ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇಲಾಖೆಯ ಗೌರವ ಉಳಿಸುವ ರೀತಿ ಸಮರ್ಪಕ ತನಿಖೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಡಿಜಿ ಪಿಎಸ್ ಸಂಧು ಅವರಿಗೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾ. ಹೆಚ್.ಪಿ.ಸಂದೇಶ್ ರವರಿದ್ದ ಏಕಸದಸ್ಯ ಪೀಠ ಸಿಐಡಿ ಡಿಜಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳು, ಪಿಎಸ್ಐ ನೇಮಕಾತಿ ಹಗರಣದಲ್ಲಿ ಹಲವರ ಮೇಲೆ ಆರೋಪಗಳಿವೆ.
ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳಿದ್ದಾರೆ. ಹಾಗಾಗಿ ಸಮರ್ಪಕ ತನಿಖೆ ನಡೆಯುವ ಅವಶ್ಯಕತೆಯಿದೆ. ನಿಮ್ಮ ಇಲಾಖೆಯ ಗೌರವ ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ.ಕೋರ್ಟ್ ಪ್ರಕರಣದ ತನಿಖೆಯ ನಿಗಾ ವಹಿಸಲಿದೆ ಎಂದು ಹೇಳಿದರು.
ಅಲ್ಲದೆ, ಪಿಎಸ್ಐ ನೇಮಕದಲ್ಲೇ ಭ್ರಷ್ಟಾಚಾರ ಗಂಭೀರ ವಿಚಾರ, ತನಿಖೆಯಿಂದ ಸತ್ಯಸಂಗತಿ ಹೊರಬೀಳಬೇಕು. ಇದರ ಹಿಂದೆ ಯಾರೇ ಸಚಿವರಾಗಿರಲೀ, ಯಾವುದೇ ಅಧಿಕಾರಿಗಳಾಗಿರಲೀ ಭಾಗಿಯಾಗಿದ್ದರೆ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಸಿಐಡಿ ಡಿಜಿ ಪಿ.ಎಸ್ ಸಂಧು ಅವರಿಗೆ ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಜು.7ಕ್ಕೆ ತನಿಖಾ ಪ್ರಗತಿ ವರದಿ ಸಲ್ಲಿಸುವಂತೆ ಆದೇಶಿಸಿತು.
ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್ ಮತ್ತು ರಚನಾ ಹನುಮಂತ ಹೈಕೋರ್ಟ್ ಮೊರೆ ಹೋಗಿದ್ದರು.