ನಮ್ಮ ಶಿಕ್ಷಕ ವೃತ್ತಿಯ ಜೊತೆಗೆ ಸಮಾಜ ಸೇವೆಯೂ ಅಷ್ಟೇ ಮುಖ್ಯ. ಶಾಲೆ ಹಾಗೂ ಶಾಲೆಯ ಮಕ್ಕಳು ನನ್ನ ಕುಟುಂಬದ ಅವಿಭಾಜ್ಯ ಅಂಗ ಎಂದು ಮಲವಗೊಪ್ಪ ಜನತಾ ಕಾಲೋನಿಯ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ತುಳಸಿ ಅಡಿಗ ರವರು ನುಡಿದರು.
ಶಿವಮೊಗ್ಗ ನಗರದ ಶುಭಂ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ ಶಾಲೆ ಜಿಲ್ಲೆಯಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಳ್ಳಲು ಹಾಗೂ ಅತ್ಯುತ್ತಮ ಎಸ್ಡಿಎಂಸಿ ಪ್ರಶಸ್ತಿ ಪಡೆಯಲು ಹಲವಾರು ಸಂಘ-ಸಂಸ್ಥೆಗಳು ಮತ್ತು ದಾನಿಗಳ ಸಹಕಾರ ಕಾರಣವಾಗಿದೆ ಎಂದು ತಿಳಿಸಿದರು.
ಶಾಹಿ ಗಾರ್ಮೆಂಟ್ಸ್, ವಿವಿಧ ರೋಟರಿ ಕ್ಲಬ್ಗಳು, ಫ್ರೆಂಡ್ಸ್ ಸೆಂಟರ್, ಆವಾಪ ಸಂಸ್ಥೆ, ಮಹಿಳಾ ಸಂಘ, ಭಜನಾ ಮಂಡಳಿ, ಅಪರಂಜಿ ಜ್ಯುವೆಲ್ಲರ್ಸ್ ಸೇರಿದಂತೆ ಅನೇಕ ದಾನಿಗಳು ಹಾಗೂ ಕಾರ್ಯಕರ್ತರ ಸಹಕಾರವನ್ನು ಅವರು ಸ್ಮರಿಸಿದ ಅವರು, ನನ್ನ ಶಿಕ್ಷಕ ವೃತ್ತಿ ಜೀವನ ನನಗೆ ಅಪಾರ ಸಾರ್ಥಕತೆಯನ್ನು ನೀಡಿದೆ. ಸಮಾಜದಲ್ಲಿ ಗೌರವ, ಪ್ರೀತಿ ಹಾಗೂ ಹಲವಾರು ಪ್ರಶಸ್ತಿಗಳನ್ನು ಗಳಿಸಲು ಈ ವೃತ್ತಿಯೇ ಕಾರಣವಾಗಿದೆ” ಎಂದು ಅವರು ಹೇಳಿದರು.
36 ವರ್ಷಗಳ ಸುದೀರ್ಘ ಶಿಕ್ಷಕ ಸೇವೆಯಲ್ಲಿ ಎದುರಿಸಿದ ಸವಾಲುಗಳು, ಸಾಧನೆಗಳು ಹಾಗೂ ಅವರ ಪ್ರಾಮಾಣಿಕ ಕಾರ್ಯಶೈಲಿ ಎಲ್ಲರಿಗೂ ಮಾದರಿಯಾಗಿದೆ. ಸರ್ಕಾರಿ ಶಾಲೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಅವರು ಸಲ್ಲಿಸಿರುವ ಸೇವೆ ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಹಾಯಕ ಗವರ್ನರ್ ಜಿ. ವಿಜಯ್ ಕುಮಾರ್, ಶಿಕ್ಷಕ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಪರಿಗಣಿಸದೇ ಸೇವಾ ಮನೋಭಾವದಿಂದ ನಿರ್ವಹಿಸಿದ ಅಪರೂಪದ ಶಿಕ್ಷಕಿ ತುಳಸಿ ಅಡಿಗ ಅವರು. 36 ವರ್ಷಗಳ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದು, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮಹತ್ವದ ಕೊಡುಗೆ ನೀಡಿದ್ದಾರೆ. ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸುವಲ್ಲಿ ಅವರ ಶ್ರಮ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಶ್ಲಾಘನೀಯ. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಅವರಿಗೆ ದೊರೆತಿರುವುದು ಅವರ ಸೇವೆಗೆ ಸಂದ ಗೌರವವಾಗಿದ್ದು, ಇತರ ಶಿಕ್ಷಕರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರಾದ, ಗೋಪಾಲಕೃಷ್ಣ ಗುಪ್ತ, ದತ್ತು ಕುಮಾರ್, ಸುಬ್ರಯ ಶೆಟ್ಟಿ, ಮೋಹನೇಶ್, ಮಂಜಪ್ಪ, ಶ್ಯಾಮಲಾ, ಐತಾಳರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಶಿಕ್ಷಕರು, ಹಿತೈಷಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
