Wednesday, April 15, 2026
Wednesday, April 15, 2026

ನಾನು ಕಂಡಂತೆ ಬೆಳಗೆರೆಯ ಬಿಳಿ ಉಡುಪಿನ ಬೆರಗು ಮನುಷ್ಯ

Date:

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ

ಅಧ್ಯಾತ್ಮ  ರಶ್ಮಿ -3

“ಶ್ವೇತವಸ್ತ್ರದ ಸಂತ – ಬೆಳಗೆರೆ ಕೃಷ್ಣಶಾಸ್ತ್ರಿಗಳು”

    ಶಾಸ್ತ್ರಿಗಳು ಸ್ವಭಾವತಃ ಗಂಭೀರ ಮತ್ತು ಭಾವುಕರು. ಭಗವದ್ಗೀತೆ ಮನುಕುಲಕ್ಕೆ ಒಂದು ಆದರ್ಶದ ಗ್ರಂಥ ಎಂಬುದು ಅವರ ಅನುಭವವಾಗಿತ್ತು. ಅವರು ದೇವುಡು ನರಸಿಂಹ ಶಾಸ್ತ್ರಿಗಳಂತಹ ದೊಡ್ಡ ದೊಡ್ಡ ವಿದ್ವಾಂಸರ ಒಡನಾಟ ಹೊಂದಿದ್ದವರು. ಒಂದು ಕಾರ್ಯಕ್ರಮದಲ್ಲಿ ದೇವುಡುರವರು ʼಸ್ಥಿತಪ್ರಜ್ಞೆʼ ಬಗ್ಗೆ ಉಪನ್ಯಾಸ ನೀಡುವುದು ಅವರ ವಿಷಯವಾಗಿತ್ತು. ಮಾತನಾಡುತ್ತಾ ಮಾತನಾಡುತ್ತಾ ಅಲ್ಲಿಯ ಒಬ್ಬ ವ್ಯಕ್ತಿಯು ಒಂದು ಕಾಗದ ತಂದು ಕೊಡುತ್ತಾನೆ. ಅದನ್ನು ನೋಡಿ ಜೇಬಿನಲ್ಲಿ ಇರಿಸಿಕೊಂಡು, ಮತ್ತೆ ಅದೇ ವಿಷಯವನ್ನು ಒಂದೂವರೆ ಎರಡುಗಂಟೆಗಳ ಕಾಲ ಮುಂದುವರೆಸಿ. ನಂತರ ತ್ವರಿತವಾಗಿ ಹೊರಟು ಬಂದರು. ಅದೇ ಕಾರ್ಯಕ್ರಮದಲ್ಲಿ ಶಾಸ್ತ್ರಿಗಳೂ ಸಹಾ ಪಾಲ್ಗೊಂಡಿದ್ದರು. ಅವರನ್ನೂ ಕರೆದುಕೊಂಡು ಬಂದು ಬಿಟ್ಟರು. ರಾಮಯ್ಯ ಪಾರ್ಕಿನ ಕಡೆಗೆ ಬಂದಾಗ ಸಹಜವಾಗಿ ಶಾಸ್ತ್ರಿಗಳು “ಯಾಕೆ ಸರ್‌ ಹಾಗೇ ಅರ್ಧ ಕಾರ್ಯಕ್ರಮದಲ್ಲಿಯೇ ಹೊರಟುಬಿಟ್ಟಿರಲ್ಲ”ಎಂದರು. ಅದಕ್ಕೆ ಮಾತನಾಡದೇ ದೇವುಡುರವರು ತಮ್ಮ ಜೇಬಿನಲ್ಲಿದ್ದ ಕಾಗದ ಇವರ ಕೈಗಿತ್ತರು. ಅದನ್ನು ನೋಡಿ ಶಾಸ್ತ್ರಿಗಳು ಒಂದು ನಿಮಿಷ ಅಚ್ಚರಿ ತುಂಬಿದ ಮೌನಿಗಳಾದರು. ಯಾಕೆ ಹಾಗಾಯ್ತು ತಾತ ? ಎಂದು ನಾನು ಕೇಳಿದಾಗ ಹೇಳಿದರು. ಅದರಲ್ಲಿ ದೇವುಡು ಅವರ ಮಗ ಹಾರ್ಟ ಅಟ್ಯಾಕ್‌ನಿಂದ ತೀರಿಹೋಗಿದ್ದರು ಎಂದು ಬಂದ ಟೆಲಿಗ್ರಾಂ ಕಣೋ ಅದು ಎಂದರು. “ದುಃಖೇಶ್ವನುದ್ವಿಘ್ನಮನಾ ಸುಖೇಷು ವಿಗತಸ್ಪೃಹಃ ವೀತರಾಗಭಯಕ್ರೋಧಾನ್‌ ಸ್ಥಿತಧೀರ್ಮುನಿರುಜ್ಯತೆ” ಎಂಬ ಗೀತೆಯ ಶ್ಲೋಕವನ್ನು ಕೇವಲ ಹೇಳಿ-ಕೇಳುವುದಲ್ಲದೇ ಆಚರಣೆಗೆ ತಂದವರು ದೇವುಡು ಎಂದು ಹೇಳುವಾಗ ತಾತನ ಕಣ್ಣುಗಳಲ್ಲಿ ಒಂದು ವಿಲಕ್ಷಣ ಕಾಂತಿಯಿರುತ್ತಿತ್ತು.

  ಹೀಗೆ ನಾನು ತಾತನ ಜೊತೆಯಲ್ಲಿದ್ದುದು ನನಗೆ ಅನಂತ ಪದ್ಮನಾಭನ ಆಭರಣಗಳ ತಿಜೋರಿಯ ಕೀಲಿಯನ್ನು ಹೊಂದಿದ ಧರ್ಮಾಧಿಕಾರಿಯಂತಾದ ಗರ್ವವಿತ್ತು. ಪ್ರತಿಬಾರಿಯ ಭೇಟಿಯಲ್ಲಿಯೂ ಹೊಸ ಹೊಸ ವಿಚಾರಗಳು ತಾತನಿಂದ ನನ್ನ ಮಸ್ತಕದ ಗ್ರಂಥಾಲಯಕ್ಕೆ ಕೊಡುಗೆಯಾಗಿ ಬರುತ್ತಿದ್ದವು, ತಾತ ನಿಜಕ್ಕೂ ಭಗವದ್ಗೀತೆ ಅಷ್ಟು ಚಂದ ಅಲ್ಲವೇ ? ಪ್ರಸಿದ್ಧ ಗಾಯಕರಾದ ಶ್ರೀ ಘಂಟಸಾಲ ಅವರು ಭಗವದ್ಗೀತೆಯ ಆಯ್ದ ಕೆಲವು ಭಾಗಗಳನ್ನು ಹಾಡಿ, ಅದರ ಅರ್ಥವನ್ನು ತೆಲುಗಿನಲ್ಲಿ ಅರ್ಥಸಿರುವುದು ನಾನು ಕೇಳಿದ್ದೆ. ಅವರೊಟ್ಟಿಗೆ ಮಾತನಾಡುವಾಗ ತಾತ ಎಷ್ಟು ಭಾವುಕರಾಗಿ ಹಾಡಿದಾರೆ ಅಲ್ವೇ ಘಂಟಸಾಲ ಅಂತ ಕೇಳಿದಾಗ ಅವರಿಗೆ ಸಿಟ್ಟು ಬರುತ್ತಿತ್ತು. ಆಗ ಹೇಳುತ್ತಿದ್ದರು “ಏನು ಭಾವುಕತೆಯೋ ಅದು. ಭಗವದ್ಗೀತೆ ಅನ್ನೋದು ನಿರ್ವೀರ್ಯನಿಗೆ (ಅಂದರೆ ಈಗಿನ ಮೆಡಿಕಲ್‌ನ ಡಿಪ್ರೆಷನ್)‌ ಅಥವಾ ಆತ್ಮ ಹತ್ಯೆಯ ಯೋಚನೆಯಿಲ್ಲದ್ದವನಿಗೂ ಬದುಕುವ ಉತ್ಸಾಹ ತುಂಬುವ ಗ್ರಂಥ, ಅದನ್ನು ಹಾಗೇ ಉತ್ಸಾದಲ್ಲಿ ಹೇಳಿದಾಗ ಮಾತ್ರ ಇನ್ನಷ್ಟು ಅರ್ಥಗರ್ಭಿತವಾಗುತ್ತೆ. ಮುಂಡೇದೆ ನಿನಗೆ ಸಂಗೀತ ಮಾತ್ರ ಗೊತ್ತು, ಅರ್ಥದ ಅನುಭವವಾಗೋದಿಕ್ಕೆ ಇನ್ನಷ್ಟು ಟೈಂ ಬೇಕು”ಅಂತ ಬೊಚ್ಚು ಬಾಯಿಯಿಂದ ನಕ್ಕ ತಾತನ ನಗು ನನಗೆ ಬೇಸರ ಮಾಡಲಿಲ್ಲ, ಸಿಟ್ಟು ತರಿಸಲಿಲ್ಲ. ಬದಲಾಗಿ ಅವರ ನಗುವಿನ ಹಿಂದಿದ್ದ ಮಾರ್ಮಿಕತೆ ಮತ್ತು ಆ ಮಗುವಿನ ನಗೆಯ ಅನುಭವ ನನಗಾಯ್ತು. ಪ್ರತಿಸಲವೂ ಅಚ್ಚರಿಗೊಳ್ಳುವ ವಿಷಯಗಳು ನನಗೆ ತಾತನ ವರಗಳಾದವು. ಕಳೆದದ್ದು ಸ್ವಲ್ಪ ಸಮಯವಾಗಿದ್ದರೂ ಅದರ ಅನುಭವ ಮತ್ತು ಜ್ಞಾನ ಅಗಾಧವಾಗಿರುತ್ತಿತ್ತು. ಹೀಗೇ ಒಮ್ಮೆ ಕೇಳಿದೆ ತಾತ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಏನು ಅದು ? ಅಂತ. ಒಮ್ಮೆ ನನ್ನ ಮುಖವನ್ನು ನೋಡಿದರು. ಈಗ ನಾನು ಮೊನ್ನೆ ಹೇಳಿದೆ ಅಲ್ವೇನಪ್ಪ ಏನು ಹೇಳಿದೆ ? ನಾನು “ಭಗವದ್ಗೀತೆ ನಿರ್ವೀರ್ಯನಿಗೂ ಜೀವನೋತ್ಸಾಹ ತುಂಬಿಸುತ್ತೆ”ಅಂತ ಹೇಳಿದ್ರಿ ಎಂದೆ. “ಹೌದಲ್ವಾ ? ಹಾಗಾದರೆ ಭೂತ ಅಂದ್ರೇನು ? ಹಿಂದೆ ಇದ್ದದ್ದು ಈಗ ಇಲ್ಲದೇ ಇರುವುದು. ಅಲ್ವೇ ? “ ಪಿಯುಸಿ ಓದುವ ನನಗೆ ಈ ಮಟ್ಟದ ಜ್ಞಾನ ಇರಲು ಸಾಧ್ಯವೇ ? ಹೌದು ಎಂಬಂತೆ ತಲೆಯಾಡಿಸಿದೆ. ಆಗ ಹೇಳಿದರು ಭಗವದ್ಗೀತೆ ಅನ್ನೋದು ನಮ್ಮ ಬದುಕಿನ ಹೆಜ್ಜೆಗಳನ್ನ ಹೇಗೆ ಇಡಬೇಕು ಮತ್ತೆ ಹೇಗೆ ನಾವು ಎಲ್ಲರೊಟ್ಟಿಗೆ ಬದುಕಬೇಕು ಅಂತ ಹೇಳುತ್ತೆ. ಅದನ್ನು ಸತ್ತ ಪ್ರೇತದ ಬಾಯಿಂದ ಕೇಳಿದ್ರೆ ಹೇಗೆ ಅನುಭವವಾಗುತ್ತೆ ? ಅದಕ್ಕೆ ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರೆ. ಇನ್ನೂ ಒಂದೇ ಮಾತಲ್ಲಿ ಹೇಳೋದಾದರೆ ಅದು ನಡೆದು ತೋರಿಸೋದೇ ಹೊರತು ಹೇಳಿ ಅರ್ಥ ಮಾಡಿಸೋದಲ್ಲ. “ಯದ್ಯದಾಚರತಿಃ ಶ್ರೇಷ್ಠಃ ತತ್ರದೇವೇತರೋ ಜನಃ ಸಯತ್ಪ್ರಮಾಣಂ ಕುತೇ ಲೋಕಸ್ತದನುವರ್ತತೇ” ಅಂದ್ರೆ ನೀನು ನನ್ನ ತಾತ ಅಂತೀಯಲ್ಲ ನಾನು ಏನು ಹೇಳ್ತೀನಿ, ಏನು ಆಚರಣೆ ಮಾಡ್ತೀನಿ ಅದನ್ನು ನೋಡಿಯೇ ಅಲ್ವಾ ನೀನು ಅಳವಡಿಸಿಕೊಳ್ಳೋದು, ಅಥವ ನೀನು ಹಾಗಾಗಬೇಕು, ಹೀಗಾಗಬೇಕು ಅಂತ ಅಂದ್ಕೊಳೋದು ? ಅಂದಾಗ. ನನಗೆ ಮೊಟ್ಟ ಮೊದಲಿಗೆ ತಾತನ ಅಧ್ಯಾತ್ಮದ ಮುಖ ಕಾಣಿಸಿತ್ತು. ಏಕೆಂದರೆ ತಾತ ಮುಕುಂದೂರು ಸ್ವಾಮಿಗಳ ಶಿಷ್ಯರು. ಅವರ ಎಷ್ಟೋ ಕಠಿಣ ಪರಿಸ್ಥಿತಿಗಳಲ್ಲಿ, ಮುಕುಂದೂರು ಸ್ವಾಮಿಗಳು ಇವರ ಬೆನ್ನಿಗೆ ನಿಂತಿದ್ದ ಎಷ್ಟೋ ವಿಚಾರಗಳನ್ನು ತಾತ ಅಪ್ಪನೊಟ್ಟಿಗೆ ಮಾತನಾಡಿದುದು, ನಂತರ “ಯೇಗ್ದಾಗೆಲ್ಲ ಐತೆ” ಓದಿದಾಗ ಮತ್ತೆ ಮತ್ತೆ ತಲೆಕೆಡಿಸುತ್ತಿತ್ತು. ಏನಿದು ? ಎಲ್ಲರೂ ನೋಡುವ ತಾತ ನಾನು ನೋಡುತ್ತಿರುವ ತಾತ ಇಬ್ಬರೂ ಬೇರೆ ಬೇರೆಯೇ ಎನಿಸುತ್ತಿತ್ತು. ಅಪ್ಪನೊಟ್ಟಿಗೆ ಅದನ್ನು ಬಗೆಹರಿಸಿಕೊಳ್ಳಲು ಭಯ. ಏಕೆಂದರೆ ಅಧ್ಯಾತ್ಮದ ಅನುಭವವೇ ನನಗಿಲ್ಲ. ಇನ್ನು ಅವರನ್ನು ಪರಾಮರ್ಶೆ ಮಾಡಲು ನಾನು ಹೇಗೆ ಸಮರ್ಥನಾಗಲು ಸಾಧ್ಯ. ಆದರೆ ಈಗ ನನಗೊಂದು ಕೊರಗಿದೆ ನನ್ನ ಈ ವಯಸ್ಸಿನಲ್ಲಿ ತಾತನ ಒಡನಾಟವಾಗಿದ್ದರೆ ನಾನು ಇನ್ನಷ್ಟು ಅನುಭವಗಳನ್ನು ಪಡೆಯಬಹುದಾಗಿತ್ತು. ಅವರ ಜ್ಞಾನ ವಾರಿಧಿಯಲ್ಲಿ ಕೈಲಾಗುವಷ್ಟು ನಾನು ಖನಿಜಗಳ ಕೊಳ್ಳೆ ಹೊಡೆಯಬಹುದಿತ್ತು.

 ದಿನಗಳುರುಳಿದವು ಎರಡು ವರ್ಷಗಳು ಕಳೆದವು, ಈ ಮಧ್ಯೆ ತಾತನ ಆರೋಗ್ಯ ಪದೇ ಪದೇ ಕೆಡುತ್ತಿತ್ತು. ಈಗ ಅವರು ಬೆಳಗೆರೆಯ ಹೊಲದಲ್ಲಿರುತ್ತಿಲ್ಲ, ಬೆಂಗಳೂರಿನಲ್ಲಿ ರವಿ ಬೆಳಗೆರೆಯವರ ಮನೆಯಲ್ಲೇ ವರ್ಷದ ಬಹುತೇಕ ದಿನಗಳನ್ನು ಕಳೆಯುತ್ತಿದ್ದಾರೆ. ಇಲ್ಲಿ ನಾನು ಅವರ ಸಹವಾಸದಿಂದ ದೂರಾಗಿ, ನೀರಿಲ್ಲದ ತೆಂಗಿನ ಮರದ ಹಾಗೆ ಒಣಗುತ್ತಿದ್ದೇನೆ. ಎರಡು ಬಾರಿ ಹೃದಯಾಘಾತವಾದರೂ ಮುಖದಲ್ಲಿ ಸಣ್ಣ ಭಯವಿಲ್ಲ, ಚಟುವಟಿಕೆಗಳು ಯಾವುದೂ ನಿಂತಿಲ್ಲ, ಮನೆಯಿಂದ ಕಾಲೇಜಿಗೆ ನಡೆದು ಬರಲು ಅಸಾಧ್ಯವಾಗುತ್ತಿತ್ತು ಆದರೆ ಮನೆಯಲ್ಲಿ ಓಡಾಡಲು ಯಾವುದೇ ಸಮಸ್ಯೆಯಿರಲಿಲ್ಲ. “ದೇಹಿನೋಸ್ಮಿನ್‌ ಯಥಾ ದೇಹೇ ಕೌಮಾರೌ ಯೌವನಂ ಜರಾ ತಥಾ ದೇಹಾಂತರಃ ಪ್ರಾಪ್ತಿಃ ಧೀರಸ್ತತ್ರನಮುಹ್ಯತಿ” ದೇಹಕ್ಕೆ ಬಾಲ್ಯ, ಯೌವನ, ನುಪ್ಪು ಸಹಜವಾಗಿ ಒದಗುವ ಸ್ಥಿತಿಗಳು ಇದಕ್ಕೆ ಧೀರರಾದವರು ಹೆದರುವುದಿಲ್ಲ ಹಾಗೂ ತಾನು ಮಾಡಬೇಕಾದ ಕರ್ತವ್ಯಗಳನ್ನು ನಿಲ್ಲಿಸುವುದಿಲ್ಲ. ಎಂಬಂತೆ ತಾತನ ಕೃಷಿ ನಡೆದೇ ಇತ್ತು. ಮಂಕುತಿಮ್ಮನ ಕಗ್ಗ ತಾತನಿಗೆ ಬಹಳ ಪ್ರೀತಿ. ಈಗೀಗ ಕಗ್ಗವು ನನಗೂ ಪ್ರಿಯವೆನಿಸುತ್ತಿದೆ. ಕುಮಾರವ್ಯಾಸ ಭಾರತ, ಮಂಕುತಿಮ್ಮನ ಕಗ್ಗ, ಭಗವದ್ಗೀತೆ, ಉಪನಿಷತ್‌ಗಳು ಹೀಗೆ ಪ್ರತಿಯೋಂದೂ ಆದರ್ಶ ಪುರುಷ ಹೇಗಿರಬೇಕು ಎಂದು ಹೇಳುತ್ತವೆಯೋ ಹಾಗೆ ಎಲ್ಲರಿಗೂ ಆದರ್ಶ ಪುರುಷನಾಗಿ ತಾತ ಇದ್ದರು, ಜಾತಿ-ಮತ, ಧರ್ಮಗಳ ಹಂಗಿಗೆ ಒಳಪಡದೇ, “ಅನ್ನದಾನಂ ಪರಂದಾನಂ ವಿದ್ಯಾದಾನಮದಃ ಪರಃ | ಅನ್ನೇನ ಕ್ಷಣಿಕಃತೃಪ್ತಿಃ ಯಾವಜ್ಜೀವಂಚ ವಿದ್ಯಯಾ ”ಎಂಬಂತೆ ಅನ್ನದಾನವು ಉತ್ತಮ ಆದರೆ ವಿದ್ಯಾದಾನವು ಸ್ರವೋತ್ತಮ, ಏಕೆಂದರೆ ಅನ್ನವು ಕ್ಷಣಿಕವಾದ ಹಸಿವು ಹೋಗಲಾಡಿಸಿದರೆ ವಿದ್ಯೆಯು ಜೀವಮಾನದವರೆಗೆ ಎಲ್ಲರೀತಿಯ ಹಸಿವು ನೀಗಿಸುತ್ತದೆ. ಎನ್ನುವ ಹಾಗೆ, ಶಾಲೆ-ಕಾಲೇಜುಗಳನ್ನು ಮಾಡಿ, ಅಲ್ಲಿ ಉಚಿತ ಶಿಕ್ಷಣ, ಊಟ ವಸತಿಗಳನ್ನು ನೀಡಿ ಅದೆಷ್ಟೋ ಬಡ ಮಕ್ಕಳ ಏಳ್ಗೆಗೆ ಕಾರಣರಾದರು. ಅಲ್ಲಿಯ ಎಲ್ಲ ಕಟ್ಟಡಗಳೂ ಸಹಾ ಶ್ರಮದಾನದಿಂದ ಕಟ್ಟಿದಂಥವುಗಳು, ವಿದ್ಯಾರ್ಥಿ ನಿಲಯ, ಶಾಲೆ-ಕಾಲೇಜು ಕಟ್ಟಡಗಳು, ಶಾರದಾಮಂದಿರ, ಸುಮಾರು 500ಕ್ಕೂ ಅಧಿಕ ಜನ ಕುಳಿತು ಕಾರ್ಯಕ್ರಮ ನಡೆಸಬಹುದಾದ ಸಭಾ ಮಂಟಪ, 200ಕ್ಕೂ ಅಧಿಕ ಮಕ್ಕಳು ಒಮ್ಮೆಲೆ ಊಟ ಮಾಡಬಹುದಾದ ಊಟದ ಹಾಲ್‌, ಎಲ್ಲವೂ ಸಹಾ ಇಂದಿಗೂ ನಾವು ನೋಡಬಹುದು. ಅವರಿಂದ ಲೆಕ್ಕವಿಲ್ಲದಷ್ಟು ಮಂದಿ ಪ್ರಭಾವಿತರಾಗಿ ಜೀವನದಲ್ಲಿ ನೆಲೆಗೊಂಡಿದ್ದಾರೆ ಅಂಥವರಲ್ಲಿ ನಾನೂ ಒಬ್ಬ. ಅಧ್ಯಾತ್ಮವು ಹೇಳುವುದಲ್ಲ ನಡೆಯುವುದು ಎಂದು ತಮ್ಮ ಜೀವನದಲ್ಲಿ ತೋರಿಸಿದರು. ಇಂಥ ಮಹಾನ್‌  ಸಂತ ಚೇತನ ಮಾರ್ಚ್‌ 2013ರ ಬೆಳಗ್ಗೆ ಭೌತಿಕ ಸೂರ್ಯ ಉದಯಿಸುವ ವೇಳೆಗೆ ಬೆಳಗೆರೆಯ ಈ ಸಂತ ಅಸ್ತಂತನಾದರೆ ಹೇಗೆ ಸಹಿಸುವುದು.? ಬೆಂಗಳೂರಿನಿಂದ ಬೆಳಗೆರೆಯವರೆಗೆ ಅಧ್ಯಾತ್ಮದ ಹರಿಕಾರನಿಗೆ, ಸಾಹಿತ್ಯ ಶ್ರೇಷ್ಠನಿಗೆ ಕಂಬನಿ ಮಿಡಿಯದವರಿರಲಿಲ್ಲ. ನಾನೂ ಅಪ್ಪ ಇಬ್ಬರೂ ಮರುದಿನದ ಅಂತ್ಯ ಸಂಸ್ಕಾರದ ಸಮಯಕ್ಕೆ ಹೋದಾಗ ಸಭಾಂಗಣದಲ್ಲಿ ನನ್ನ ಭುಜದ ಮೇಲೆ ಕೈಇಟ್ಟು ಓಡಾಡಿದ, ಅವರ ಪಕ್ಕ ಕುಳಿತಾಗ ತಲೆ ಸವರಿ ಪ್ರೀತಿಯಿಂದ ಮಾತನಾಡಿಸುತ್ತಿದ್ದ ತಾತ ಇಂದು ಮಲಗಿದ್ದಾರೆ. ಮಾತಾನಾಡುತ್ತಿಲ್ಲ ಇನ್ನು ಮಾತನಾಡುವುದೂ ಇಲ್ಲ ಎನ್ನುವುದನ್ನು ಸಹಿಸಲೂ ಅಸಾಧ್ಯ. ಅವರು ಜೀವಂತವಿಲ್ಲ ಎಂದು ನನಗೆ ಭಾಸವಾಗುತ್ತಿಲ್ಲ. ಅದೇ ಬಿಳಿಯ ಜುಬ್ಬ, ಪಂಚೆ ತಲೆಗೆ ಸಾಯಿ ಬಾಬಾ ಅವರ ಹಾಗೆ ಒಂದು ಬಿಳಿಯ ಬಟ್ಟೆ ಕಟ್ಟಿಕೊಂಡು ಮಲಗಿದ್ದಾರೆ, ಇನ್ನು ಸ್ವಲ್ಪ ಹೊತ್ತಿನಲ್ಲಿ ಏಳುತ್ತಾರೆ ಎಂಬಂತಹ ಮುಖಲಕ್ಷಣ ಇದು ಅಧ್ಯಾತ್ಮಿಗಲ್ಲದೇ ನಮ್ಮಂಥ ಸಾಮಾನ್ಯರಿಗೆ ಸಾಧಿಸಲು ಸಾಧ್ಯವೆ ? ತಾತನವರ ದಹನವು ಅವರ ಹೊಲದಲ್ಲಿಯೇ ಆಯಿತು. ಅಲ್ಲಿ ಅವರ ಸ್ಮಾರಕ ಸಣ್ಣ ಕುಟೀರವೊಂದಿದೆ. ಇಂದಿಗೂ ಧ್ಯಾನ ಬೇಕು ಎನ್ನುವವರಿಗೆ ಅಲ್ಲಿ ಪರಿವೆಯಿಲ್ಲದೇ ಗಂಟೆಗಳ ಕಾಲ ಧ್ಯಾನಗೈಯಲು ಪ್ರಕೃತಿಯ ಸಹಕಾರವಿದೆ. ಎಲ್ಲರ ಮಧ್ಯೆ ತಾನು ಇದ್ದು ಎಲ್ಲರನ್ನೂ ಒಗ್ಗೂಡಿಸಿ ಜಗತ್ತಿಗೆ ಶ್ರೇಷ್ಠತೆಯನ್ನು ಸಾರಿದ ತತ್ತ್ವಜ್ಞಾನಿ ತಾತನನ್ನು ನಾನು ಮರೆಯಲಾದೀತೆ ? ಬೆಳಗೆರೆಯ ವಿದ್ಯಾರ್ಥಿಗಳೆಲ್ಲರೂ ನಿಜಕ್ಕೂ ಭಾಗ್ಯವಂತರು. ಏಕೆಂದರೆ ಸಾಹಿತ್ಯ ಲೋಕದ ನಕ್ಷತ್ರಗಳೆಲ್ಲವೂ ಬೆಳಗೆರೆಯ ಬಾನಿನಲ್ಲಿ ಮಿನುಗುತ್ತಿದ್ದವು,  ಹೀಗಿರುವಾಗ ತಾತನನ್ನು ಸಂತನೆನ್ನದೇ ಏನೆನ್ನಬೇಕು ? ಅತ್ಯುತ್ತಮವಾದ ಸಂಸ್ಥೆಯನ್ನು ಪ್ರಾರಂಭಿಸಿ, ತಮ್ಮ ನಂತರ ಏನಾಗುವುದೋ ಎಂದು ಯಾರಾದರೂ ಕಳವಳ ವ್ಯಕ್ತಪಡಿಸಿದಾಗ ನಕ್ಕು ಸುಮ್ಮನಾಗುತ್ತಿದ್ದ ತಾತ, ಮನಸು ಮಾಡಿದ್ದರೆ ತಮಗಿದ್ದ ಪ್ರಭಾವದಲ್ಲಿ ಬೇಕಾದಷ್ಟು ಆಸ್ತಿ, ಹಣ ಮಾಡಬಹುದಾಗಿತ್ತು, ಬೇಕಾದಷ್ಟು ಪ್ರಶಸ್ತಿ ಬಂದರೂ ಅಹಂನಿಂದ ಬೀಗದ, ಸಣ್ಣ ಮಗುವು ಕಂಡರೂ ಅದರ ಹತ್ತಿರ ಬಂದು ಕೆನ್ನೆ ಸವರಿ ಮಾತನಾಡಿಸುವ, ಎಲ್ಲ ಐಶ್ವರ್ಯವಿದ್ದರೂ ಫಕೀರನಂತೆ ಬಾಹ್ಯದಲ್ಲಿಇದ್ದು, ಆಂತರಿಕವಾಗಿ ಅದೆಷ್ಟೋ ಸಿದ್ಧಿಗಳು ಇವರಿಗೆ ಲಭಿಸಿದರೂ ತೋರಿಸದೇ ಜನರಲ್ಲಿ ಒಂದಾದ ಇವರು ಆಧ್ಯಾತ್ಮಿಕ ಸೂರ್ಯನಲ್ಲವೇ ?

ಪ್ರಸಾದ್‌ ಶ್ರೀವತ್ಸ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

JCI Sports and Cultural Club ಬಾಕ್ಸ್ ಕ್ರಿಕೆಟ್ ಟೂರ್ನಿ: ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಚಾಂಪಿಯನ್ಸ್

JCI Sports and Cultural Club ಜೆಸಿಐ ಸ್ಪೋರ್ಟ್ಸ್ ಮತ್ತು ಕಲ್ಚರಲ್...

B.Y. Raghavendra ಭಾರತದಲ್ಲಿ ಮಹಿಳಾ ಮೀಸಲಾತಿಯನ್ನ ಐತಿಹಾಸಿಕವಾಗಿ ಜಾರಿಗೆ ತರಲಾಗುತ್ತಿದೆ- ಬಿ.ವೈ.ರಾಘವೇಂದ್ರ

B.Y. Raghavendra ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಬುತ್ವವಾದ ಭಾರತದಲ್ಲಿ ಐತಿಹಾಸಿಕ ಮಹಿಳಾ...

B.Y. Raghavendra ಶಿವಮೊಗ್ಗದ ಸಂಚಾರ ವ್ಯವಸ್ಥೆ ಸುಧಾರಣೆ ಮಾಸ್ಟರ್ ಪ್ಲಾನ್: ಪ್ರಗತಿ ಪರಿಶೀಲನ ಸಭೆ

B.Y. Raghavendra ಶಿವಮೊಗ್ಗ ನಗರದ ಸಂಚಾರ ದಟ್ಟಣೆ ನಿವಾರಣೆ ಹಾಗೂ ರಸ್ತೆಗಳ...