ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, 2025-26ರ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೆಯುಡಬ್ಲ್ಯೂಜೆ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವ ಜತೆಗೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಿಕಾರಂಗ ಮಾಡುತ್ತಿದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಪ್ರಬಲ ಮಾಧ್ಯಮವಾಗಿದೆ. ಪ್ರಸ್ತತ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಪತ್ರಿಕಾರಂಗ ಆನೇಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ಪತ್ರಿಕಾ ರಂಗದ ಸತ್ಯದ ಕೈಗನ್ನಡಿಯಾಗಿದೆ. ಆದರೆ ಇಂದು ಮಾದ್ಯಮಗಳು ಉದ್ಯಮದ ರೂಪ ಪಡೆದಿದ್ದು, ಲಾಭ- ನಷ್ಟ ಎದುರಿಸುತ್ತಿವೆ. ಜತೆಗೆ ತಾಂತ್ರಿಕತೆ ಬೆಳೆದಂತೆ ಮಾಧ್ಯಮಗಳಿಗೆ ಆನೆಣೆ ಸವಾಲುಗಳು ಎದುರಾಗುತ್ತಿವೆ ಎಂದರು.
ಸಮಾಜ ಗಟ್ಟಿಕೊಳ್ಳಬೇಕಾದರೆ ಮಾಧ್ಯಮಗಳ ಪಾತ್ರ ದೊಡ್ಡದಿದೆ ಎಂದ ಅವರು, ಸವಾಲುಗಳ ನಡುವೆ ಸಮಾಜವನ್ನು ಶಿಕ್ಷಣವಂತರನ್ನಾಗಿ ಮಾಡುವುದು ಕೂಡ ಮಾದ್ಯಮಗಳ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ನಿಕಟಪೂರ್ವ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ಮಾತನಾಡಿ, ಹಿಂದೆ ಮಾದ್ಯಮದಲ್ಲಿ ಕೆಲಸ ಮಾಡುವ ಯುವ ಸಮುದಾಯ ಕಲಿಕೆ ಆಸಕ್ತಿ ಮತ್ತು ಗುರಿ ಇತ್ತು. ಆದರೆ. ಇಂದು ಆಸಕ್ತಿಯೂ ಇಲ್ಲ ಗುರಿಯೂ ಇಲ್ಲವಾಗಿದೆ. ಪತ್ರಕರ್ತರಲ್ಲಿ ಮತ್ತು ಸಮಾಧಾನವಿಲ್ಲದಿರುವುದರಿಂದ ಸತ್ಯದ ಸುದ್ದಿಗಳ ಜತೆ ಜತೆಗೆ ಸುಳ್ಳು ಸುದ್ದಿಗಳು ರಾರಾಜಿಸುತ್ತಿವೆ ಎಂದು ವಿಷಾದಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಪತ್ರಿಕೋದ್ಯಮ ಸಮಾಜದದ ಬಳಿಗೆಗೆ ಶ್ರಮಿಸುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ. ಖಡ್ಗಕ್ಕಿಂತ ಲೇಖನಿ ಹರಿತವಾಗಿದ್ದು ಸಮಾಜದ ಅಂಕುಡೊಂಕುಗಳನ್ನು ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು.
ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಂಘದ ವತಿಯಿಂದ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ದತ್ತಿ ಪ್ರಶಸ್ತಿ ಇತ್ತೀಚಿನ ವರ್ಷಗಳಿಂದ ನಿರಂತರವಾಗಿ ನೀಡುತ್ತಿದ್ದು ಇಂದು ಐದನೇ ದತ್ತಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದರು.
ಹಿರಿಯ ಪತ್ರಕರ್ತ ರವಿ ಹೆಗಡೆ ಮಾತನಾಡಿ, ಓದುಗರು ಪತ್ರಿಕೋ ದ್ಯಮದ ಮೇಲೆ ಅಪಾರ ವಿಶ್ವಾಸಾರ್ಹತೆ ಇಟ್ಟು ಕೊಂಡಿ ದ್ದಾರೆ. ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿಯೂ ಪತ್ರಿಕೋದ್ಯಮದ ಮೇಲಿದೆ. ಈ ನಿಟ್ಟಿನಲ್ಲಿ ಆತ್ಮವಿಮರ್ಶೆ ಮಾಡಿ ಸಿದರು. ಆಧುನಿಕ ತಂತ್ರಜ್ಞಾನದಿಂದ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಓದುಗರು ಗಟ್ಟಿಯಾಗಿದ್ದರೆ
ಸಂವಾದ ಗಟ್ಟಿಯಾಗಿರುತ್ತಾನೆ. ಹಿನ್ನೆಲೆಯಲ್ಲಿ ನಮ್ಮಲ್ಲಿರುವ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ನಾವೆಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ. ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಹೊಸ ಸವಾಲುಗಳನ್ನು ಎದುರಿಸಲು ಸನ್ನದ್ದರಾಗಬೇಕಿದೆ ಎಂದು ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ರಾಷ್ಟ್ರೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ, ಕನ್ನಡಪ್ರಭ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸಂಪಾದಕ ಜೋಗಿ, ಜಿಲ್ಲಾಧಿಕಾರಿ ಭವರ್ ಸಿಂಗ್ ಮೀನಾ, ಜಿಪಂ ಸಿಇಒ ಎಚ್.ಎಸ್. ಕೀರ್ತನಾ ಇದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ ಇದೇ ವೇಳೆ ನಡೆಯಿತು.
ಹಿರಿಯ ಪತ್ರಕರ್ತ ಸ.ಗಿರಿಜಾ ಶಂಕರ್, ಬಿ.ಟಿ.ತಿಪ್ಪೇರುದ್ರಪ್ಪ, ಅಜ್ಜಂಪುರ ಅಪ್ಪಾಜಿ, ತರೀಕೆರೆ ಅನಂತ್ ನಾಡಿಗ್, ಕೊಪ್ಪ ಬಿ.ವಿ.ವಿಶ್ವನಾಥ್ ಶೆಟ್ಟಿ ಕಡೂರು ಎನ್.ಗಿರೀಶ್ ಬೀರೂರು, ಪ್ರಸನ್ನ ಗೌಡನಹಳ್ಳಿ ಮೂಡಿಗೆರೆ, ಯೂಸೂಪ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ವಿಜಯ ಕರ್ನಾಟಕದ ಕೆ.ಎಚ್. ರುದ್ರಯ್ಯ, ಸುವರ್ಣ ನ್ಯೂಸ್ ವಿಜಯವಾಣಿ ತರೀಕೆರೆ ವರದಿಗಾರ ಬಿ.ಉಮೇಶ್ ನಾಯಕ್, ಹಿರಿಯ ಫೋಟೋ ಜರ್ನಲಿಸ್ಟ್ ಅಕ್ರಮ್ ಅಬ್ದುಲ್ ಹಕ್, ಮಂಗಳೂರು ಇಬ್ರಾಹಿಂ ಅಡ್ಡಸ್ಥಳ, ಶಿವಕುಮಾರ್ ಪತ್ತಾರ ಎಚ್.ಪಿ.ರವಿಕುಮಾರ್ ಜನತಾಮಾಧ್ಯಮ ಹಾಸನ ಇವರಿಗೆ ಕೆಡಬ್ಯೂಜೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.
