ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ತೆರಳಿದ್ದ ವೇಳೆ ಅಗ್ನಿಪಥ್ ವಿರುದ್ಧದ ಹೋರಾಟ ಹಿಂಸಾತ್ಮಕ ಸ್ವರೂಪ ಪಡೆದ ಪರಿಣಾಮ ದಿಕ್ಕೆಟ್ಟಿದ್ದ 164 ಮಂದಿ ರಾಜ್ಯದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸು ಕರೆತರಲಾಗಿದೆ.
ರಾಮನಗರ ಮಂಡ್ಯ, ಸೇರಿದಂತೆ ವಿವಿಧ ಜಿಲ್ಲೆಗಳ 164 ಮಂದಿ, ಬೆಂಗಳೂರಿನ ಮಹಾಲಕ್ಷ್ಮೇ ಬಡಾವಣೆಯಲ್ಲಿರುವ ಸಚಿವ ಕೆ. ಗೋಪಾಲಯ್ಯ ಕಚೇರಿಗೆ ಆಗಮಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಗೋಪಾಲಯ್ಯ ಅವರು ಪ್ರವಾಸಿಗರ ಯೋಗಕ್ಷೇಮ ವಿಚಾರಿಸಿ ಬಸ್ಸು ವ್ಯವಸ್ಥೆ ಮಾಡಿ ಮನೆಗಳಿಗೆ ಕಳುಹಿಸಿಕೊಟ್ಟರು.
ಪ್ರವಾಸಿಗರು ಕಾಶಿಗೆ ತೆರಳಿದ್ದ ವೇಳೆ ಆ ಭಾಗದಲ್ಲಿ ಅಗ್ನಿಪಥ್ ವಿರುದ್ಧದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿತ್ತು. ಹೀಗಾಗಿ ತಮ್ಮನ್ನು ಸುರಕ್ಷಿತವಾಗಿ ಕರೆ ತರುವಂತೆ ಪ್ರವಾಸಿಗರು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರಿಗೆ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ.
ಗೋಪಾಲಯ್ಯ ಅವರು ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ ಮೂರು ಪ್ರತ್ಯೇಕ ಬಸ್ಸುಗಳ ವ್ಯವಸ್ಥೆ ಮಾಡಿ ವಾಪಸು ಕರೆತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೋಪಾಲಯ್ಯ, ಪ್ರತಿಭಟನಾಕಾರರು ರೈಲುಗಳಿಗೆ ಬೆಂಕಿ ಹಚ್ಚುತ್ತಿದ್ದರಿಂದ ಪ್ರವಾಸಿಗರು ಅಲ್ಲಿಂದ ವಾಪಸು ಬರಲು ಆಗಿರಲಿಲ್ಲ. ಇವರೆಲ್ಲರೂ ರೈಲು ಪ್ರಯಾಣಕ್ಕಾಗಿ ತಲಾ 800 ರು. ಟಿಕೆಟ್ ಬುಕ್ ಮಾಡಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಹಾಯ ಕೋರಿದ್ದರಿಂದ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು ಎಂದು ಹೇಳಿದರು.