ಶಿವಮೊಗ್ಗ:
ಇಂದಿನ ತಾಂತ್ರಿಕ ಯುಗದ ಸಾಮಾಜಿಕ ಜಾಲತಾಣಗಳಲ್ಲಿ ಬೌದ್ಧಿಕ ಅದಃಪತನ ಎದ್ದುಕಾಣುತ್ತಿದೆ. ಕ್ರಿಯಾಶೀಲತೆ ಮರೆಯಾಗುತ್ತಿದೆ. ಮಾನಸಿಕತೆ ಕುಂದುತ್ತಿದೆ ಎಂದು ಶಿವಮೊಗ್ಗ ಪೊಲೀಸ್ ಉಪ ಅಧೀಕ್ಷಕರಾದ ಬಾಲರಾಜ್ ಅವರು ಹೇಳಿದರು.
ಶಿವಮೊಗ್ಗದ ಮಥುರಾ ಪ್ಯಾರೆಡೈಸ್ನಲ್ಲಿ ತುಂಗಾ ತರಂಗ ದಿನಪತ್ರಿಕೆಯ ವಾರ್ಷಿಕ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡುತ್ತಾ, ಓದುವ ಹವ್ಯಾಸ ಎಲ್ಲಾ ಮನಸ್ಸುಗಳಲ್ಲಿ ಬೆಳೆಯಬೇಕಿದೆ ಎಂದರು.
ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಕುಗ್ಗಿರುವ ಬೌದ್ಧಿಕತೆಯ ನಡುವೆ ತುಂಗಾ ತರಂಗ ದಿನಪತ್ರಿಕೆ ಪ್ರತಿ ವರ್ಷ ವಾರ್ಷಿಕ ವಿಶೇಶಾಂಕ ಕ್ಯಾಲೆಂಡರ್ ಬಿಡುಗಡೆಯಂತಹ ಸಮಾರಂಭಗಳನ್ನು ಆಯೋಜಿಸಿರುವುದು ಸ್ವಾಗತಾರ್ಹ ವಿಷಯ. ಇಂದಿನ ಅವಸರದ ಯುಗದ ಓಟದಲ್ಲಿ ಮನುಷ್ಯ ತನ್ನ ಬದುಕನ್ನೇ ಕಳೆದುಕೊಳ್ಳುತ್ತಿದ್ದಾನೆ. ಒಂದಿಷ್ಟು ಚಿಂತಿಸುವ ವ್ಯವದಾನ ಇಲ್ಲದಿರುವುದು ದುರಂತವೇ ಹೌದು ಎಂದು ಹೇಳಿದರು.
ದೃಶ್ಯ ಮಾಧ್ಯಮಗಳ ಓಟದ ನಡುವೆ ಮುದ್ರಣ ಮಾಧ್ಯಮ ಸೊರಗುತ್ತಿದೆ. ಆದರೆ, ನಿಜವಾಗಿಯೂ ಮುದ್ರಣ ಮಾದ್ಯಮ ಬದುಕನ್ನು ಕಟ್ಟಿಕೊಡುತ್ತದೆ. ಓದುವ ಹವ್ಯಾಸ ಇಂದಿನ ಯುವ ಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದನ್ನು ತಪ್ಪಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರು, ತೆರಿಗೆ ಇಲಾಖೆ ಅಧಿಕಾರಿಗಳಾದ ವೆಂಕಟೇಶ್ವರ ಬಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಂಪಾದಕ ಎಸ್.ಕೆ.ಗಜೇಂದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ತುಂಗಾ ತರಂಗ ಪತ್ರಿಕೆ ಕಳೆದ 12 ವರ್ಷಗಳಿಂದ ನಿರಂತರವಾಗಿ ವಾರ್ಷಿಕ ವಿಶೇಷಾಂಕ, ವಾರ್ಷಿಕ ಕ್ಯಾಲೆಂಡರ್ ಜೊತೆಗೆ ಸಮಗ್ರ ಮಾಹಿತಿಯ ಸಚಿತ್ರ ವರದಿಗಳು, ತನಿಖಾ ವರದಿಗಳನ್ನು ನೀಡುತ್ತಾ, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿದೇಶಗಳಲ್ಲಿಯೂ ಗುರುತಿಸಿಕೊಂಡಿರುವ ತುಂಗಾ ತರಂಗ ಶಿವಮೊಗ್ಗ ಜಿಲ್ಲೆಯಲ್ಲಿ ಮುದ್ರಣಗೊಂಡು ಹಂಚಿಕೆಯಾಗುತ್ತಿದೆ ಇದಕ್ಕೆ ಕಾರಣಕರ್ತರಾದ ಎಲ್ಲಾ ಓದುಗರನ್ನು ಹಾಗೂ ಜಾಹೀರಾತುದಾರರಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್ಸಿಟಿ ಕಂಪನಿಯ ಜನರಲ್ ಮ್ಯಾನೇಜರ್ ಶರತ್, ಶ್ರೀನಿಧಿ ಸಂಸ್ಥೆಯ ವೆಂಕಟೇಶ್ಮೂರ್ತಿ, ಮೆಸ್ಕಾಂ ಇಂಜಿನಿಯರ್ ಜಗದೀಶ್, ಭಾರತೀಯ ಮಾನವ ಹಕ್ಕುಗಳ ಕಮಿಟಿಯ ಕೆ. ನಾಗರಾಜ್, ರಮೇಶ್ ಎಸ್., ಶಾರದಾ ಶೇಷಗಿರಿಗೌಡ, ಹಾಡೋನಹಳ್ಳಿ ಜಗದೀಶ್, ಎಸ್.ಹೆಚ್.ಕೃಷ್ಣಮೂರ್ತಿ, ಶೇಖರಪ್ಪ, ಡಾ.ಅರವಿಂದ್, ಆರುಂಡಿ ಶ್ರೀನಿವಾಸ್ಮೂರ್ತಿ, ಭರತೇಶ್, ಶಿ.ಜು.ಪಾಶ, ಚಂದ್ರಶೇಖರ್, ಸೋಮಶೇಖರ್, ಮೋಹನ್, ಅಭಿನಂದನ್, ಗಣೇಶ್, ಅರುಣ್, ಮಾಲತೇಶ್, ಮಾಲತೇಶ್, ಮಂಜುನಾಥ್, ಶಿಕ್ಷಕಿ ವೀಣಾರಾಣಿ, ಮಲ್ಲಿಕ್, ಉದಯ್, ದರ್ಶನ್, ರವಿ, ಬಿ.ಇ. ಪದವೀಧರ ತಿಮ್ಮೇಶ್, ಉಮೇಶ್, ರಾಕೇಶ್ ಸೋಮಿನಕೊಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.