ಸುದೀರ್ಘ ಅವಧಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ. ಎಂ.ವೆಂಕಟೇಶ್ ಮುಂದಿನ ದಿನಗಳಲ್ಲಿ ಜನಪದ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸಲಿ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಆಶಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ. ಎಂ.ವೆಂಕಟೇಶ್ ಅವರ “ಹಸನ್ಮುಖಿ ನಮ್ಮ ಎಂ.ವಿ. ಸರ್” ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ವೆಂಕಟೇಶ್ ಅವರು ಸೇವಾವಧಿ ಪೂರ್ಣಗೊಳಿಸಿದ್ದು, ಪ್ರವೃತ್ತಿಯಿಂದ ಹಲವಾರು ಸಾಧನೆಗಳನ್ನು ಮಾಡಬೇಕಿದೆ. ಜನಪದ ಕ್ಷೇತ್ರದಲ್ಲಿ ಅವರನ್ನು ನಾವು ಬಳಕೆ ಮಾಡಿಕೊಳ್ಳುತ್ತೇವೆ ಎಂದರು.
ದಾವಣಗೆರೆಯ ಡಾ. ಸಿ.ಎಚ್.ಮುರುಗೇಂದ್ರಪ್ಪ ಮಾತನಾಡಿ, ವೆಂಕಟೇಶ್ ಅವರು ಸಂಘಟನಾ ಚತುರರಾಗಿದ್ದು, ಎಲ್ಲರೂ ಅವರ ಗುಣಗಳನ್ನು ಮೆಚ್ಚುತ್ತಾರೆ. ಅವರಿಂದ ಇನ್ನು ಹಲವಾರು ಕೆಲಸಗಳು ಆಗಬೇಕಿದೆ. ಒಂದು ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಇರಲು ಅವರಿಂದ ಸಾಧ್ಯವಾಗುತ್ತದೆ ಎಂದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಎಚ್.ಎಮ್.ಶಿವಕುಮಾರ್ ಮಾತನಾಡಿ, ನಿವೃತ್ತಿಯಾಗುತ್ತಿರುವುದು ಕೇವಲ ಕೆಲಸದಿಂದ. ಆದರೆ ಅವರ ಪ್ರವೃತ್ತಿ ಅದೇ ರೀತಿ ಮುಂದುವರಿಯುತ್ತದೆ. ಅವರಿಂದ ಇನ್ನು ಹಲವಾರು ಕಾರ್ಯಗಳು ನೆರವೇರಬೇಕಿದೆ ಎಂದು ಹೇಳಿದರು.
ಡಿವಿಎಸ್ ಕಾರ್ಯದರ್ಶಿ ಎಸ್.ಪಿ.ದಿನೇಶ್ ಮಾತನಾಡಿ, ಪ್ರಾಂಶುಪಾಲರ ಹುದ್ದೆಯಿಂದ ಮಾತ್ರ ನಿವೃತ್ತಿ ಆಗುತ್ತಿದ್ದಾರೆ. ಅವರು ನಂತರ ಡಿವಿಎಸ್ ಆಡಳಿತ ಸಮಿತಿ ಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಡಿವಿಎಸ್ ಅಧ್ಯಕ್ಷ ಕೆ.ಬಸಪ್ಪ ಗೌಡ ಮಾತನಾಡಿ, ವೆಂಕಟೇಶ್ ಅವರು ಕಾಯಕಯೋಗಿಯಾಗಿದ್ದು, ಸೌಮ್ಯ ಸ್ವಭಾವದಿಂದ ಎಲ್ಲರನ್ನು ಸಂಘಟಿಸಿ ಕಾಲೇಜಿಗೆ ಮತ್ತು ಆಡಳಿತ ಸಮಿತಿಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ಮೆಚ್ಚಿ ನಾವು ಅವರಿಗೆ ಮುಂದೆ ಇನ್ನಷ್ಟು ಜವಾಬ್ದಾರಿಗಳನ್ನು ನೀಡುತ್ತೇವೆ ಎಂದು ತಿಳಿಸಿದರು. ಇದೇ ಸಮಾರಂಭದಲ್ಲಿ ಕುಲಸಚಿವರಾಗಿ ನೇಮಕಾತಿ ಆದೇಶ ಪತ್ರವನ್ನು ನೀಡಲಾಯಿತು.
ಡಿವಿಎಸ್ ನಿರ್ದೇಶಕ ರುದ್ರಪ್ಪ ಕೊಳಲೆ ಮಾತನಾಡಿ, ಒಬ್ಬ ವ್ಯಕ್ತಿ ನಿಜವಾದ ಸಾಧನೆ ಮಾಡಿದರೆ ಸ್ಥಾನಮಾನಗಳು ತಾನಾಗಿ ಹುಡುಕಿಕೊಂಡು ಬರುತ್ತವೆ ಎಂದರು.
ಡಾ. ಎಂ.ವೆಂಕಟೇಶ್, ದೇಶೀಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ಕುಮಾರ್ ಶೆಟ್ಟಿ, ಪ್ರೊ. ಎನ್.ಕುಮಾರಸ್ವಾಮಿ, ಡಿವಿಎಸ್ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವರ್ಗ, ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
