ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ನ್ಯಾಯ ಸಮ್ಮತವಲ್ಲದ ದಾಳಿಯನ್ನು ಪ್ರಶ್ನಿಸಿದಿದ್ದರೆ ಉದ್ವಿಗ್ನತೆ ಹೊಗೆಯಾಡುತ್ತಿರುವ ಇಂಡೋ ಫೆಸಿಫಿಕ್ ಸೇರಿದಂತೆ ಎಲ್ಲೆಡೆ ಮೈಟ್ ಮೇಕ್ಸ್ ರೈಟ್ ಎಂಬ ವಿಶ್ವದ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಯೂರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಅವರು ಎಚ್ಚರಿಕೆ ನೀಡಿದ್ದಾರೆ.
ಭಾರತಕ್ಕೆ ಎರಡು ದಿನಗಳ ಭೇಟಿಗಾಗಿ ಇಂದು(ಭಾನುವಾರ) ಆಗಮಿಸಲಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಲಿದ್ದಾರೆ. ಮತ್ತು ರೈಸಿನಾ ಚರ್ಚೆ ನಡೆಸುತ್ತಾರೆ. ತಮ್ಮ ಭೇಟಿ ವೇಳೆ, ಆಕ್ರಮಣವನ್ನು ನಿಲ್ಲಿಸುವ ಅಗತ್ಯತೆಯನ್ನು ಪ್ರತಿಪಾದಿಸಿ ಉಕ್ರೇನ್ ಯುದ್ಧದ ಬಗ್ಗೆ ಭಾರತದ ಜೊತೆ ಚರ್ಚಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್ನಲ್ಲಿ ರಕ್ತಪಾತವನ್ನು ಮುಂದುವರಿಸುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಯತ್ನಗಳನ್ನು ತಡೆಯಲು ಇತರ ದೇಶಗಳು ಕೈಜೋಡಿಸುವಂತೆ ಯೂರೋಪಿಯನ್ ಒಕ್ಕೂಟ ಆಹ್ವಾನಿಸುತ್ತಿದೆ. ಏಕೆಂದರೆ ರಷ್ಯಾದ ಅತಿಕ್ರಮಣ ಕೇವಲ ಒಂದು ದೇಶಕ್ಕೆ ಅಪಾಯ ತರುವಂಥದ್ದಲ್ಲ. ಇದರ ಬದಲಾಗಿ ಇಡೀ ವಿಶ್ವಕ್ಕೆ ಅಪಾಯಕಾರಿ ಎಂದು ಭಾರತ ಭೇಟಿಗೆ ಮುನ್ನ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಕೂಡಾ ದಾಳಿ ನಡೆಯುವ ಸಂಭಾವ್ಯತೆ ಬಗ್ಗೆ ಪ್ರಶ್ನಿಸಿದಾಗ, ಈ ದಾಳಿಯನ್ನು ಯಾರೂ ಪ್ರಶ್ನಿಸದಿದ್ದರೆ, ತೋಳ್ಬಲವೇ ಸರಿ ಎಂಬ ವಿಶ್ವವನ್ನು ನಾವು ಕಾಣಬೇಕಾಗುತ್ತದೆ. ಯೂರೋಪಿಯನ್ ಒಕ್ಕೂಟದಲ್ಲಿ ಕಾನೂನು ಶ್ರೇಷ್ಠವೇ ವಿನಃ ಬಂದೂಕಿನ ಆಡಳಿತವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.