Bharat scout and Guides ವಿಪತ್ತು ಸಂದರ್ಭಗಳಲ್ಲಿ ಪ್ರಾಣ ಮತ್ತು ಆಸ್ತಿ ಹಾನಿ ತಡೆಗಟ್ಟಲು, ಯುವ ಸ್ವಯಂ ಸೇವಕರಿಗೆ ತರಬೇತಿ ನೀಡುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಕಮಾಂಡಿಂಗ್ ಆಫೀಸರ್ ಲೆಪ್ಟಿನೆಂಟ್ ಕರ್ನಲ್ ಮಾಣಿಕ್ ಪಟಾನಿಯಾ ಹೇಳಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಸಹಯೋಗದೊಂದಿಗೆ ಶಿವಮೊಗ್ಗದ 300 ಎನ್ಸಿಸಿ ಕೆಡೆಟ್ಗಳಿಗೆ ಗಾಜನೂರಿನ ಜವಾಹರ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಕೇಂದ್ರ ಗೃಹ ಮಂತ್ರಾಲಯ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವ ಆಪದ್ ಮಿತ್ರ” ನಾಗರೀಕ ರಕ್ಷಣಾ ತರಬೇತಿ ಶಿಬಿರದ ಉದ್ಘಾಟನೆಯಲ್ಲಿ ಮಾತನಾಡಿದರು.
ಯುವ ಆಪದ್ ಮಿತ್ರ ಯೋಜನೆಯು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತ್ ಸೌಟ್ಸ್ & ಗೈಡ್ಸ್ ಕರ್ನಾಟಕದ ಸಹಯೋಗದೊಂದಿಗೆ ರೋವರ್ಸ್, ರೇಂಜರ್ಸ್, ಸ್ವಯಂ ಸೇವಕರಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡುವ ಒಂದು ಪ್ರಮುಖ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ ಯುವ ಜನರಿಗೆ ಪ್ರವಾಹ, ಭೂಕಂಪ ಮುಂತಾದ ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳಲು ಕೌಶಲ್ಯ ಮತ್ತು ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಭಾರತ್ ಸೌಟ್ಸ್ ಮತ್ತು ಗೈಡ್ಸ್ನ ರೋವರ್ಸ್, ರೇಂಜರ್ಸ್ ಮತ್ತು ದಳನಾಯಕರನ್ನು ತರಬೇತಿ ಶಿಬಿರಗಳಿಗೆ ನಿಯೋಜಿಸಲಾಗುತ್ತದೆ. ವಿವಿಧ ಜಿಲ್ಲೆಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ತರಬೇತಿ ಪಡೆದವರು ತುರ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆ ಮತ್ತು ಸಹಾಯ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾಗಿದೆ ಎಂದರು.
Bharat scout and Guides ಜಿಲ್ಲಾ ಆಯುಕ್ತ (ರೋವರ್) ಕೆ.ರವಿ ಅವರು ಯುವ ಆಪದ್ ಮಿತ್ರ ತರಬೇತಿಯ ಬಗ್ಗೆ ಎನ್ಸಿಸಿ ಕೆಡೆಟ್ಗಳಿಗೆ ವಿವರಣೆ ನೀಡಿದರು. ಆರ್.ಕೆ ಶಂಕರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ.ವಿ ಉಪಸ್ಥಿತರಿದ್ದರು. ಶಿವಮೊಗ್ಗ ಜಿಲ್ಲೆಯ 300 ಎನ್ಸಿಸಿ ಕೆಡೆಟ್ಗಳು ಒಂದು ವಾರ ಯುವ ಆಪದ್ ಮಿತ್ರ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
