ಮಳೆ ನಿಂತರೆ ಸಾಕು ಅನ್ನೋ ಮಾತುಗಳು ಎಲ್ಲರ ಬಾಯಲ್ಲಿ ಕೇಳುತ್ತಿದ್ದೇವೆ. ದಕ್ಷಿಣ, ಉತ್ತರ ಒಳನಾಡು ಸೇರಿದಂತೆ ಎಲ್ಲಾ ಭಾಗಗಳಲ್ಲಿ ಕಳೆದ 3 ವಾರಗಳಿಂದ ನಿರಂತರ ಮಳೆ ಆಗುತ್ತಿದೆ. ತೊಳೆದು ಹಾಕಿರೋ ಬಟ್ಟೆ ಒಣಗುತ್ತಿಲ್ಲ.
ಸೂರ್ಯದೇವ ಕೃಪೆ ತೋರಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಿಕೊಳ್ತಿದ್ದಾರೆ. ಇಂದಿನಿಂದ ಮೂರು ದಿನ ರಾಜ್ಯದ 10 ಜಿಲ್ಲೆಗಳಲ್ಲಿ ಮಳೆಯ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ನಿರಂತರ ಮಳೆಯಿಂದಾಗಿ ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿವೆ. ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ವರದಿಗಳು ರಾಜ್ಯದ ಮೂಲೆ ಮೂಲೆಯಿಂದಲೂ ಬರುತ್ತಿವೆ. ಕೆಲವಡೆ ಪ್ರಾಣಹಾನಿ ಸಹ ಸಂಭವಿಸಿವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದೂ ಸಹ ಮೋಡ ಕವಿದ ವಾತಾವರಣ ಇರಲಿದೆ. ಜಡಿ ಮಳೆಯಾಗಲಿದೆ. ಆದ್ದರಿಂದ, ಮನೆಯಿಂದ ಹೊರ ಹೋಗುವ ಮುನ್ನ ಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಕೊಡೆ ಅಥವಾ ರೇನ್ ಕೋಟ್ ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಇಂದು ಸಿಲಿಕಾನ್ ಸಿಟಿಯಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇನ್ನೂ ಮಳೆಯ ಜೊತೆಯಲ್ಲಿ ಚಳಿ ಸಹ ಏರಿಕೆಯಾಗಿದೆ.
