ಆರೋಗ್ಯವಂತ ಮಹಿಳೆ ಆರೋಗ್ಯವಂತ ಕುಟುಂಬವನ್ನು ನಿರ್ಮಿಸುತ್ತಾಳೆ, ಇದರಿಂದ ಆರೋಗ್ಯವಂತ ಕುಟುಂಬಗಳು ಸದೃಢ ರಾಷ್ಟ್ರದ ಅಡಿಪಾಯವಾಗುತ್ತವೆ ಡಾ. ಸಂಧ್ಯಾ.ಎಸ್.ಎಸ್ ಎಂದು ತಿಳಿಸಿದರು.
ಶಿವಮೊಗ್ಗ ನಗರದ ರೋಟರಿ ಈಸ್ಟ್ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಏರ್ಪಡಿಸಿದ್ದ ಮಾತೃತ್ವ ತಾಯ್ತನ ಆರೋಗ್ಯ ಕುರಿತ ವಾರದ ಸಭೆಯಲ್ಲಿ ಭಾಗವಹಿಸಿ ರೋಟರಿ ಸದಸ್ಯರುಗಳನ್ನುದ್ದೇಶಿಸಿ ಮಾತನಾಡಿದ ಅವರು, ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಯೋಗ, ನಿಯಮಿತ ಆರೋಗ್ಯ ತಪಾಸಣೆಗಳು, ಸಮಯೋಚಿತ ಲಸಿಕಾಕರಣ ಹಾಗೂ ಆರೋಗ್ಯ ವಿಮೆಯ ಮಹತ್ವವನ್ನು ನಾವು ಒತ್ತಿಹೇಳಿದ್ದೇವೆ. ರೋಗಗಳ ತಡೆಗಟ್ಟುವಿಕೆ, ಆರಂಭಿಕ ಹಂತದಲ್ಲೇ ಪತ್ತೆಹಚ್ಚುವಿಕೆ ಮತ್ತು ಆರೋಗ್ಯದ ಕುರಿತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ಕೈಗೊಳ್ಳುವುದು ಜೀವನಪರ್ಯಂತ ಉತ್ತಮ ಆರೋಗ್ಯದ ಪ್ರಮುಖ ಆಧಾರಸ್ತಂಭಗಳಾಗಿವೆ ಎಂದರು.
ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು, ಮುನ್ನೆಚ್ಚರಿಕೆಯ ಆರೋಗ್ಯ ಕಾಳಜಿಯನ್ನು ವಹಿಸುವ ಮೂಲಕ ಆರೋಗ್ಯವಂತ ಮುಂದಿನ ಪೀಳಿಗೆಯನ್ನು ನಿರ್ಮಿಸೋಣ ವೈದ್ಯ ವೃತ್ತಿಯು ಸಾಕಷ್ಟು ಆಧುನಿಕ ಬದಲಾವಣೆಯಾಗುತ್ತಾ ಸುಧಾರಣೆಯನ್ನು ಕಂಡಿದೆ. ರೋಗಿಗಳ ವಿಶ್ವಾಸ ಹೆಚ್ಚಾಗಲು ಡಾಕ್ಟರ್ ಮೇಲಿನ ನಂಬಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದೆ ಎಂದ ಅವರು, ಈ ಸಂದರ್ಭದಲ್ಲಿ ನಮ್ಮನ್ನ ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ಉಪಾಧ್ಯಕ್ಷರಾದ ಜಿ.ವಿಜಯ್ ಕುಮಾರ್, 30 ವರ್ಷಗಳ ಸುದೀರ್ಘ ವೈದ್ಯಕೀಯ ಸೇವೆಯ ಅನುಭವ ಹೊಂದಿರುವcಡಾ. ಸಂಧ್ಯಾ.ಎಸ್.ಎಸ್ ಇವರು, 2014 ರಿಂದ ಸರ್ಜಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವನ್ನು ಶೂನ್ಯದಿಂದ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ 13,000 ಕ್ಕೂ ಹೆಚ್ಚು ಹೆರಿಗೆಗಳನ್ನು ಯಶಸ್ವಿಯಾಗಿ ಮಾಡಿಸಿದ ಕೀರ್ತಿ ಇವರಿಗಿದೆ. ಬಂಜೆತನ ನಿವಾರಣಾ ಚಿಕಿತ್ಸೆ 22 ವಾರಗಳವರೆಗಿನ ಗರ್ಭಾಶಯದ ಸಂಕೀರ್ಣ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗಳು, ಅಂಡಾಶಯದ ಸರ್ಜರಿಗಳು ಮತ್ತು ಹಿಸ್ಟರೊಸ್ಕೋಪಿ ಚಿಕಿತ್ಸೆಗಳಲ್ಲಿ ಇವರು ಪರಿಣಿತರು. ಅತ್ಯಂತ ಅಪಾಯಕಾರಿ ಗರ್ಭಾವಸ್ಥೆಯ ಸಂದರ್ಭಗಳಲ್ಲಿ ತಕ್ಷಣದ ಹಾಗೂ ದಕ್ಷ ಚಿಕಿತ್ಸೆ ನೀಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ರೋಗಿಗಳಿಗೆ ಕಷ್ಟದ ಸಮಯದಲ್ಲಿ ಧೈರ್ಯ ತುಂಬುತ್ತಾ, ಅವರ ನಂಬಿಕೆ ಮತ್ತು ಆಶೀರ್ವಾದಗಳನ್ನೇ ತಮಗೊಲಿದ ದೊಡ್ಡ ಪ್ರಶಸ್ತಿ ಎಂದು ಭಾವಿಸಿರುವ ಇವರ ಸೇವಾ ಪ್ರವೃತ್ತಿ ಅನನ್ಯವಾದದ್ದು ಎಂದು ತಿಳಿಸಿದರು.
ಈ ಸಂದಭದಲ್ಲಿ ಚುನಾಯಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಝೋನಲ್ ಲೆಫ್ಟಿನೆಂಟ್ ಮಹೇಶ್ ಆಲೇಮನೆ, ರೋಟರಿ ಕ್ಲಬ್ ಶಿವಮೊಗ್ಗ ಈಸ್ಟ್ ನ ಕಾರ್ಯದರ್ಶಿ ಆರ್.ಮನೋಹರ, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರಾದ ಆದಿಮೂರ್ತಿ.ಹೆಚ್.ಬಿ, ಗಣೇಶ್.ಎಸ್, ಅರುಣ್ ಎಸ್.ದೀಕ್ಷಿತ್, ನಾಗರಾಜ್, ಕೃಷ್ಣಮೂರ್ತಿ ಆರ್, ನಾಗರಾಜ್.ಎಂ.ಪಿ., ಸುರೇಂದ್ರ ಕಾಸಲ, ಲಕ್ಷ್ಮಣ್ ಬಾಬು, ನಿಕಟ ಪೂರ್ವ ಅಧ್ಯಕ್ಷರಾದ ಡಿ.ಕಿಶೋರ್ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಬಿ.ಆರ್.ಧನಂಜಯ್, ಶಶಿಕಾಂತ್ ನಾಡಿಗ್, ಸುನಿಲ್ ಕುಮಾರ್ ಜಿ., ರವಿಪ್ರಕಾಶ್ ಕಾಳಾಚಾರ್, ಸಂತೋಷ ಕುಮಾರ್ ಬಿ.ಎನ್., ಡಾ. ಅರುಣ್ ಎಂ.ಎಸ್, ದಿಲೀಪ್ ಜೈನ್ ಗಂಗಪ್ಪ, ಜಗದೀಶ್ ಹಾಗೂ ಹೆಚ್ಚಿನ ಸಂಖ್ಯೆಯ ರೊಟೇರಿಯನ್ಸ್ ಪಾಲ್ಗೊಂಡಿದ್ದರು.
