Department of Regional Transport ವಾಹನ ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮುಖಾಂತರ ಸುರಕ್ಷಿತ ವಾಹನ ಸಂಚಾರಕ್ಕೆ ಮುಂದಾಗಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕಿ ರಮ್ಯ ಹೇಳಿದರು.
ಚಿಕ್ಕಮಗಳೂರು ತಾಲೂಕಿನ ತೇಗೂರು ಸಮೀಪ ಲೈಫ್ಲೈನ್ಸ್ ಫೀಡ್ಸ್ನಲ್ಲಿ ವಾಹನ ಚಾಲಕರಿಗೆ ಏರ್ಪಡಿಸಿದ್ದ 35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಚಾಲಕರಿಗೆ ಮಾಹಿತಿ ನೀಡಿದರು.
ಅನೇಕ ಅಪಘಾತಗಳು ಮಾನವ ತಪ್ಪುಗಳಿಂದಲೇ ಆಗುತ್ತವೆ. ಇದರಿಂದ ಅಮಾಯಕರು ಜೀವ ಕಳೆದುಕೊಂಡು ಕುಟುಂಬವನ್ನು ಬೀದಿಪಾಲಾಗುತ್ತಿದೆ. ಹೀಗಾಗಿ ಚಾಲಕರು ಅತ್ಯಂತ ಜಾಗರೂಕತೆಯಿಂದ ವಾಹನ ಚಲಾಯಿಸಬೇಕು. ಪ್ರತಿಯೊಂದು ಜೀವ ಮುಖ್ಯ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದರು.
ರಸ್ತೆ ಸುರಕ್ಷತಾ ವಿಚಾರದಲ್ಲಿ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಪ್ರತಿಯೊಬ್ಬರೂ ಆತ್ಮಶೋ ಧನೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಜೀವಕ್ಕೂ ಬೆಲೆಯಿದೆ ಎನ್ನುವ ವಾಸ್ತವವನ್ನು ಅರಿತುಕೊಂಡು ವಾಹನ ಚಲಾವಣೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
Department of Regional Transport ರಸ್ತೆಗಳಲ್ಲಿ ಸಂಚರಿಸುವ ಮುನ್ನವೇ ದಾಖಲೆಗಳನ್ನು ಇರಿಸಬೇಕು. ದಾಖಲೆಗಳಿಲ್ಲದೇ ರಸ್ತೆಗೆ ಬರಕೂಡದು. ಚಾಲನಾ ಪರವಾನಗಿ, ವಾಹನದ ಆರ್ಸಿ, ವಿಮೆ ದಾಖಲೆ ಮತ್ತಿತರ ವಿವರಗಳನ್ನು ಹೊಂದಿರುವುದು ಕಡ್ಡಾಯ ವಾಗಿದ್ದು ಕಾನೂನಿಗಳಿಗೆ ಮಿಗಿಲಾದದ್ದು ಯಾವುದು ಇಲ್ಲ, ಹೀಗಾಗಿ ನಿಯಮಗಳನ್ನು ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನಿಂದ ನಡೆದುಕೊಳ್ಳಬೇಕು ಎಂದರು.
ಇದೇ ವೇಳೆ ರಸ್ತೆ ಸುರಕ್ಷತೆಯ ಮಾಹಿತಿಯುಳ್ಳ ಕೈಪಿಡಿಯನ್ನು ವಿತರಿಸಲಾಯಿತು. ಕಛೇರಿಯ ಪ್ರಥಮ ದರ್ಜೆ ಸಹಾಯಕ ರವಿಕಿರಣ್ ಅವರು ರಸ್ತೆ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗಳಾದ ಲೋಹಿತ್, ಹರೀಶ್, ಸಂತೋಷ್, ಲೈಫ್ಲೈನ್ ಫೀಡ್ಸ್ನ ಕಾಂತರಾಜು, ಸತೀಶ್ ಹಾಜರಿದ್ದರು