ಪ್ರತಿಯೊಬ್ಬರ ಬದುಕಿನ ಉತ್ತಮ ವಿಚಾರ, ಆದರ್ಶ ಹಾಗೂ ಪ್ರೇರಣೆಯನ್ನು ಕಾರಾಗೃಹ ಬಂಧಿಗಳು ಜೀವನದಲ್ಲಿ ಮೈಗೂಡಿಸಿಕೊಳ್ಳುವುದೇ ವ್ಯಕ್ತಿತ್ವ ವಿಕಸನ ಮೂಲ ಧ್ಯೇಯ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಶ್ರೀಶೈಲ ಎಸ್.ಮೇಟಿ ಹೇಳಿದರು.
ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ವತಿಯಿಂದ ನಗರದ ಕಾರಾಗೃಹದಲ್ಲಿ ಕಾರಾಗೃಹವಾಸಿಗಳಿಗೆ ಏರ್ಪಡಿಸಲಾಗಿದ್ದ ಬಂಧಿಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಗುರುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮನರಂಜನೆ ಎಂಬುದು ವ್ಯಕ್ತಿತ್ವ ವಿಕಸನ ಒಂದು ಭಾಗವಾಗಿದೆ. ಆ ನಿಟ್ಟಿನಲ್ಲಿ ಕಾರಾಗೃಹವಾಸಿಗಳು ತಮ್ಮತನವನ್ನು ಬೆಳೆಸಿಕೊಳ್ಳುತ್ತಾ ವಿಕಸನದಲ್ಲಿ ಭಾಗವಹಿಸಬೇಕು. ಬದುಕಿನಲ್ಲಿ ಉತ್ತಮ ಚಿಂತನೆ, ತಾಳ್ಮೆ ಹಾಗೂ ಶಾಂತಿಯಿಂದ ವ್ಯಕ್ತಿತ್ವ ವಿಕಸನ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ದೇಶ ಹಾಗೂ ನಾಡಿನಲ್ಲಿ ಅನೇಕ ಮಂದಿ ಮಹಾನೀಯರು ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಅಂತಹವರ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸತ್ಪಜೆಯಾಗಿ ಜೀವಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಮನಃಶಾಸ್ತೃದ ಚಿಂತಕ ಫಾದರ್ ವಿನಯ್ ಮಾತನಾಡಿ ಆಕಸ್ಮಿಕ ನಡೆಯುವ ತಪ್ಪುಗಳಿಂದ ಕೆಲವು ಮಂದಿ ಕಾರಾವಾಸಿಗಳಾಗುತ್ತಾರೆ. ಇರುವಷ್ಟು ದಿನಗಳಲ್ಲಿ ಇತರರಿಂದ ಉತ್ತಮ ವ್ಯಕ್ತಿತ್ವವನ್ನು ಪಡೆದುಕೊಳ್ಳ ಬೇಕು. ಬಿಡುಗಡೆ ನಂತರ ಸಾತ್ವಿಕ ಜೀವನ ನಡೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ಸೇವಾ ನಿರ್ದೇಶಕ ಪ್ರದೀಪ್, ಯುವ ನಿರ್ದೇಶಕ ಸಚ್ಚಿನ್, ಜೈಲರ್ ಎಂ.ಕೆ.ನೆಲಧರಿ, ಕಾರಾಗೃಹ ಸಿಬ್ಬಂದಿಗಳು ಹಾಗೂ ಕಾರಾಗೃಹಬಂಧಿಗಳು ಉಪಸ್ಥಿತರಿದ್ದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
