ನಾಗರಿಕರನ್ನು ಸುರಕ್ಷಿತವಾಗಿ ಯುದ್ಧಭೂಮಿಯಿಂದ ಹೊರ ಕರೆತರಬೇಕಾಗಿದೆ. ಇದಕ್ಕಾಗಿ ಕದನವಿರಾಮ ಘೋಷಣೆ ಅಗತ್ಯ. ಆದ್ದರಿಂದ ರಷ್ಯಾ ಮತ್ತು ಉಕ್ರೇನ್ ಅಧ್ಯಕ್ಷರ ಭೇಟಿಗೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟನಿಯೋ ಗುಟೆರೆಸ್ ಅವರು ಮುಂದಾಗಿದ್ದಾರೆ.
ಏ.26ಕ್ಕೆ ಮಾಸ್ಕೊಗೆ ಭೇಟಿ ನೀಡಲಿದ್ದಾರೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸರ್ಗೆ ಲಾವೋವ್ ಜೊತೆಗೆ ಮಾತುಕತೆ ನಡೆಸುವರು. ಉಕ್ರೇನ್ ಮೇಲೆ ರಷ್ಯಾದ ಆಲ್ ಔಟ್ ಸಮರವನ್ನು ಕೊನೆಗೊಳಿಸುವುದಕ್ಕೆ ಈ ಪ್ರಯತ್ನ ಒಂದು ಮೆಟ್ಟಿಲಾದೀತು ಎಂಬ ಆಶಾವಾದವನ್ನು ವಿಶ್ವಸಂಸ್ಥೆಯ ಮೂಲಗಳು ತಿಳಿಸಿವೆ.
ಏ.28ರಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ವಿದೇಶಾಂಗ ಸಚಿವ ಡಿಮಿಟ್ರೋ ಕುಲೇಬಾ ಜೊತೆಗೆ ಮಾತುಕತೆ ನಡೆಸುವರು. ಇಲ್ಲಿ, ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳ ಪ್ರತಿನಿಧಿಗಳಿಗೆ ಮಾನವೀಯ ನೆರವು ವಿಸ್ತರಿಸುವುದಕ್ಕೆ ಸೂಚನೆ ನೀಡಲಿದ್ದಾರೆ.
ಪೂರ್ವ ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ ರಷ್ಯಾ ಪಡೆಗೆ ಅಲ್ಲಿಂದ ಪ್ರತಿರೋಧ ಹೆಚ್ಚಾಗಿದೆ. ಆದ್ದರಿಂದ ಡೊನ್ಬಾಸ್ ಪ್ರಾಂತ್ಯ ವಶಪಡಿಸುವ ಅದರ ಇರಾದೆ ವಿಳಂಬವಾಗಿದೆ. ಶನಿವಾರ ಈ ದಾಳಿ ತೀವ್ರಗೊಂಡಿದೆ ಎಂದು ಉಕ್ರೇನ್ ಮಾಧ್ಯಮಗಳು ವರದಿ ಮಾಡಿವೆ.