Sunday, July 26, 2026
Sunday, July 26, 2026

ಅಸ್ಸಾಂನ ಕೃಷಿ ತಾಂತ್ರಿಕತೆ : ಕರ್ನಾಟಕ ನವೋದ್ಯಮ ನೆರವು

Date:

ಕರ್ನಾಟಕದ ಉನ್ನತ ಶಿಕ್ಷಣ ಮತ್ತು ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ (ಎನ್ಇಪಿ-2020) ಹಾಗೂ ಐಟಿ- ಬಿಟಿ, ನವೋದ್ಯಮ ಬೆಳವಣಿಗೆ ಕುರಿತ ವಿಚಾರಗಳನ್ನು ಹಂಚಿಕೊಂಡರು.
ಹಿಮಂತ ಬಿಸ್ವ ಶರ್ಮ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಶ್ವತ್ಥನಾರಾಯಣ ಅವರನ್ನು ಅಸ್ಸಾಂಗೆ ಬಂದು ವಿಚಾರ ವಿನಿಮಯ ಮಾಡಿಕೊಳ್ಳುವಂತೆ ಆಹ್ವಾನಿಸಿದ್ದರು.
ಆ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ತಂಡದೊಂದಿಗೆ ಗುವಾಹಟಿಗೆ ಅಧಿಕೃತವಾಗಿ ಭೇಟಿ ಕೊಟ್ಟಿದ್ದರು.
ಮುಖ್ಯವಾಗಿ, ಹೊಸ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಹೊರಟಾಗ ಎದುರಾದ ಪ್ರಶ್ನೆಗಳು, ಅನುಮಾನಗಳು, ಅವುಗಳಿಗೆ ಉತ್ತರ ಕಂಡುಕೊಳ್ಳಲಾದ ಬಗೆ ಇನ್ನಿತರ ವಿಷಯಗಳನ್ನು ಅವರು ಹಂಚಿಕೊಂಡರು.
ಡಿಸಿಪ್ಲೀನ್ ಕೋರ್ ವಿಷಯಗಳು, ಓಪನ್ ಎಲೆಕ್ಟೀವ್ಸ್, ಮಲ್ಟಿ ಎಂಟ್ರಿ- ಮಲ್ಟಿ ಎಕ್ಸಿಟ್, ರಾಷ್ಟ್ರೀಯ ಕೌಶಲ ಅರ್ಹತಾ ರೂಪುರೇಷೆ (ಎನ್.ಎಸ್.ಕ್ಯು.ಎಫ್)ಗೆ ಅನ್ವಯಿಸಲಾದ ಪಠ್ಯಕ್ರಮ, ಅಧಿಕೃತ ಆನ್ ಲೈನ್ ಕೋರ್ಸ್ ಕುರಿತು ಸಚಿವರು ವಿವರಿಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸೇರಿದಂತೆ ಅಸ್ಸಾಂ ಸರ್ಕಾರದ ಅಧಿಕಾರಿಗಳಿಗೆ ಇದ್ದ ಅನುಮಾನಗಳಿಗೆ ಅವರು ಉತ್ತರಿಸಿದರು.
ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಕಾಗಿ ಕರ್ನಾಟಕದಲ್ಲಿ ಮಾಡಲಾಗಿರುವ ತಾಂತ್ರಿಕ ನೆರವುಗಳ ಕುರಿತು ಗಮನ ಸೆಳೆದ ಅವರು, ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್), ಸ್ಮಾರ್ಟ್ ಕ್ಲ್ಯಾಸ್ ರೂಮ್ ಗಳ ಸ್ಥಾಪನೆ, ಡಿಜಿಟಲ್ ಬೋಧನೆ-ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡಿರುವುದು, ಕಲಿಕಾ ನಿರ್ವಹಣಾ ವ್ಯವಸ್ಥೆ (ಎಲ್ಎಂಎಸ್), ಬೋಧನೆ-ಕಲಿಕೆ ಪ್ರಕ್ರಿಯೆಯ ಮೌಲ್ಯಮಾಪನಕ್ಕೆ ಕೊಡಲಾಗಿರುವ ಒತ್ತು, ಆ ಮೂಲಕ ಕಲಿಕಾ ಸರಪಳಿಯ ಯಾವ ಕೊಂಡಿಯೂ ತಪ್ಪಿಹೋಗದಂತೆ ಹೇಗೆ ಕ್ರಮ ವಹಿಸಲಾಗಿದೆ ಎಂಬ ಬಗ್ಗೆ ತಿಳಿಸಿದರು.

ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣದಲ್ಲಿ ರಾಜ್ಯವು ದೇಶದಲ್ಲೇ ಮೊದಲ ಹೆಜ್ಜೆ ಇರಿಸಿದ್ದು, ಇದು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ರಾಜ್ಯದಿಂದ ಹಾಗೂ ಅಮೆರಿಕ ಪೆನ್ಸಿಲ್ವೇನಿಯಾದ ಮಾಂಟ್ಗೊಮೇರಿ ವಿ.ವಿ.ಯಿಂದ ಟ್ವಿನ್ನಿಂಗ್ ಡಿಪ್ಲೊಮಾ ಪಡೆಯಲು ಅನುವು ಮಾಡಿಕೊಟ್ಟು, ಅವರ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲೇಜು ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಸಮಾವೇಶಗಳು ಹಾಗೂ ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ಪ್ರಶ್ನಾವಳಿಗಳ ಮೂಲಕ ಅನುಮಾನಗಳನ್ನು ಪರಿಹರಿಸಲು ಗಮನ ಕೇಂದ್ರೀಕರಿಸಿದ್ದು ಇತ್ಯಾದಿ ಕುರಿತು ತಿಳಿಸಿದರು.

ಅಸ್ಸಾಂನ ಹೆಚ್ಚಿನ ಜನರು ವ್ಯಾಸಂಗ ಮತ್ತು ಉದ್ಯೋಗಕ್ಕಾಗಿ ಬೆಂಗಳೂರಿನಲ್ಲಿದ್ದಾರೆ.
ಐಟಿ- ಬಿಟಿ, ಕೃಷಿ ತಾಂತ್ರಿಕತೆ
ಕರ್ನಾಟಕವು, ಐಟಿ- ಬಿಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಆ ಬಗ್ಗೆಯೂ ಮುಖ್ಯಮಂತ್ರಿಯವರಿಗೆ ಮಾಹಿತಿ‌ ನೀಡಲಾಯಿತು. ಬೆಂಗಳೂರು ದೇಶದಲ್ಲೇ ನವೋದ್ಯಮಗಳ ತವರು ಎಂದು ಹೆಸರಾಗಿದೆ. ಇದರಲ್ಲಿ ಸಾಕಷ್ಟು ಕಂಪನಿಗಳು ಕೃಷಿ ತಾಂತ್ರಿಕತೆಯಲ್ಲಿ (ಅಗ್ರಿ ಟೆಕ್) ಮುಂಚೂಣಿಯಲ್ಲಿವೆ. ಹೀಗಾಗಿ, ಕೃಷಿ ಪ್ರಧಾನವೂ ಹಾಗೂ ಈಶಾನ್ಯ ರಾಜ್ಯಗಳಲ್ಲೇ ಅತ್ಯಂತ ದೊಡ್ಡದಾದ ಅಸ್ಸಾಂನಲ್ಲಿ ಕೃಷಿ ತಾಂತ್ರಿಕತೆಯನ್ನು ಅಳವಡಿಸಲು ಕರ್ನಾಟಕದ ನವೋದ್ಯಮಗಳು ನೆರವು ನೀಡಬಲ್ಲವು ಎಂಬುದರ ಬಗ್ಗೆಯೂ ಅಶ್ವತ್ಥ ನಾರಾಯಣ ಅವರು ತಿಳಿಸಿದರು.
ರೈತ ಉತ್ಪಾದಕ ಸಂಘ ( ಎಫ್ ಪಿ ಒ) ಗಳ ಪ್ರಗತಿ ಬಗ್ಗೆ ರಾಜ್ಯ ನವೋದ್ಯಮಗಳ ದೂರದರ್ಶಿ ಮಂಡಳಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಅವರು ಮಾಹಿತಿ ನೀಡಿದರು.‌ಕೃಷಿ ಕಲ್ಪ ಯೋಜನೆ ಬಗ್ಗೆಯೂ ಅವರು ಮಾಹಿತಿ ನೀಡಿದರು.
ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಮಂಡಳಿ ಆಯುಕ್ತ ಪಿ. ಪ್ರದೀಪ್, ಐಟಿ/ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್ ಅವರು ಪ್ರಸೆಂಟೇಷನ್ ಮಾಡಿದರು.
ಅಸ್ಸಾಂನ ವಿವಿಧ ಇಲಾಖೆಗಳ ಮಂತ್ರಿಗಳು, ಹಿರಿಯ ಅಧಿಕಾರಿಗಳು ಇದ್ದು ಅವರು ಕೂಡ ಅವರ ಇಲಾಖೆಗಳ ಮಾಹಿತಿಯನ್ನು ವಿನಿಮಯ ಮಾಡಿಕೊಂಡರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prahlad Joshi ಅತ್ಯಂತ ವಿನಮ್ರತೆ ಹಾಗೂ ನಿಷ್ಠೆಯಿಂದೀ ಕರ್ತವ್ಯ ಸ್ವೀಕರಿಸುತ್ತಿದ್ದೇನೆ- ಪ್ರಹ್ಲಾದ ಜೋಷಿ.

Prahlad Joshi ಇಂದು ಭಾರತ ಸರ್ಕಾರದ ಕೇಂದ್ರ ಶಿಕ್ಷಣ ಸಚಿವರಾಗಿ ಶ್ರೀ ಪ್ರಹ್ಲಾದ...

Samarth Ramdas”ಸಾತ್ವಿಕ ಹೃದಯಿ” ಸಮರ್ಥ ರಾಮದಾಸರು. ಲೇ; ಪ್ರಸಾದ್ ಶ್ರೀವತ್ಸ, ದಾವಣಗೆರೆ.

Samarth Ramdas ಜಾಂಬ ಎಂಬ ಪುಟ್ಟ ಹಳ್ಳಿ ಔರಂಗಾಬಾದ್‌ ಜಿಲ್ಲೆಯಲ್ಲಿದೆ. ಅಲ್ಲಿ...

K.S.Eshwarappa ಕನಕರ ಸ್ಥಳಮಾಹಿತಿ ಉತ್ಖನನ ಕಾರ್ಯ ಅರ್ಥಪೂರ್ಣ. ಇಂತಹ ಸಂಶೋಧನೆಗಳಿಗೆ ನನ್ನ ಬೆಂಬಲವಿದೆ – ಕೆ.ಎಸ್.ಈಶ್ವರಪ್ಪ.

K.S.Eshwarappa ಪ್ರಸ್ತುತ ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಕೊರತೆಯಿದೆ. ಇಂತಹಸನ್ನಿವೇಶದಲ್ಲಿ ಇತಿಹಾಸ ಪ್ರಾಧ್ಯಾಪಕ,...

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜಿನಾಮೆ,ಕೇವಲ ನೈತಿಕ ಜವಾಬ್ದಾರಿ ಎತ್ತಿ ಹಿಡಿದಿದೆ ಅಷ್ಟೆ- ವಸಂತಕುಮಾರ್.

Dharmendra Pradhan ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಕೇವಲ ನೈತಿಕತೆಯ ಜವಾಬ್ದಾರಿ ಎತ್ತಿ...