ಸಾಗರದ ಎಲ್. ಬಿ. ಮತ್ತು ಎಸ್. ಬಿ. ಎಸ್. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಸಾಹಿತ್ಯ ವೇದಿಕೆಯ (Literature club ) 2026-27 ನೇ ಶೈಕ್ಷಣಿಕ ಸಾಲಿನ ಚಟುವಟಿಕೆಗಳಿಗೆ ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಚಾರ್ಯರಾದ ಡಾ. ಅವಿನಾಶ್ ಟಿ. ಸೋಮವಾರದಂದು ಜ್ಯೋತಿ ಬೆಳಗಿಸಿ ಚಾಲನೆಯನ್ನು ನೀಡಿದರು. “ಸಾಹಿತ್ಯ ಮತ್ತು ಸಮಾಜ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವಿನಾಶ್ ತಮ್ಮ ಉಪನ್ಯಾಸದಲ್ಲಿ ಸಾಹಿತ್ಯವು ಕೇವಲ ಜೀವನದ ಪ್ರತಿಬಿಂಬವಲ್ಲ, ಸಮಾಜವನ್ನು ಪ್ರಶ್ನಿಸುವ ಹಾಗೂ ಅದರ ವಿವಿಧ ಆಯಾಮಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿದೆ ಎಂದು ಹೇಳಿದರು. ಭಾರತದಂತಹ ಬಹುಸಂಸ್ಕೃತಿಯ ರಾಷ್ಟ್ರದಲ್ಲಿ ದಲಿತ ಸಮಾಜ, ವಸಾಹತುಶಾಹಿ, ವಸಾಹತ್ತೋತ್ತರ ಸಮಾಜ ಸೇರಿದಂತೆ ವಿವಿಧ ಸಾಮಾಜಿಕ ಸನ್ನಿವೇಶಗಳಿವೆ. ವಿದೇಶಗಳಲ್ಲಿ ಶ್ವೇತ-ಕಪ್ಪು ಜನಾಂಗೀಯ ವಿಭಜನೆಗಳಂತಹ ಅನೇಕ ಸಾಮಾಜಿಕ ರಚನೆಗಳನ್ನು ಸಾಹಿತ್ಯವು ಸೂಕ್ಷ್ಮವಾಗಿ ದಾಖಲಿಸುತ್ತದೆ ಎಂದು ಹೇಳಿದನು. ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ಉದಾಹರಿಸಿ, ಒಂದು ಕೃತಿ ಕೇವಲ ಒಂದು ವಿಷಯವನ್ನಲ್ಲ, ಮಲೆನಾಡಿನ ಪ್ರಕೃತಿ, ಸಂಸ್ಕೃತಿ, ಜೀವನ ಪದ್ಧತಿ ಹಾಗೂ ಮಾನವ ಸಂಬಂಧವನ್ನು ಸಮಗ್ರವಾಗಿ ಚಿತ್ರಿಸುತ್ತದೆ ಎಂದು ವಿವರಿಸಿದರು. ಫ್ರೆಂಚ್ ವಿಮರ್ಶಕ ರೊನಾಲ್ಟ್ ಬಾರ್ಥ್ ರವರ ಪ್ರಸಿದ್ಧ “Death of the Author” ಸಿದ್ಧಾಂತವನ್ನು ಉಲ್ಲೇಖಿಸಿ ಕೃತಿ ಪ್ರಕಟವಾದ ನಂತರ ಅದರ ಅರ್ಥವನ್ನು ಲೇಖಕನ ಉದ್ದೇಶದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ, ಓದುವರ ವ್ಯಾಖ್ಯಾನವು ಅಷ್ಟೇ ಮುಖ್ಯ ಎಂದು ತಿಳಿಸಿದರು. ದಲಿತ ಸಾಹಿತ್ಯದ ಮಹತ್ವವನ್ನು ವಿವರಿಸುವ ಸಂದರ್ಭದಲ್ಲಿ ಮರಾಠಿ ಆತ್ಮಕಥೆಗಳ ಕುರಿತು ಮಾತನಾಡಿ “I Am a Born Criminal” ಉದಾಹರಣೆಯ ಮೂಲಕ ಸಮಾಜದ ರೂಢಿಗಳು, ಜಾತಿ ವ್ಯವಸ್ಥೆ ಮತ್ತು ಅಸಮಾನತೆಗಳನ್ನು ಸಾಹಿತ್ಯ ಹೇಗೆ ಪ್ರಶ್ನಿಸುತ್ತದೆ ಎಂಬುದನ್ನು ವಿವರಿಸಿದರು. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳ ಕುರಿತು ಮಾತನಾಡಿದ ಅವರು, ಓದುವರು ತಮ್ಮದೇ ದೃಷ್ಟಿಕೋನದಿಂದ ಕೃತಿಗಳನ್ನು ವಿಶ್ಲೇಷಿಸುತ್ತಾರೆ. ಕೆಲವರು ತೇಜಸ್ವಿಯವರ ಕಾದಂಬರಿಗಳಲ್ಲಿ ಜಾಗತೀಕರಣ (LPG) ದ ಪ್ರಭಾವವನ್ನು ಕಂಡರೂ, ಲೇಖಕರು ಅದನ್ನು ನಿರಾಕರಿಸಿರುವ ಉದಾಹರಣೆಯನ್ನು ನೀಡಿದರು. ಓದುಗನ ಅನುಭವದಿಂದ ಹೊಸ ಅರ್ಥಗಳು ಹುಟ್ಟಿಕೊಳ್ಳುವುದೇ ಸಾಹಿತ್ಯ ವಿಮರ್ಶೆಯ ಮೂಲತತ್ವ ಎಂದು ಹೇಳಿದರು. ವಿಲಿಯಂ ಶೇಕ್ಸಪಿಯರ್ ರವರ “The Merchant of Venice” ನಾಟಕವನ್ನು ಉಲ್ಲೇಖಿಸಿ, ಆಧುನಿಕ ವಿಮರ್ಶಕರು ಯಹೂದಿ – ಕ್ರೈಸ್ತ ಸಂಬಂಧಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಹೊಸ ದೃಷ್ಟಿಕೋನದಲ್ಲಿ ವಿಶ್ಲೇಷಿಸುತ್ತಾರೆ. ಸಾಹಿತ್ಯದ ಅರ್ಥವು ಕಾಲಾನುಗುಣವಾಗಿ ಹೊಸ ವ್ಯಾಖ್ಯಾನಗಳನ್ನು ಪಡೆಯುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಾಹಿತ್ಯವನ್ನು ಪ್ರೀತಿಯಿಂದ ಅಧ್ಯಯನ ಮಾಡುವಂತೆ ಕರೆ ನೀಡಿದ ಅವರು, ಇಂಗ್ಲೀಷ್ ಭಾಷೆಯ ಜಾಗತಿಕ ಮಹತ್ವವನ್ನು ವಿವರಿಸಿದರು. ತಾವು ಅದೇ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, “ಈ ಕಾಲೇಜು ನನಗೆ ಬದುಕು ಕೊಟ್ಟಿದೆ. ಈ ಸಂಸ್ಥೆಗೆ ಶ್ರೀಮಂತ ಪರಂಪರೆ ಇದೆ. ಆದ್ದರಿಂದ ಈ ಕಾಲೇಜಿನ ವಿದ್ಯಾರ್ಥಿಗಳಾಗಿರುವುದಕ್ಕೆ ಹೆಮ್ಮೆಪಡಬೇಕು” ಎಂದು ಹೇಳಿದರು. ನಂತರ ನಡೆದ ಸಂವಾದದಲ್ಲಿ “ಸಮಾಜವನ್ನು ಹೇಗೆ ಬದಲಾಯಿಸಬಹುದು?” ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು “ನಾವು ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಸಮಾಜ ಸಾಕಷ್ಟು ಬದಲಾಗಿದೆ. ಶಿಕ್ಷಣ ಮತ್ತು ಅವಕಾಶಗಳಲ್ಲಿ ಇಂದು ಬಹಳಷ್ಟು ಸಮಾನತೆ ಬಂದಿದೆ. ಸಕಾರಾತ್ಮಕ ಬದಲಾವಣೆಗಳನ್ನು ನಾವು ಸ್ವೀಕರಿಸಬೇಕು” ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ. ಎಸ್. ರವರು ಆಂಗ್ಲ ಭಾಷಾ ಅಧ್ಯಯನದ ಉಪಯುಕ್ತತೆಯನ್ನು ವಿವರಿಸಿ, ಸಾಹಿತ್ಯದ ಅಧ್ಯಯನದಿಂದ ಭಾಷೆಯ ಮೇಲೆ ಪ್ರಭುತ್ವವನ್ನು ಸಾಧಿಸಲು ಸಾಧ್ಯವೆಂದು ನುಡಿದರು. ಬಿ.ಎ. ಪದವಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಐಚ್ಚಿಕ ವಿಷಯಗಳೆರಡನ್ನು ಹೊಂದಿರುವ ವಿಷಯ ಸಮೂಹದ ಮಹತ್ವವನ್ನು ಅವರು ತಿಳಿಸಿದರು.
ಎಂಡಿಎಫ್ ನ ಕಾರ್ಯದರ್ಶಿ ಡಾ. ಎಚ್. ಎಂ. ಶಿವಕುಮಾರ ರವರು ಮಾತನಾಡಿ ಸಾಹಿತ್ಯದ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವಂತೆ ಮತ್ತು ಗ್ರಂಥಾಲಯವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಉಪನ್ಯಾಸಕರಾದ ಡಾ. ಹರ್ಷ ವಿಮನ್, ಅಪರ್ಣ, ಶುಭಾ ಮತ್ತಿತರರು ಇದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ವಿದ್ಯಾರ್ಥಿ ಶಶಿಧರ್ ನಡೆಸಿಕೊಟ್ಟರು ಮತ್ತು ಕ್ಲಬ್ ನ ಅಧ್ಯಕ್ಷರಾದ ಮಹೇಶ ಕಾರ್ಯದರ್ಶಿ ಉಷಾ ಮತ್ತು ಖಜಾಂಚಿ ಸಂಜನಾ ವೇದಿಕೆಯಲ್ಲಿ ಹಾಜರಿದ್ದರು. ಸಾಹಿತ್ಯಾಸಕ್ತ ವಿದ್ಯಾರ್ಥಿಗಳ ಉತ್ತಮ ಸಂವಾದ ಮತ್ತು ಸ್ಪಂದನೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಯಿತು.
