ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸೋಮವಾರ ಬುದ್ಧ ಪೂರ್ಣಿಮಾ ದಿನದಂದು ನೇಪಾಳಕ್ಕೆ ಭೇಟಿ ನೀಡಿದ್ದಾರೆ.
ನೇಪಾಳ ಪ್ರಧಾನಿ ಶೇರ್ ಬಹಾದೂರ್ ದೇವುಬಾ ಅವರಿಂದ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಇಬ್ಬರೂ ಕೂಡ ಲುಂಬಿನಿಯಲ್ಲಿರವ ಮಾಯಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಲುಂಬಿನಿ ಮಠದ ಪ್ರದೇಶದಲ್ಲಿ ಬೌದ್ಧ ಸಾಂಸ್ಕೃತಿ ಹಾಗೂ ಪಾರಂಪರಿಕ ಕೇಂದ್ರವೊಂದಕ್ಕೆ ಮಾನ್ಯ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಅಡಿಗಲ್ಲು ಹಾಕಿದ್ದಾರೆ. ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಸಿದ್ಧಾರ್ಥನಾಗಿ ಇದೇ ಲುಂಬಿನಿ ಪ್ರದೇಶದಲ್ಲಿ ಜನಿಸಿದ್ದು. ಈಗ ಈ ಐತಿಹಾಸಿಕ ಸ್ಥಳದಲ್ಲಿ ಭಾರತ ಮತ್ತು ನೇಪಾಳ ಪ್ರಧಾನಿಗಳಿಬ್ಬರು ಚೀನಾಗೆ ಹೊಸ ಸಂದೇಶ ರವಾನಿಸಿದಂತಿದೆ.
ಭಾರತ ಹಾಗೂ ನೇಪಾಳ ಪ್ರಧಾನಿಗಳು ಭೇಟಿಯಾದರೆ ಚೀನಾ ಯಾಕೆ ತಲೆಕೆಡಿಸಿಕೊಳ್ಳಬೇಕು ಎನಿಸಬಹುದು. ಕಳೆದ ಹಲವು ವರ್ಷಗಳಿಂದ ಭಾರತದ ಜೊತೆ ನೇಪಾಳ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುತ್ತಿದೆ. ಹಿಂದಿನ ಪ್ರಧಾನಿ ಕೆಪಿ ಶರ್ಮಾ ಓಲಿ ಸರ ನರೇಂದ್ರ ಮೋದಿಕಾರದ ಅವಧಿಯಲ್ಲಿ 2 ದೇಶಗಳ ಸ್ನೇಹಕ್ಕೆ ಆಗಿದ್ದ ಹಾನಿಯನ್ನು ಶೇರ್ ಬಹಾದೂರ್ ದೇವುಬಾ ಅವಧಿಯಲ್ಲಿ ಸರಿಪಡಿಸುವ ಕೆಲಸ ಆಗುತ್ತಿದೆ.
ಇಷ್ಟೇ ಆಗಿದ್ದರೆ ಚೀನಾ ಯೋಚಿಸುವ ಅಗತ್ಯ ಇರಲಿಲ್ಲ. ಭಾರತದೊಂದಿಗೆ ಸ್ನೇಹ ಸಂಪಾದನೆ ಮಾಡುವ ಜೊತೆ ಜೊತೆಗೆ ಚೀನಾದಿಂದಲೂ ನೇಪಾಳ ದೂರವಾಗುತ್ತಿರುವುದು ಗಮನಾರ್ಹ. ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ನೇಪಾಳಕ್ಕೆ ಒಂದು ಪಾಠವಾಗಿದೆ. ನೆರವು ನೀಡುವ ಹೆಸರಿನಲ್ಲಿ ಸಾಲ ನೀಡಿ ಶೂಲಕ್ಕೆ ಸಿಲುಕಿಸುವ ಚೀನಾದ ತಂತ್ರಗಾರಿಕೆಯನ್ನು ನೇಪಾಳ ಸಕಾಲಕ್ಕೆ ಅರ್ಥ ಮಾಡಿಕೊಂಡಿದೆ.ಆದ್ದರಿಂದ, ಚೀನಾದ ಪ್ರತಿಷ್ಠಿತ ಮತ್ತು ಮಹತ್ವಾಕಾಂಕ್ಷಿ ಬಿಆರ್ಐ ಯೋಜನೆಯನ್ನು ನೇಪಾಳ ಸ್ಥಗಿತಗೊಳಿಸಿ ಸುಮ್ಮನಾಗಿದೆ. ನೇಪಾಳವನ್ನು ಹಿಡಿದಿಟ್ಟುಕೊಂಡು ಭಾರತವನ್ನು ಹಣಿಯುವ ದುಸ್ಸಾಹಸಕ್ಕೆ ಚೀನಾ ಕೈಹಾಕುವುದು ಕಷ್ಟವಾಗಿದೆ ಎಂದು ತಜ್ಞರು ತಿಳಿಸುತ್ತಾರೆ