2025ರ ವೇಳೆಗೆ ದತ್ತಾಂಶ ಉದ್ಯಮದಲ್ಲಿ 10 ಸಾವಿರ ಕೋಟಿ ಹೂಡಿಕೆಯನ್ನು ಅಕರ್ಷಿಸುವ ಗುರಿ ಹೊಂದಿರುವ ಹೊಸ ದತ್ತಾಂಶ ಕೇಂದ್ರ ನೀತಿಗೆ (ಡಾಟಾ ಸೆಂಟರ್ ಪಾಲಿಸಿ) ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ.
ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ದತ್ತಾಂಶ ಕೇಂದ್ರ ನೀತಿ-2022 ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಇದಕ್ಕಾಗಿ 100 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ. ಹೊಸ ನೀತಿಯನ್ವಯ ಪ್ರೋತ್ಸಾಹ ಮತ್ತು ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ದೇಶದಲ್ಲಿ ಕರ್ನಾಟಕ ರಾಜ್ಯವು ದತ್ತಾಂಶ ಕೇಂದ್ರ ಕ್ಷೇತ್ರದಲ್ಲಿ ಮುಂಚೂಣಿ ಹೊಂದುವ ಸಾಮರ್ಥ್ಯವನ್ನು ಹೊಂದಿದೆ. ಬೆಂಗಳೂರು ಪ್ರಸ್ತುತ ದೇಶದಲ್ಲಿ ದತ್ತಾಂಶ ಕೇಂದ್ರದ ಉದ್ಯಮಕ್ಕೆ ಅಗ್ರ ಐದು ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ ಎಂದರು.