Friday, September 11, 2026
Friday, September 11, 2026

ಸುಸ್ಥಿರ ಪರಿಸರ ನಿರ್ಮಾಣಕ್ಕೆ ಅರಣ್ಯೀಕರಣಕ್ಕೆ ಹೆಚ್ಚು ಒತ್ತು- ಜಿ.ವಿಜಯ್ ಕುಮಾರ್

Date:

ಹಸಿರು ಉಪಕ್ರಮಗಳ ಮೂಲಕ ಭೂಮಿಯನ್ನು ಸಂರಕ್ಷಿಸುವ ಹಾಗೂ ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಸಮುದಾಯದ ಸಹಭಾಗಿತ್ವದೊಂದಿಗೆ ಅರಣ್ಯೀಕರಣ ಮತ್ತು ಪರಿಸರ ಸಂರಕ್ಷಣಾ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಮಾಜಿ ರೋಟರಿ ಸಹಾಯಕ ಗವರ್ನರ್ ಹಾಗೂ ರೋಟೇರಿಯನ್ ಜಿ. ವಿಜಯ್ ಕುಮಾರ್ ಕರೆ ನೀಡಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ‘ಹಸಿರು ಭವಿಷ್ಯದತ್ತ ರೋಟರಿ ಪರಿಸರ ಯೋಜನೆ’ ಕಾರ್ಯಕ್ರಮದ ಅಂಗವಾಗಿ, ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳು, ಶಿವಮೊಗ್ಗ ತಾಲೂಕು ಇವರ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ವನಮಹೋತ್ಸವ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮರಗಳನ್ನು ನೆಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಮಗ್ರವಾದ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದರು.

ಕೆರೆಗಳ ಪುನರುಜ್ಜೀವನ, ಅರಣ್ಯೀಕರಣ, ಹಣ್ಣು ಮತ್ತು ಔಷಧೀಯ ಸಸ್ಯಗಳ ತೋಟಗಳ ಮೂಲಕ ಗ್ರಾಮೀಣ ಜೀವನೋಪಾಯಕ್ಕೆ ಉತ್ತೇಜನ, ಸಾಂಪ್ರದಾಯಿಕ ಜಲಮೂಲಗಳ ಪುನಶ್ಚೇತನ, ಮಳೆನೀರು ಕೊಯ್ಲಿಗೆ ಪ್ರೋತ್ಸಾಹ ಹಾಗೂ ಶಾಲೆಗಳು ಮತ್ತು ಸಮುದಾಯಗಳಲ್ಲಿ ಸುಸ್ಥಿರ ಜೀವನಶೈಲಿಯ ಕುರಿತು ಅರಿವು ಮೂಡಿಸುವಂತಹ ಹಲವು ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಹಮ್ಮಿಕೊಂಡಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಅಧ್ಯಕ್ಷ ಶೇಷಗಿರಿ ಡಿ.ಕೆ. ಮಾತನಾಡಿ, ಒಟ್ಟಾಗಿ ನಾವು ಹಸಿರು ಭವಿಷ್ಯದತ್ತ ಒಂದು ಸಣ್ಣ ಆದರೆ ಅರ್ಥಪೂರ್ಣ ಹೆಜ್ಜೆ ಇಟ್ಟಿದ್ದೇವೆ. ಪರಿಸರವನ್ನು ಪೋಷಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸೋಣ. ಪ್ರತಿಯೊಂದು ಮರವೂ ಮುಖ್ಯ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್‌ನ ಕಾರ್ಯದರ್ಶಿ ಆರ್. ಮನೋಹರ್ ಅವರು, ಪರಿಸರ ವ್ಯವಸ್ಥೆಗಳ ಪುನಶ್ಚೇತನ, ಜಲಮೂಲಗಳ ಪುನರುಜ್ಜೀವನ, ಅರಣ್ಯೀಕರಣ ಹಾಗೂ ಸಮುದಾಯ ಆಧಾರಿತ ಪರಿಸರ ಯೋಜನೆಗಳ ಮೂಲಕ ಸುಸ್ಥಿರ ಜೀವನೋಪಾಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ‘ಸೇವೆ ಅಬೌವ್ ಸೆಲ್ಫ್’ ಎಂಬ ಧ್ಯೇಯದೊಂದಿಗೆ ನಾಗರಿಕರು, ಸಂಸ್ಥೆಗಳು ಮತ್ತು ಸಮುದಾಯಗಳನ್ನು ಪರಿಸರ ಸಂರಕ್ಷಣೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ರೋಟರಿ ವಿಶ್ವದಾದ್ಯಂತ ನಡೆಸುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಗುರುರಾಜ್ ಎಂ.ಒ. ಅವರು ಜಾಗತಿಕ ತಾಪಮಾನ ಏರಿಕೆಯ ಹಿನ್ನೆಲೆಯಲ್ಲಿ ಪರಿಸರ ಜಾಗೃತಿಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಶಾಲಾ ವಿದ್ಯಾರ್ಥಿಗಳು ಹಾಗೂ ಇಂಟರಾಕ್ಟ್ ಕ್ಲಬ್‌ನ ಪದಾಧಿಕಾರಿಗಳೊಂದಿಗೆ ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳಿಗೆ ನೀರುಣಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಕೊಮ್ಮನಾಳುವಿನ ಹಿರಿಯ ಶಿಕ್ಷಕಿ ಇಂದಿರಾ ಎಸ್.ಪಿ., ರಾಘವೇಂದ್ರ ವಿ.ಟಿ., ಕಿರಣ್ ಎಚ್., ವೀಣಾ ಎಸ್., ಗಿರಿಧರ್ ಸಿ.ಪಿ., ಇಂಟರಾಕ್ಟ್ ಕ್ಲಬ್ ಅಧ್ಯಕ್ಷೆ ಪ್ರಿಯ, ಕಾರ್ಯದರ್ಶಿ ಹೇಮಂತ್, ಉಪಾಧ್ಯಕ್ಷೆ ಪಲ್ಲವಿ, ಇತರೆ ಪದಾಧಿಕಾರಿಗಳು, ಶಿಕ್ಷಕರು, ಶಾಲಾ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S. N. Channabasappa ಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಶಾಸಕ ” ಚೆನ್ನಿ” ಅವರಿಂದ ಕಾಮಗಾರಿಗಳಿಗೆ ಭೂಮಿ ಪೂಜೆ

S. N. Channabasappa ಶಿವಮೊಗ್ಗ ನಗರದ ಪ್ರತಿಯೊಂದು ವಾರ್ಡ್ ಹಾಗೂ ಬಡಾವಣೆಗಳಲ್ಲಿ...

Chamber of commerce Shivamogga “ಬೆಂಗಳೂರಿನಾಚೆ ಕೈಗಾರಿಕಾ ಅಭಿವೃದ್ಧಿ” ಗಾಗಿ ಶಿವಮೊಗ್ಗ ನಗರವನ್ನ ಸೇರ್ಪಡಿಸಿ- ಎಸ್.ರುದ್ರೇಗೌಡ

Chamber of commerce Shivamogga ಬೆಂಗಳೂರಿನಾಚೆಗಿನ ಕೈಗಾರಿಕೆಗಳ ಅಭಿವೃದ್ಧಿಗಾಗಿ ಶಿವಮೊಗ್ಗ ನಗರ...