ಮಗು ಕಾಣೆಯಾದ ತಕ್ಷಣ ಯಾವುದೇ ವಿಳಂಬವಿಲ್ಲದೆ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ಪಡೆದು, ತಕ್ಷಣ ಎಫ್.ಐ.ಆರ್ ದಾಖಲಿಸಿಕೊಳ್ಳಬೇಕು.
ಪ್ರಾಥಮಿಕ ಪ್ರಯತ್ನದಿಂದ ಪತ್ತೆ ಹಚ್ಚುವುದು ಸುಲಭವಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ತಿಳಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್,
ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಡಿಎಆರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಾಣೆಯಾದ ಮಕ್ಕಳ ಪತ್ತೆ ಹಚ್ಚಲು ವಿಶೇಷ ಕಾರ್ಯಪಡೆ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಗು ಕಾಣೆಯಾದ ತಕ್ಷಣ ಎಫ್ ಐ ಆರ್ ದಾಖಲಿಸಿಕೊಂಡು ಕಾರ್ಯೋನ್ಮುಖರಾಗಬೇಕು. ವಿಳಂಬ ಆದರೆ ಪತ್ತೆ ಹಚ್ಚುವುದು ಕಷ್ಟ.
ಮಗು ಕಾಣೆಯಾದ ತಕ್ಷಣವೇ ಆದ್ಯತೆಯ ಮೇರೆಗೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ಪಡೆ ರಚಿಸಬೇಕು.
ಕಾಣೆಯಾದ ಮಗುವಿನ ಭಾವಚಿತ್ರ ಮತ್ತು ವಿವರಗಳನ್ನು ರಾಜ್ಯ ಹಾಗೂ ದೇಶದ ಎಲ್ಲಾ ಪೊಲೀಸ್ ಠಾಣೆಗಳಿಗೆ ತಕ್ಷಣವೇ ರವಾನಿಸಬೇಕು.
ಮಕ್ಕಳು ಕಾಣೆಯಾದ ಪ್ರಕರಣಗಳಲ್ಲಿ ಮೊದಲ ೨೪ ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ೧೬೧೨ ಠಾಣೆಗಳಿದ್ದು ಪ್ರತಿ ಠಾಣೆಯ ಪೇದೆಗಳು ಹಾಗೂ ಅಧಿಕಾರಿಗಳಿಗೆ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸಲು ಸೂಚಿಸಲಾಗಿದ್ದು, ಪೇದೆಗಳು ಸೇರಿದಂತೆ ಎಲ್ಲ ಪೊಲೀಸ್ ಅಧಿಕಾರಿಗಳು ಈ ಕೆಲಸವನ್ನು ದಕ್ಷತೆಯಿಂದ ಮಾಡುತ್ತಿದ್ದಾರೆಂದು ಶ್ಲಾಘಿಸಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ದಾಖಲಿಸಿದ ಎರಡು ತಿಂಗಳ ನಂತರ ಶಾಲೆಗೆ ಸದರಿ ಮಕ್ಕಳು ಬರುತ್ತಿದ್ದಾರಾ ಎಂದು ಪರಿಶೀಲಿಸಬೇಕು ಎಂದು ತಿಳಿಸಿದರು.
ಕಾಣೆ ಮತ್ತು ಪತ್ತೆಯಾದ ಮಕ್ಕಳು: 2026 ರ ಜನವರಿ ರಿಂದ ಜೂನ್ ವರೆಗಿನ ಅವಧಿಯಲ್ಲಿ ಜಿಲ್ಲಾದ್ಯಂತ ಒಟ್ಟು 111 ಮಕ್ಕಳು ಕಾಣೆಯಾಗಿದ್ದು ಈ ಪೈಕಿ ಯಶಸ್ವಿಯಾಗಿ 100 ಮಕ್ಕಳನ್ನು (ಶೇ. 90 ಕ್ಕೂ ಹೆಚ್ಚು) ಪತ್ತೆ ಹಚ್ಚಲಾಗಿದೆ.ಕಾಣೆಯಾದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 98 ಎಫ್ ಐ ಆರ್ ಗಳು ದಾಖಲಾಗಿವೆ.
ಪ್ರಸ್ತುತ 11 ಮಕ್ಕಳು ಪತ್ತೆಯಾಗಬೇಕಿದ್ದು, ಕಾರ್ಯಪಡೆಯು ಶೋಧ ಕಾರ್ಯವನ್ನು ಚುರುಕುಗೊಳಿಸಬೇಕು ಮತ್ತು ಬಾಲ್ಯವಿವಾಹ ಹಾಗೂ ಮಕ್ಕಳ ಕಳ್ಳಸಾಗಣೆಯಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಲ್ಯವಿವಾಹ ಪ್ರಕರಣಗಳಿಗೆ ಒಳಗಾಗಿ ಪತ್ತೆಯಾಗಿರುವ ಮಕ್ಕಳ ಸಂಖ್ಯೆ 34
ಮನುಷ್ಯ ಕಳ್ಳಸಾಗಣೆ ಯಿಂದ ರಕ್ಷಿಸಲ್ಪಟ್ಟ ಮಕ್ಕಳು 19 ಮತ್ತು
ಚಾರ್ಜ್ಶೀಟ್ ಸಲ್ಲಿಸಲಾದ ಪ್ರಕರಣಗಳು24 ಇದೆ ಎಂದು ತಿಳಿಸಿದ ಅವರು ಜೆಜೆ ಕಾಯ್ದೆಯಡಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸಮಯಕ್ಕೆ ನೋಟಿಸ್ ನೀಡುವ ಕೆಲಸ ಆಗಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಸಂತೋಷ್ ಎಂ.ಎಸ್ ಮಾತನಾಡಿ, ಕಾಣೆಯಾದ ಮಕ್ಕಳ ಪ್ರಕರಣದಲ್ಲಿ ತಕ್ಷಣ ಎಫ್ ಐ ಆರ್ ಮಾಡಿಕೊಳ್ಳಬೇಕು.
ಈ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರಾಥಮಿಕ ವಿಚಾರಣೆ ಅಗತ್ಯವಿಲ್ಲ. ಆದ್ದರಿಂದ ತಕ್ಷಣ ಕ್ರಮ ವಹಿಸಬೇಕು ಎಂದರು.
ಕಮ್ಯುನಿಟಿ ಮೀಡಿಯೇಷನ್ ಮೂಲಕ ಕೌಟುಂಬಿಕ ಹಾಗೂ ಇತರೆ ಸಣ್ಣಪುಟ್ಟ ವಿವಾದಗಳು, ಜಗಳಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಕೋರ್ಟ್ ಮೆಟ್ಟಿಲೇರದೆ, ಪರಸ್ಪರ ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಾಗಿದೆ.ಇದರಿಂದ ಕೋರ್ಟ್ ಪ್ರಕರಣ ಕಡಿತಗೊಳಿಸಿ ವಿವಾದಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಡಿಡಿಪಿಐ ಮಂಜುನಾಥ್ ಎಸ್ ಆರ್, ಡಿವೈಎಸ್ ಪಿ ಸಂಜೀವ್ ಕುಮಾರ್, ಪೊಲೀಸ್ ಹಾಗೂ ಇತರೆ ಅಧಿಕಾರಿಗಳು, ನೌಕರರು ಹಾಜರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ ಸ್ವಾಗತಿಸಿದರು.
