ಬುದ್ದನನ್ನು ನಮ್ಮೊಳಗೆ ಇಳಿಸಿಕೊಳ್ಳುವ ಇಚ್ಛಾಶಕ್ತಿ ಇರಬೇಕು. ಆಗ ಶಾಂತಿ, ನೆಮ್ಮದಿ ಲಭಿಸಲು ಸಾಧ್ಯವಾಗುತ್ತದೆ ಎಂದು
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ್ ನುಡಿದರು.
ಜಿಲ್ಲಾಡಳಿತ, ಜಿ.ಪಂ. ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಭಗವಾನ್ ಶ್ರೀ ಬುದ್ದರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ದ ಜಗತ್ತಿಗೆ ಅಹಿಂಸೆ, ಕರುಣೆ ಮತ್ತು ಶಾಂತಿಯ ಸಂದೇಶವನ್ನು ಸಾರಿದ ಮಹಾ ಮಾನವತಾವಾದಿ.
ಬದುಕಿಗೆ ಜ್ಞಾನವನ್ನು ನೀಡಿದ ಜ್ಞಾನಿ ಇವರಾಗಿದ್ದು
ಜೀವನದಲ್ಲಿ ಪರಿಶುದ್ದತೆಯನ್ನು ಅಳವಡಿಸಿಕೊಳ್ಳಬೇಕು. ಮನುಷ್ಯ ಮನುಷ್ಯನಾಗಿ ಬದುಕುವ , ಇತರರಿಗೆ ಸಹಾಯ ಮಾಡುವಂತಹ ಗುಣ ಹೊಂದಬೇಕೆಂದು ಸಾರಿದ್ದಾರೆ.
ಇಂತಹ ಬುದ್ದನ ತತ್ವಗಳು ಸರಳವಾಗಿದ್ದು ನಾವೆಲ್ಲ ಅಳವಡಿಸಿಕೊಳ್ಳೋಣವೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಿರಿವಂತೆ ‘ಚಿತ್ರಸಿರಿ’ಯ ಚಂದ್ರಶೇಖರ್ ಎನ್ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, 2600 ವರ್ಷಗಳ ಇತಿಹಾಸ ಹೊಂದಿರುವ ಬುದ್ದನ ಕಾಲದಲ್ಲಿ ಲಿಪಿ ಇರಲಿಲ್ಲ. ಸುಮಾರು ಒಂದೂವರೆ ಶತಮಾನಗಳ ನಂತರ ಬಂದ ಪಾಲಿ ಭಾಷೆಯಲ್ಲಿ ಬುದ್ದನ ಇತಿಹಾಸ ಬರೆದಿಡಲಾಗಿದೆ. ಅಂದರೆ ಅಲ್ಲಿಯವರೆಗೆ ಬುದ್ದ ಜನರ ಬಾಯಿಂದ ಬಾಯಿಗೆ, ಜನಪದದ ಮೂಲಕ ಸಾಗಿ ಬರುವುದನ್ನು ಕಾಣಬಹುದಾಗಿದೆ.
ಬುದ್ದ ಎಂದಿಗೂ ರೂಢಿಗತ ಬದುಕನ್ನು ಕಣ್ಣು ಮುಚ್ಚಿ ನಂಬಲಿಲ್ಲ. ಪ್ರತಿಯೊಂದನ್ನು ಪ್ರಶ್ನೆ ಮಾಡುತ್ತಿದ್ದ. ಈ ಗುಣವೇ ಬುದ್ದನನ್ನು ನಮ್ಮವರೆಗೆ ಕರೆ ತಂದಿದೆ. ಈ ಪ್ರಶ್ನೆ ಕೇಳುವ ಗುಣ ಎಲ್ಲರಲ್ಲಿ ಬೆಳೆಯಬೇಕು.
ಬುದ್ದ ಬಾಲ್ಯದಿಂದಲೇ ಹಿಂಸೆಯನ್ನು, ಮನುಷ್ಯ ಮನುಷ್ಯನನ್ನು ಶೋಷಿಸುವುದನ್ನು
ವಿರೋಧಿಸುತ್ತಿದ್ದ. ಸಂಸ್ಕೃತಿಯನ್ನು ಉನ್ನತೀಕರಿಸುವ ತುಡಿತ ಅವನಲ್ಲಿ ಇತ್ತು ಎಂದ ಅವರು ನಾವೆಲ್ಲ ಮಾನಸಿಕ ಸಂಸ್ಕೃತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಬುದ್ಧನು ಅಂದಿನ ಕಾಲದ ಸಾಮಾಜಿಕ ತಾರತಮ್ಯಗಳನ್ನು ಬಲವಾಗಿ ವಿರೋಧಿಸುತ್ತಿದ್ದರು. ಮೇಲು-ಕೀಳು ಎನ್ನುವ ಭೇದಭಾವವಿಲ್ಲದೆ ಎಲ್ಲರಿಗೂ ಧರ್ಮದ ಬಾಗಿಲನ್ನು ತೆರೆಯುತ್ತಾರೆ.
ಮೌಢ್ಯ,ಅಸಮಾನತೆ, ತಾರತಮ್ಯ ಹೋಗಲಾಡಿಸುವ ಮಾರ್ಗೋಪಾಯವಾಗಿ ತನ್ನ ಕಾಲ್ನಡಿಗೆಯ ಮೂಲಕ ಪ್ರಯಾಣ ಮಾಡುತ್ತಾನೆ.
ಹುಟ್ಟು, ಬುದುಕು ಅಂದರೆ ಏನೆಂಬ ಪ್ರಶ್ನೆ ಸದಾ ಅವನಿಗೆ ಕಾಡುತ್ತಿತ್ತು. ಹಾಗೂ ಆಕಸ್ಮಿಕವಾದ ಹುಟ್ಟು ಮತ್ತು ಸಾವು ಸಹ ಬುದ್ದನನ್ನು ಸದಾ ಕಾಡುತ್ತಿತ್ತು.
ಮನುಷ್ಯನ ಆಸೆಗೆ ಮಿತಿ ಇರಬೇಕು ಎನ್ನುತ್ತಾ ಆಸೆಯೇ ದುಃಖಕ್ಕೆ ಮೂಲ ಎಂದು ಸಾರುತ್ತಾನೆ. ಹಾಗೂ ಸಾವಿಲ್ಲದ ಮನೆ ಸಾಸಿವೆ ತರುವ ಪ್ರಸಂಗದ ಮೂಲಕ ದುಃಖ ಸಾರ್ವತ್ರಿಕ ಎಂದು ಸಾರಿದ್ದಾನೆ.
ಇದ್ದದನ್ನು ಇದ್ದ ಹಾಗೆ ಹೇಳಿದ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅದು ಬುದ್ದ.
ಇನ್ನೊಬ್ಬರನ್ನು ಅರ್ಥ ಮಾಡಕೊಳ್ಳುವ ಗುಣ, ನಮ್ಮ ನಮ್ಮೊಳಗೇ ಮಾನಸಿಕ ಹಿಂಸೆ ಕೊಟ್ಟುಕೊಳ್ಳುವುದನ್ನು ಬಿಡಬೇಕು.
ದಾನ ಕೊಡುವುದನ್ನು ರೂಢಿಸಿಕೊಳ್ಳಬೇಕು ಎಂದು ಅಂದೇ ಸಾರಿದ್ದರು. ವೈಚಾರಿಕ ಚಿಂತನೆ ಬೆಳಿಸಿಕೊಳ್ಳಬೇಕು. ಅದಕ್ಕಾಗಿ ನಾವು ಅಧ್ಯಯನ ಶೀಲರಾಗಬೇಕು ಎಂದಿದ್ದರು ಎಂದ ಅವರು ಬುದ್ದ ಸೂಕ್ಷ್ಮವಾಗಿ ಜೀವನದ ಎಲ್ಲ ಅಂಶಗಳನ್ನು ತಿಳಿಸಿದ್ದು, ನಾವು ನಮ್ಮೊಳಗೆ ಬುದ್ದನನ್ನು ಇಳಿಸಿಕೊಂಡರೆ ಎಲ್ಲವೂ ಅರ್ಥ ಆಗುತ್ತದೆ ಎಂದು ತಿಳಿಸಿದರು.
ಬುದ್ದ ಧರ್ಮಾಂಕುರ ಟ್ರಸ್ಟ್ ಅಧ್ಯಕ್ಷರಾದ ಪ್ರೊ.ರಾಚಪ್ಪ ಬುದ್ದ ವಂದನೆ ನೆರವೇರಿಸಿಕೊಟ್ಟರು. ನೀಲಪ್ಪರವರು ಬುದ್ದ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಲಿಂಗರಾಜ್ ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಹಾಗೂ ಮುಖಂಡರು ಹಾಜರಿದ್ದರು.
ಜಗತ್ತಿಗೆ ಅಹಿಂಸೆ, ಕರುಣೆ ,ಶಾಂತಿ ಸಂದೇಶ ಸಾರಿದ ಮಾನವತಾವಾದಿ ಭಗವಾನ್ ಬುದ್ಧ- ಸಿ.ಎಸ್.ಚಂದ್ರಭೂಪಾಲ್
Date:
