Belur Gopala Krishna ಕಾಂಗ್ರೆಸ್ ಶಾಸಕರ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕೇರಳ ಮುಖ್ಯಮಂತ್ರಿ ಆಯ್ಕೆ ನಂತರವೇ ದೆಹಲಿಗೆ ತೆರಳುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ಹೇಳಿದರು. ಈಗ ಕೇರಳ ಸಿಎಂ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ, ಮುಂದಿನ 2 ರಿಂದ 3 ದಿನಗಳಲ್ಲಿ ಸಭೆ ನಡೆಸಿ ಸುಮಾರು 30 ರಿಂದ 35 ಮಂದಿ ಶಾಸಕರು ದೆಹಲಿಗೆ ತೆರಳಲಿದ್ದಾರೆ ಎಂದರು.
ಈ ಬಾರಿ “ಮಾಡು ಇಲ್ಲವೇ ಮಡಿ” ಹೋರಾಟದ ರೀತಿಯಲ್ಲಿ ನಮ್ಮ ಹೋರಾಟ ಇರಲಿದೆ ಎಂದು ಸ್ಪಷ್ಟಪಡಿಸಿದ ಅವರು, ಮೂರು ವರ್ಷಗಳಿಂದ ಕೆಲವರು ಅಧಿಕಾರ ಅನುಭವಿಸಿದ್ದಾರೆ. ಈಗ ಪಕ್ಷವನ್ನು ಇನ್ನಷ್ಟು ಶಕ್ತಿಯುತಗೊಳಿಸಲು ಸಂಪುಟ ಪುನಾರಚನೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಈಗಾಗಲೇ 15 ಮಂದಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಕುರಿತು ಹೇಳಿದ್ದಾರೆ. ಆದರೆ ನಾವು 20ಕ್ಕೂ ಹೆಚ್ಚು ಮಂದಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.
Belur Gopala Krishna “ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮಂದಿ ದೆಹಲಿಗೆ ಹೋಗ್ತೀವಿ. ಖಂಡಿತವಾಗಿಯೂ ಸಂಪುಟ ಪುನಾರಚನೆ ಆಗಬೇಕು. ಬಹಳಷ್ಟು ಜನ ಕಾಯುತ್ತಿದ್ದಾರೆ. ಅವರೇ ಇರಬೇಕು ಅಂತಿಲ್ಲ. ಆರು ತಿಂಗಳು ಹೆಚ್ಚುವರಿಯಾಗಿ ಇದ್ದಾರೆ. ಪಕ್ಷ ಶಕ್ತಿಯುತವಾಗಬೇಕಾದರೆ ಬದಲಾವಣೆ ಅಗತ್ಯ,” ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು. ಮೇ 28 ಮತ್ತು 29ರೊಳಗೆ ದೆಹಲಿ ಭೇಟಿ ನಿಶ್ಚಯವಾಗಿದ್ದು, 15 ದಿನಗಳೊಳಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟದ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದು ರಾಷ್ಟ್ರೀಯ ನಾಯಕರ ಕೈಯಲ್ಲಿರುವ ವಿಷಯ. ಅದಕ್ಕೆ ಸಂಬಂಧಿಸಿದಂತೆ ನಾವು ಏನೂ ಹೇಳುವುದಿಲ್ಲ ಎಂದರು.
