ಅಂತಾರಾಷ್ಟ್ರೀಯ ಖ್ಯಾತಿಯ ಪರಿಸರ ವಿಜ್ಞಾನಿ, ಚಿಂತಕ, ಜನಪ್ರಿಯ ಅಧ್ಯಾಪಕ, ಕೃಷಿಕ ಡಾ. ಬಿ ಇ ರಂಗಸ್ವಾಮಿ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೊತ್ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯ ಆರಂಭವಾದಗಿನಿಂದ ಹೊರಗಿನವರೇ ಈ ಹುದ್ದೆಯನ್ನು ಅಲಂಕರಿಸಿದ್ದರು. ಈಸಲ ಸ್ಥಳೀಯರಿಗೆ ಈ ಅವಕಾಶ ಒದಗಿಬಂದಿದೆ.
ರಂಗಸ್ವಾಮಿ ಮೂಲತಃ ಹೊಳಲ್ಕೆರೆ ತಾಲ್ಲೂಕಿನ ಬಿದರಕೆರೆ ಗ್ರಾಮದವರು.
ಬೆಂಗಳೂರು ವಿವಿಯಲ್ಲಿ ಬಿಎಸ್ಸಿ ಪದವಿ ಪೂರೈಸಿದ ಅವರು, 1995ರಲ್ಲಿ ಇಲ್ಲಿಯೇ ಎಂಎಸ್ಸಿ ಪಡೆದರು.
ಫ್ಲೋರಿಡಾ ಯುಎಸ್ಎ, ರೋಸ್ಕಿಲ್ಡ್ ವಿಶ್ವವಿದ್ಯಾಲಯ, ಡೆನ್ಮಾರ್ಕ್ನಿಂದ ವಾಯುಜೀವಶಾಸ್ತ್ರದ ವಿವಿಧ ಅಂಗ ವಿಷಯಗಳಲ್ಲಿ ಪದವಿಗಳನ್ನು ಪಡೆದಿದ್ದಾರೆ.
ಅಮೆರಿಕಾದ ಫ್ಲೋರಿಡಾದ ಎನ್ವಿರಾನ್ಮೆಂಟಲ್ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿಯಲ್ಲಿ ಬ್ಯಾಕ್ಟೀರಿಯಾಲಜಿ ಮತ್ತು ಏರ್ ಸ್ಯಾಂಪ್ಲಿಂಗ್ ತಂತ್ರಜ್ಞಾನದಲ್ಲಿ ಉನ್ನತ ತರಬೇತಿ ಪಡೆದಿದ್ದಾರೆ.
ಅಲ್ಲದೆ, ಡೆನ್ಮಾರ್ಕ್ನ ರೋಸ್ಕಿಲ್ಡೆ ವಿಶ್ವವಿದ್ಯಾಲಯದಲ್ಲಿ ಏರೋಬಯಾಲಜಿ ಕೋರ್ಸ್ ಪೂರೈಸಿದ್ದಾರೆ.
ಇವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ 70 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಭಾರತ ಸರ್ಕಾರದ ಡಿಬಿಟಿ, ಡಿಎಸ್ಟಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಸುಮಾರು 1.75 ಕೋಟಿಗೂ ಅಧಿಕ ಮೊತ್ತದ ಸಂಶೋಧನಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಅಲ್ಲದೆ ಭಾರತೀಯ ಪೇಟೆಂಟ್ಗೂ ಅರ್ಜಿ ಸಲ್ಲಿಸಿದ್ದಾರೆ. ಪೋಲೆಂಡ್, ಆಸ್ಟ್ರೇಲಿಯಾ, ಇಟಲಿ ಮುಂತಾದ ದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ದಾವಣಗೆರೆ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ
ಪ್ರಾಧ್ಯಾಪಕ, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ, ದಾವಣಗೆರೆ ಜಿಲ್ಲೆಯ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ದಾವಣಗೆರೆ ಮಿಡ್ ಟೌನ್ ರೋಟರಿ ಕ್ಲಬ್ ಅಧ್ಯಕ್ಷರಾಗಿ ಸೇವಾ ಅನುಭವ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಪದವಿ ಪಡೆಯುವಾಗ ಸಾಹಿತ್ಯ, ರಂಗಭೂಮಿ ಕ್ಷೇತ್ರದ ನಂಟನ್ನು ಬೆಳೆಸಿಕೊಂಡವರು.ಬಿಡುವಿನ ವೇಳೆಯಲ್ಲಿ ತಮ್ಮ ಗ್ರಾಮ ಬಿದರಕೆರೆಯ ಹೊಲದಲ್ಲಿ
ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡವರು.
2008ರಲ್ಲಿ ಅಮೆರಿಕಾ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಇವರ ವೈಜ್ಞಾನಿಕ ಸಾಧನೆಯನ್ನು ಗುರುತಿಸಿ ಬೋಸ್ಟನ್ನ ಕ್ವಿನ್ಸಿ ಮತ್ತು ನ್ಯೂ ಬೆಡ್ಫೋರ್ಡ್ ನಗರಗಳ ಮೇಯರ್ಗಳು ಇವರಿಗೆ “ಗೌರವಾನ್ವಿತ ಪೌರತ್ವ” (Honorary Citizen of Quincy) ನೀಡಿ ಗೌರವಿಸಿದ್ದರು. ಇದರೊಂದಿಗೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ತಾಂತ್ರಿಕ ಶಿಕ್ಷಕ ಪ್ರಶಸ್ತಿ (ರಾಜಾರಾಮ್ ಬಾಪು ನ್ಯಾಷನಲ್ ಅವಾರ್ಡ್) ಹಾಗೂ ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ.
ವರದಿ ಕೃಪೆ: ನಾಗರಾಜ ಸಿರಿಗೆರೆ
