರ ಉಪಟಳ ಹೆಚ್ಚಾಗಿದೆ. ಈ ನಡುವೆ ಬಿಜೆಪಿ ಸರ್ಕಾರ ಗೋವುಗಳ ರಕ್ಷಣೆಗೆ ಒಟ್ಟು 275 ಆಂಬುಲೆನ್ಸ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ.
ಅನಾರೋಗ್ಯ ಪೀಡಿತ ಅಥವಾ ಅಪಘಾತಕ್ಕೆ ಸಿಲುಕಿ ಗಾಯಗೊಂಡ ಗೋವುಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಪ್ರತಿ ತಾಲೂಕಿಗೊಂದರಂತೆ 275 ಸುಸಜ್ಜಿತ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆ ನೀಡುತ್ತವೆ ಎಂದು ಪಶುಸಂಗೋಪನೆ ಸಚಿವ ಪ್ರಭು.ಬಿ.ಚವ್ಹಾಣ್ ಹೇಳಿದ್ದಾರೆ.
“ಪಶು ಸಂಜೀವಿನಿ ಆಂಬುಲೆನ್ಸ್ ಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ರಾಜ್ಯಕ್ಕೆ 275 ಆಂಬುಲೆನ್ಸ್ ನೀಡುತ್ತೇವೆ. ಪಶು ಸಂಜೀವಿನಿ ಆಂಬುಲೆನ್ಸ್ ಗಾಗಿ 1962 ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ಸ್ಥಳಕ್ಕೆ ಬರುತ್ತದೆ” ಎಂದು ಸಚಿವ ತಿಳಿಸಿದ್ದಾರೆ.
ಪ್ರಥಮ ಬಾರಿಗೆ ಪ್ರಾಣಿ ಸಹಾಯವಾಣಿ ಕೇಂದ್ರವನ್ನು ರಾಜ್ಯ ಸರ್ಕಾರ ತೆರೆದಿದೆ. ಪಶುಸಂಗೋಪನಾ ಇಲಾಖೆಗೆ ಸಂಬಂಧಿಸಿದ ಮಾಹಿತಿ, ಇಲಾಖೆ ಅಧಿಕಾರಿಗಳು, ವೈದ್ಯರ ಬಗ್ಗೆ ದೂರು ಸೇರಿದಂತೆ ಹಲವು ಮಾಹಿತಿಯನ್ನು ಕರೆ ಮಾಡಿ ತಿಳಿಸಬಹುದು. ಕಳೆದ 3 ತಿಂಗಳಿನಲ್ಲಿ 30 ಸಾವಿರ ಫೋನ್ ಕರೆಗಳು ಬಂದಿವೆ. ಶೇ.75ರಷ್ಟು ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ ಎಂದು ಸಚಿವರು ಹೇಳಿದ್ದಾರೆ.