ಸ್ಕೌಟ್ ಗೈಡ್ ತರಬೇತಿಯಲ್ಲಿ ಅನೇಕ ಜೀವನ ಕೌಶಲ್ಯಗಳ ವಿಷಯಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಯಶಸ್ಸನ್ನು ಸಾಧಿಸಬಹುದು ಎಂದು ರಾಷ್ಟ್ರೀಯ ವಕ್ತಾರರು ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ನ ಆದರ್ಶ್ ಹುಂಚದಕಟ್ಟೆ ಹೇಳಿದರು.
ಜಿಲ್ಲಾ ಸ್ಕೌಟ್ ಭವನದಲ್ಲಿ ಪದವಿ ಪೂರ್ವ ಕಾಲೇಜುಗಳ ರೋವರ್ ರೇಂಜರ್ಸ್ ಗಳ ನಿಪುಣ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ, ಕಲಾ ವಿಷಯಗಳ ಬಗ್ಗೆ ತಾರತಮ್ಯ ಬೇಡ, ಎಲ್ಲಾ ವಿಭಾಗಗಳು ವಿದ್ಯಾರ್ಥಿಗಳಿಗೆ ಸಮಾನ ಅವಕಾಶವನ್ನು ಒದಗಿಸುತ್ತವೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಶಕುಂತಲಾ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಸ್ಕೌಟ್ ಗೈಡ್ ಚಳುವಳಿಯ ಎಲ್ಲಾ ಹಂತಗಳಲ್ಲಿ ತರಬೇತಿ ಪಡೆದು ಸಮಾಜಮುಖಿ ನಾಯಕರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಿ ಎಸ್.ಕೆ ಎಲ್ಲರನ್ನು ಸ್ವಾಗತಿಸಿದರು. ಜಿಲ್ಲಾ ಆಯುಕ್ತರಾದ ಆನಂದ್, ಶಿಬಿರದ ನಾಯಕ ರಾಜೇಶ್ ಎ.ವಿ., ರೋ. ಕೆ.ರವಿ, ಜಿಲ್ಲಾ ಖಜಾಂಚಿ ಚೂಡಾಮಣಿ ಈ. ಪವಾರ್, ಎಡಿಸಿ ಮಲ್ಲಿಕಾರ್ಜುನ್ ಕಾನೂರು, ರೇಂಜರ್ ವಿಭಾಗದ ನಾಯಕಿ ಅನಿತಾ ಭಾಗವಹಿಸಿದ್ದರು. ಶಿಬಿರದಲ್ಲಿ 152 ರೋವರ್ ರೇಂಜರ್ಸ್ ಗಳು ನಿಪುಣ್ ಪದಕಕ್ಕೆ ಅರ್ಹತೆಯನ್ನು ಪಡೆದು ಯಶಸ್ವಿಯಾದರು.
