ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಸೂಚನೆ ನೀಡಿರುವ ಪ್ರಕಾರ ಮೇ ಅಂತ್ಯದ ವೇಳೆಗೆ .ದಾವಣಗೆರೆ- ಚಿತ್ರದುರ್ಗ-ತುಮಕೂರು ನೂತನ ಮಾರ್ಗದ ಭೂಸ್ವಾಧೀನಕ್ಕೆ ಅಧಿಕಾರಿಗಳ ತಂಡ ರಚಿಸಿ ಜಂಟಿ ಸರ್ವೇ ಕಾರ್ಯಕೈಗೊಳ್ಳವಂತೆ ತಿಳಿಸಿರುತ್ತಾರೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೂತನ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ, ಭೂಮಾಪನ, ರೈಲ್ವೆ, ಲೋಕೋಪಯೋಗಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡವು ಸರ್ವೇ ನಡೆಸಬೇಕು ಮತ್ತು ಮೇ ಅಂತ್ಯಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಲು ಸರ್ಕಾರದ ಮುಂದೆ ತರಲು ಮುಂದಾಗಬೇಕು . ಮೇ ತಿಂಗಳ ಮಧ್ಯದ ವೇಳೆಗೆ ಮೊದಲ ಹಂತದ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು. ಭೂಸ್ವಾಧೀನಕ್ಕೆ ಅಗತ್ಯ ಇರುವ 200 ಕೋಟಿ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಹಿರಿಯೂರು ತಾಲ್ಲೂಕಿಗೆ 77 ಕೋಟಿ ಪರಿಹಾರ ಬಿಡುಗಡೆಯಾಗಿದ್ದು, 49 ಕೋಟಿ ಪರಿಹಾರ ವಿತರಿಸಲಾಗಿದೆ.
ಚಿತ್ರದುರ್ಗ ತಾಲ್ಲೂಕಿನಲ್ಲಿ 183 ಎಕರೆ ಭೂಮಿ ಸ್ವಾಧೀನಕ್ಕೆ ಪರಿಹಾರ ನಿಗದಿಪಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಶ್ರೀಧರ್, ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಎನ್. ಸತೀಶ್ ಬಾಬು, ಭೂದಾಖಲೆ ಇಲಾಖೆ ಉಪನಿರ್ದೇಶಕ ರಾಮಾಂಜನೇಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಅಂತು ಬಹುದಿನದ ಕನಸು ನನಸಾಗುವ ಕಾಲ ಹತ್ತಿರಕ್ಕೆ ಬಂದಿದೆ.ದಾವಣಗೆರೆಯಿಂದ ತುಮಕೂರಿನ ತನಕ ಬರುವ ಹಳ್ಳಿಗಳಿಗೆ ಅನುಕೂಲ ಕಲ್ಪಿಸಿ ಬಡವರಿಗೆ ಅನುಕೂಲ ಅಗುವುದರಲ್ಲಿ ಸಂಶಯವಿಲ್ಲ. ತಕ್ಷಣ ಕಾರ್ಯವನ್ನು ಪ್ರಾರಂಭಿಸಲು ರೈಲ್ವೆ ಇಲಾಖೆ ಸರ್ಕಾರದ ಜೊತೆ ಹೆಚ್ಚಾಗಿ ಸಂಪರ್ಕ ಇಡಲು ಸಾರ್ವಜನಿಕರು ಮನವಿ ಮಾಡಿದರು.
ವರದಿ: ಮುರುಳೀಧರ್ ನಾಡಿಗೇರ್
ಭರಮಸಾಗರ