Kuvempu University ಭವಿಷ್ಯದಲ್ಲಿ ಶಿಕ್ಷಕರಾಗುವವರಿಗೆ ಕೌಶಲ್ಯಗಳು ಕರಗತವಾಗಿದ್ದರೆ ಉತ್ತಮ ಬೋಧನೆಗೆ ಹಾಗೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಸಂಘಟಿಸಲು ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತಿಳಿಸಿದರು.
ತಾಳಗುಂದದ ಶ್ರೀ ವೀರಭದ್ರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಅಣು ಬೋಧನಾ ಕಾರ್ಯಗಾರ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರ ಬಹುಮುಖಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಆಗ ವಿದ್ಯಾರ್ಥಿಗಳು ಅಭಿಪ್ರೇರಣೆಯಿಂದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಕೌಶಲ್ಯಗಳ ಕಲಿಕೆಯ ಬರದಲ್ಲಿ ಪ್ರಶಿಕ್ಷಣಾರ್ಥಿಗಳು ಯಾಂತ್ರಿಕವಾಗಿ ಅನ್ವಯಿಸಿಕೊಳ್ಳದೆ ನೈತಿಕ, ಮಾನವೀಯ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳಬೇಕೆಂದರು.
ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತ ಹೆಚ್ಚು ಚರ್ಚೆ ಮಾಡುವ ಮೂಲಕ ಸಮಾಜದಲ್ಲಿ ತೆರೆದುಕೊಳ್ಳುವಂತೆ ಮಾಡಬೇಕು. ಮಾತೃಭಾಷೆಗೆ ಮೊದಲ ಆದ್ಯತೆ ನೀಡಿ. ಆದರೆ ಇಂದಿನ ಔದ್ಯೋಗಿಕ ಪ್ರಪಂಚದಲ್ಲಿ ಇಂಗ್ಲಿಷ್ ಭಾಷೆ ಕಲಿಕೆಯೂ ಅತ್ಯಗತ್ಯ ಎಂದರು.
ಮಾಡುತ್ತಾ ಕಲಿ ಎಂಬ ತತ್ವದ ಘಟಕಾಂಶಗಳಿಗೆ ಪೂರಕವಾಗಿ ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಗಳು ಸಾಗಬೇಕು. ಶಿಕ್ಷಕರಾಗಬೇಕೆನ್ನುವವರಿಗೆ ಅಣು ಬೋಧನ ಕಾರ್ಯಗಾರವು ತಾಯಿ ಬೇರಿದ್ದಂತೆ. ಒಂದು ಗಿಡದ ವಿವಿಧ ಭಾಗಗಳಿಗೆ ಪೋಷಕಾಂಶಗಳನ್ನು ಸಾಗಿಸುವ ತಾಯಿ ಬೇರು ಎಷ್ಟು ಮುಖ್ಯವೋ ಅಷ್ಟೇ ಅಣು ಬೋಧನ ಕೌಶಲಗಳು ಪ್ರಶಿಕ್ಷಣಾರ್ಥಿಗಳಿಗೆ ಮುಖ್ಯವಾಗಿವೆ ಎಂದು ಪ್ರತಿಪಾದಿಸಿದರು.
Kuvempu University ಪ್ರಾಂಶುಪಾಲ ಡಾ. ಪರಮೇಶ್ ಹೆಚ್. ಮಸಲವಾಡ ಅಧ್ಯಕ್ಷತೆ ವಹಿಸಿದ್ದರು. ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ವೈ. ದೇವರಾಜ್, ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಜೆ.ಪಿ. ಸುನೀಲ್ ಕುಮಾರ್, ಬೋಧನಾ ವರ್ತುಲ ತಂಡದ ಮಾರ್ಗದರ್ಶಕರಾದ ಗದ್ದಿಗೆಶ್ ಬಿ.ಎಸ್. ಉಪಸ್ಥಿತರಿದ್ದರು.
