ಆರೋಗ್ಯ ವಿಜ್ಞಾನ ಮತ್ತು ಜೀನೋಮಿಕ್ಸ್ ಕ್ಷೇತ್ರಗಳಲ್ಲಿನ ಸಂಶೋಧನೆಗಳು ಮಾನವ ಜೀವನದ ಗುಣಮಟ್ಟ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ “ಆರೋಗ್ಯ ಮತ್ತು ರೋಗಗಳಲ್ಲಿ ಆಣ್ವಿಕ ಕಾರ್ಯವಿಧಾನಗಳು ಹಾಗೂ ಜೀನೋಮಿಕ್ ಒಳನೋಟಗಳು” ವಿಷಯ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಸಾಂಪ್ರದಾಯಿಕ ಪಠ್ಯಕ್ರಮ, ಕೇಂದ್ರಿತ ಕಲಿಕಾ ವಿಧಾನದಿಂದ ಹೊರಬಂದು ಆಧುನಿಕ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಸಂಶೋಧಕರು ನವೀನ ಆಲೋಚನೆಗಳು ಮತ್ತು ವೈಜ್ಞಾನಿಕ ಮನೋಭಾವದೊಂದಿಗೆ ಸಮಾಜಮುಖಿ ಸಂಶೋಧನೆ ಕೈಗೊಳ್ಳಬೇಕು ಹಾಗೂ ಪ್ರಮಾಣಪತ್ರ ಕೋರ್ಸ್ಗಳ ಮೂಲಕ ಹೊಸ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ. ಕೆ. ಕೇಶವ್ ಮಾತನಾಡಿ, ಅಣು ಜೀವಶಾಸ್ತ್ರ ಮತ್ತು ಜೀನೋಮಿಕ್ಸ್ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ರೋಗ-ನಿರ್ದಿಷ್ಟ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ತೆರೆದಿವೆ ಎಂದು ಹೇಳಿದರು. ವೈಯಕ್ತಿಕ ವೈದ್ಯಕೀಯ ಮತ್ತು ನಿಖರ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಯಲ್ಲಿ ಕ್ಷೇತ್ರಗಳ ಮಹತ್ವವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ವೆಂಕಟೇಶ್ ಮಾತನಾಡಿ, ಆರೋಗ್ಯ ಮತ್ತು ರೋಗಗಳಲ್ಲಿ ಆಣ್ವಿಕ ಕಾರ್ಯವಿಧಾನಗಳು ಹಾಗೂ ಜೀನೋಮಿಕ್ಸ್ ಕ್ಷೇತ್ರದ ಇತ್ತೀಚಿನ ಸಂಶೋಧನೆಗಳ ಕುರಿತು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಂತಹ ಕಾರ್ಯಕ್ರಮಗಳು ಜ್ಞಾನ ವಿನಿಮಯ ಹಾಗೂ ಸಂಶೋಧನಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಡಿವಿಎಸ್ ಸಮಿತಿ ಅಧ್ಯಕ್ಷ ಬಸಪ್ಪ ಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಸಂಶೋಧನೆ, ನಾವೀನ್ಯತೆ ಮತ್ತು ಸಮಾಜಮುಖಿ ಚಿಂತನೆಗೆ ಉತ್ತೇಜನ ನೀಡುವ ವೇದಿಕೆಗಳಾಗಬೇಕು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ ಮಾತನಾಡಿ ವಿಚಾರ ಸಂಕಿರಣದ ಉದ್ದೇಶ ಮತ್ತು ಮಹತ್ವ ವಿವರಿಸಿದರು.
ವಿಚಾರ ಸಂಕಿರಣದಲ್ಲಿ ದೇಶ ವಿದೇಶಗಳ ತಜ್ಞರು, ಸಂಶೋಧಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರೋಗ್ಯ ವಿಜ್ಞಾನ, ಆಣ್ವಿಕ ಜೀವಶಾಸ್ತ್ರ ಮತ್ತು ಜೀನೋಮಿಕ್ಸ್ ಕ್ಷೇತ್ರಗಳಲ್ಲಿನ ಇತ್ತೀಚಿನ ಸಂಶೋಧನೆಗಳು ಹಾಗೂ ತಾಂತ್ರಿಕ ಬೆಳವಣಿಗೆಗಳ ಕುರಿತು ಉಪನ್ಯಾಸಗಳು ಮತ್ತು ವೈಜ್ಞಾನಿಕ ಚರ್ಚೆಗಳು ನಡೆದವು. ಡಿವಿಎಸ್ ಉಪಾಧ್ಯಕ್ಷ ಜಿ.ಮಧುಸೂದನ್, ಡಾ. ಎ.ಸತೀಶ್ಕುಮಾರ್ ಶೆಟ್ಟಿ, ನಿರ್ದೇಶಕ ಕೆ.ಎನ್.ರುದ್ರಪ್ಪ ಕೊಳಲೆ, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಆಹ್ವಾನಿತ ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಪ್ರಿಯಾಂಕ ಎಂ.ಬಿ. ವಂದನಾರ್ಪಣೆ ಸಲ್ಲಿಸಿದರು. ಇಂಗ್ಲಿಷ್ ವಿಭಾಗದ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
ಸಂಶೋಧಕರು ನವೀನ ಆಲೋಚನೆಗಳು ಮತ್ತು ವೈಜ್ಞಾನಿಕ ಮನೋಭಾವದೊಂದಿಗೆ ಸಮಾಜಮುಖಿ ಸಂಶೋಧನೆ ಕೈಗೊಳ್ಳಿ : ಪ್ರೊ.ಶರತ್ ಅನಂತಮೂರ್ತಿ
Date:
