ತಾಯಿಗೆ ಮಕ್ಕಳ ಮೇಲೆ ಮಾತ್ರತ್ವ ಸಹಜ. ಆದರೆ ಅತಿಯಾದ ಪ್ರೀತಿ, ಪ್ರೇಮ, ವಿಶ್ವಾಸ ಒಂದು ಹಂತದವರೆಗೆ ಮಾತ್ರ ಸೀಮಿತವಾಗಿರಬೇಕು. ನಂತರದ ದಿನಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಮಕ್ಕಳ ರೀತಿ, ನೀತಿಯನ್ನು ಗಮನಿಸಿ ಸರಿ ತಪ್ಪುಗಳನ್ನು ಸರಿಪಡಿಸುವ ಮೂಲಕ ಸುಸಂಸ್ಕೃತ ಅಭ್ಯಾಸವನ್ನು ಕಲಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಖ್ಯಾತ ವೈದ್ಯರು ಮತ್ತು ವಿಧಾನ ಪರಿಷತ್ತಿನ ಸದಸ್ಯರಾದ ಡಾ. ಧನಂಜಯ ಸರ್ಜಿ ಹೇಳಿದರು.
ನಗರದ ರೋಟರಿ ಕ್ಲಬ್ ಶಿವಮೊಗ್ಗ ಉತ್ತರದ ವತಿಯಿಂದ ಏರ್ಪಡಿಸಿದ್ದ ‘ತಾಯಿಗೆ ಮಕ್ಕಳ ಬಗ್ಗೆ ಕಾಳಜಿ’ ಕುರಿತು ಉಪನ್ಯಾಸ ನೀಡಿದ ಅವರು, ತಾಯಿ ಮಕ್ಕಳ ಬಾಂಧವ್ಯದ ಬಗ್ಗೆ ತಿಳಿಸಿ ಹೇಳಿದರು.
ರೋಟರಿ ಪ್ರಪಂಚದಾದ್ಯಂತ ಸಮುದಾಯವನ್ನು ಬಲಪಡಿಸುವ ಪರಿಸರ ಸಂರಕ್ಷಣೆ, ಶಾಲೆಗಳಿಗೆ ಉತ್ತಮ ಕಲಿಕೆಗೆ ಸಹಕಾರಿಯಾಗುವಂತಹ ಪೀಠೋಪಕರಣ, ಯಂತ್ರೋಪಕರಣ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ನಿರ್ಮಾಣ, ಮುಖಂಡತ್ವ ತರಬೇತಿ, ಶಾಂತಿಯುತ ಸಮಾಜ ನಿರ್ಮಾಣ, ರೋಗಮುಕ್ತ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದು, ಇದಕ್ಕೆ ಕೈಜೋಡಿಸುವ ಮನಸ್ಸು ನಮ್ಮದಾಗಬೇಕು. ಈ ಕೆಲಸ ಮಾಡುತ್ತಿರುವ ರೋಟರಿ ನಾರ್ಥ ಕ್ಲಬ್ ಶಿವಮೊಗ್ಗಕ್ಕೆ ಮಾದರಿ. ರೋಟರಿ ಮಾಜಿ ಜಿಲ್ಲಾ ಗೌವರ್ನರ್ ಚಂದ್ರಶೇಖರ ಈ ಕ್ಲಬ್ ಮುಖಾಂತರ ಅವರ ವಯಸ್ಸಿಗೆ ಮೀರಿದ ಸಾಧನೆ ಮಾಡಿದ್ದಾರೆ. ಅವರ ಮುಖಾಂತರ ನಡೆಯುವ ರೋಟರಿಯ ಗ್ಲೋಬಲ್ ಗ್ರಾಂಟ್ ಯೋಜನೆಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು. ಹಾಗೂ ಅವರಿಗೆ ಶ್ರೀ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ರೋಟರಿ ನಾರ್ಥ್ ಅಧ್ಯಕ್ಷ ಶಿವಕುಮಾರ ಸ್ವಾಗತಿಸಿ, ಕಾರ್ಯದರ್ಶಿ ಶ್ರೀಧರ ವಂದನಾರ್ಪಣೆ ಮಾಡಿದರು. ವೇದಿಕೆಯಲ್ಲಿ ಇನ್ನರ್ ವ್ಹೀಲ್ ಅಧ್ಯಕ್ಷೆ ಜಲಪಾತ ನಾಗರಾಜ, ಕಾರ್ಯದರ್ಶಿ ಧನಲಕ್ಮಿ ಉಪಸ್ಥಿತರಿದ್ದರು.
