Raghavendra Aradhana ಶುದ್ಧವಾದ ಸನ್ಯಾಸ ಧರ್ಮದ ಪಾಲನೆ ಮಾಡಿದವರು ರಾಘವೇಂದ್ರ ಸ್ವಾಮಿಗಳವರು. ಅವರ ಜ್ಞಾನ, ಭಕ್ತಿ ಹಾಗೂ ಅವರಿಗೆ ದೇವರಲ್ಲಿದ್ದ ಭಕ್ತಿ, ಅನುಷ್ಠಾನ ಎಲ್ಲವೂ ಅನುಕರಣೀಯ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಶುಕ್ರವಾರ ಸಂಜೆ ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ಮಠದಲ್ಲಿ ನಡೆಯುತ್ತಿರುವ 28ನೇ ಚಾತುರ್ಮಾಸ್ಯದಲ್ಲಿ ನಡೆದ ವಿದ್ವತ್ ಸಭೆಯಲ್ಲಿ ದಶಮ ಸ್ಕಂದ ಭಾಗವತ ಕುರಿತು ಅವರು ಪ್ರವಚನ ನೀಡಿದರು.
ಭಕ್ತರನ್ನು ಪರಮಾತ್ಮನಲ್ಲಿ ಭಕ್ತಿ ಮಾಡುವಂತೆ ಮಾಡಿ ಉದ್ಧಾರ ಆಗುವಂತೆ ಮಾಡುವವರು ರಾಘವೇಂದ್ರ ಸ್ವಾಮಿಗಳವರು. ರಾಯರ ತಪಸ್ಸು, ಮಹಿಮೆಯನ್ನು ಎಲ್ಲರೂ ತಿಳಿದಿರುತ್ತಾರೆ. ಇದೆಲ್ಲದರ ಹಿಂದೆ ಅವರ ಸಾಧನೆ ಎಷ್ಟಿತ್ತು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಘವೇ0ದ್ರ ಸ್ವಾಮಿಗಳವರ ಗ್ರಂಥಗಳು ಮತ್ತು ಅವರ ಬದುಕು ಎಲ್ಲವೂ ಅಪೂರ್ವಮಯ. ಅಪೌರುಷೇಯ ಗ್ರಂಥಗಳಾದ ವೇದ ಗ್ರಂಥಗಳ ಸಾರ ಸಂಗ್ರಹ ಬೇಕೆಂದರೆ ರಾಯರ ಗ್ರಂಥವನ್ನು ಓದಲೇಬೇಕು. ಸುಧಾ ಗ್ರಂಥಕ್ಕೆ ಪರಿಮಳ ಮತ್ತು ತತ್ವಪ್ರಕಾಶಿಕಾ ಗ್ರಂಥಕ್ಕೆ ಭಾವದೀಪ ಹೀಗೆ ಅನೇಕ ವ್ಯಾಖ್ಯಾನವನ್ನು ರಾಯರು ಬರೆದಿದ್ದಾರೆ. ಎಲ್ಲಿಯೂ ಮೂಲ ಗ್ರಂಥಕ್ಕೆ ಅಪಚಾರ ಆಗದಂತೆ ವ್ಯಾಖ್ಯಾನ ಮಾಡಿದ್ದಾರೆ. ಒಬ್ಬರೇ ಗ್ರಂಥಕಾರರು ಮೂಲ ಗ್ರಂಥ, ಅದರ ಭಾಷ್ಯ, ಟೀಕಾ ಮತ್ತು ಅದರ ಟಿಪ್ಪಣಿಗೆ ವ್ಯಾಖ್ಯಾನ ಮಾಡಿರುವ ಸಾಮರ್ಥ್ಯ ರಾಯರದ್ದು ಎಂದರು.
ಗ್ರಂಥಗಳ ಸೇವೆ ಅನನ್ಯ:
ಪಂಡಿತ ಮುಕ್ಕುಂದಿ ಶ್ರೀಕಾಂತಾಚಾರ್ಯ ಮಾತನಾಡಿ, ಅಭಿನವ ರಾಘವೇಂದ್ರರು ಎನ್ನಿಸಿರುವ ಶ್ರೀ ಸತ್ಯಾತ್ಮ ತೀರ್ಥರ ಸನ್ನಿಧಿಯಲ್ಲಿ ರಾಯರ ಆರಾಧನೆ ನಡೆಯುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾದುದು ಎಂದರು.
ರಾಯರ ಮಹಿಮೆ ಅದು ಅಗಮ್ಯ. ರಾಘವೇಂದ್ರ ಸ್ವಾಮಿಗಳವರು ವಜ್ರದಂತೆ ಹೊಳೆಯುತ್ತಿದ್ದಾರೆ. ಪವಾಡಗಳೇ ರಾಯರ ಮಹಿಮೆ ಅಲ್ಲ. ಶ್ರೀಮದಾಚಾರ್ಯರ ಗ್ರಂಥ ಸೇವೆ ಮಾಡಿರುವುದು ಅತ್ಯಂತ ದೊಡ್ಡದಾದ ಮಹಿಮೆ ಎಂದರು.
Raghavendra Aradhana ಉತ್ತರಾದಿ ಮಠದ ದಿವಾನರಾದ ಶಶಿ ಆಚಾರ್, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಸುಬ್ಬಣ್ಣಾಚಾರ್ಯ ನವರತ್ನ, ಶ್ರೀನಿವಾಸಾಚಾರ್ಯ ನವರತ್ನ, ಪುರುಷೋತ್ತಮಾಚಾರ್ಯ ನವರತ್ನ, ರಘೂತ್ತಮಾಚಾರ್ಯ ಸಂಡೂರು, ಬಾಳಗಾರು ಜಯತೀರ್ಥಾಚಾರ್ಯ, ಕೃಷ್ಣಾಚಾರ್ಯ ರಾಯಚೂರು, ಪ್ರಕಾಶಾಚಾರ್ಯ, ಅನಿಲ್ ರಾಮಧ್ಯಾನಿ, ಗುರುರಾಜ್ ಕಟ್ಟಿ, ವಾದಿರಾಜ ಸಿ.ಪಿ. ಮೊದಲಾದವರಿದ್ದರು.