Saturday, June 6, 2026
Saturday, June 6, 2026

Klive Special Article ಇಂದಿನ ರಾಜಕಾರಣಕ್ಕೆ ಅಂದೇ ಕನ್ನಡಿಯಾದ ಕಲ್ಲಿನ ಪಾಠಗಳು…

Date:

ಲೇ: ಡಾ.ರವಿ.ಎಂ‌.ಸಿದ್ಲಿಪುರ

Klive Special Article ನಾನು ನಮ್ಮ ಫಸ್ಟ್ ಇಯರ್ ಕನ್ನಡ ಆಪ್ಷನಲ್ ಮಕ್ಕಳ ಮುಂದೆ ನಿಂತು, ಕನ್ನಡ ಶಾಸನಗಳ ಬಗ್ಗೆ ಬಹಳ ಗಂಭೀರವಾಗಿ ಪಾಠ ಶುರುಮಾಡಿಕೊಂಡಿದ್ದೆ. ‘ವಿದ್ಯಾರ್ಥಿಗಳೇ, ಹಲ್ಮಿಡಿ ಶಾಸನ, ಕ್ರಿಸ್ತ ಶಕ 450… ಕನ್ನಡದ ಪ್ರಾಚೀನತೆ… ಭಾಷೆಯ ಸೊಗಸು…’ ಅಂತೆಲ್ಲಾ ಪೀಠಿಕೆ ಹಾಕುತ್ತಿದ್ದಾಗ, ಹಿಂಬದಿಯ ಬೆಂಚಿನಲ್ಲಿ ಯಾರೋ ಆಕಳಿಸುತ್ತಿದ್ದುದು ಕೇಳಿಸಿತು. ಅವರನ್ನು ಎಚ್ಚರಿಸೋಣವೆಂದು ನೋಡಿದರೆ, ನನಗೇ ನಗು ಬಂದುಬಿಟ್ಟಿತು! ಯಾಕೆಂದರೆ, ಆ ಹಲ್ಮಿಡಿಯ ಕಲ್ಲನ್ನು ಕೆತ್ತಿದವನು ಅಂದು ಬರೆದದ್ದು ಇತಿಹಾಸವನ್ನಲ್ಲ, ಬದಲಿಗೆ ನಮ್ಮ ದೇಶದ ರಾಜಕೀಯದ ಕಾಲಾತೀತ ಸತ್ಯವನ್ನು! ಅಂಥ ನನ್ನ ತಲೆಯಲ್ಲಿ ಟ್ಯೂಬ್‌ಲೈಟ್ ಹೊತ್ತಿಕೊಂಡಿತ್ತು. ಕಲ್ಲಿನ ಮೇಲಿನ ವಿವರಗಳು ಇಂದಿನ ರಾಜಕೀಯ ನಾಯಕರ ದಿನಚರಿಯಂತೆ ಕಾಣಿಸತೊಡಗಿದ್ದವು! ಆ ಕಾಲದ ಕಲ್ಲುಗಳು ಇಂದಿನ ವಾಟ್ಸಾಪ್ ಫಾರ್ವರ್ಡ್‌ಗಳಿಗಿಂತ ಹೆಚ್ಚು ಪ್ರಸ್ತುತ ಅನ್ನಿಸಿದ್ದು ಸುಳ್ಳಲ್ಲ.

ಮೊದಲಿಗೆ ಹಲ್ಮಿಡಿ ಶಾಸನವನ್ನೇ ತೆಗೆದುಕೊಳ್ಳೋಣ? ಅದರ ಕಥೆಯೇನು? ವಿಜಅರಸನೆಂಬ ಯೋಧ ಕೇಕಯ-ಪಲ್ಲವರ ವಿರುದ್ಧ ಭರ್ಜರಿಯಾಗಿ ಹೋರಾಡಿ ಗೆಲ್ಲುತ್ತಾನೆ. ಆಗ ರಾಜನ ಪರವಾಗಿ ಪಶುಪತಿ ಎಂಬ ಅಧಿಕಾರಿ, ಆತನ ಪರಾಕ್ರಮಕ್ಕೆ ಮೆಚ್ಚಿ ‘ಪಲ್ಮಡಿ’ ಮತ್ತು ‘ಮೂಳಿವಳ್ಳಿ’ ಎಂಬ ಎರಡು ಸಮೃದ್ಧ ಗ್ರಾಮಗಳನ್ನೇ ‘ಬಾಳ್ಗಳ್ಚು’ (ವೀರರ ಕೊಡುಗೆ) ಆಗಿ ಕೊಡುತ್ತಾನೆ. ಈ ಹಳ್ಳಿಗಳೇನು ಅರಸನ ಹೆಸರಲ್ಲಿ ಇದ್ದವು ಅಲ್ಲ. ಅವು ಊರಿನ ಆಸ್ತಿ. ಅಷ್ಟೇ ಅಲ್ಲ, ‘ಸೇನ್ದ್ರಕ ಬಣೋಭಯ ದೇಶದಾ ವೀರಪುರುಷ ಸಮಕ್ಷದೆ’ ಅಂದರೆ, ಎಲ್ಲ ಪ್ರಮುಖರ ಸಮ್ಮುಖದಲ್ಲಿ ಈ ದಾನವನ್ನು ಘೋಷಿಸಲಾಗುತ್ತದೆ.

ಈಗ ಇದೇ ದೃಶ್ಯವನ್ನು ನಮ್ಮ ಕಾಲಕ್ಕೆ ತಂದುಕೊಳ್ಳಿ. ನಮ್ಮ ಕಾಲದ ‘ವಿಜಅರಸರು’ ಯಾರು? ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರಿ, ಸರ್ಕಾರ ರಚಿಸಲು ಅಥವಾ ಬೀಳಿಸಲು ಸಹಾಯ ಮಾಡುವ ಶಾಸಕರು! ಅವರೂ ಒಂದು ರೀತಿಯಲ್ಲಿ ‘ರಾಜಕೀಯ ಯುದ್ಧ’ ಗೆದ್ದವರೇ. ನಡುವೆಯೇ ನಾನು ಹುಡುಗರನ್ನು ಕೇಳಿದೆ, ‘ವಿದ್ಯಾರ್ಥಿಗಳೆ, ಇವತ್ತಿನ ಬಾಳ್ಗಳ್ಚು ಅಂದ್ರೆ ಏನು?’ ಯಾರೋ ಒಬ್ಬ ಚುರುಕ, ‘ಸರ್, ಮಿನಿಸ್ಟರ್ ಪೋಸ್ಟ್ ಸರ್!’ ಅಂದ. ಕರೆಕ್ಟ್! ಅಂದು, ಅವರಿಗೆ ಸಿಗುವ ‘ಬಾಳ್ಗಳ್ಚು’ ಹಳ್ಳಿಗಳಲ್ಲ, ಬದಲಾಗಿ ಯಾವುದೋ ಪ್ರಬಲ ಖಾತೆ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಅಥವಾ ಮುಂದಿನ ಚುನಾವಣೆಗೆ ಗಟ್ಟಿ ಟಿಕೆಟ್! ಅಂದಿನ ‘ವೀರಪುರುಷರ ಸಮಕ್ಷದಲ್ಲಿ’ ನಡೆದ ಸಮಾರಂಭ, ಇಂದಿನದು ರಾಜಭವನದ ಹುಲ್ಲುಹಾಸಿನ ಮೇಲೆ, ಟಿವಿ ಕ್ಯಾಮೆರಾಗಳ ಸಮ್ಮುಖದಲ್ಲಿ ‘ಪ್ರಮಾಣ ವಚನ’ವಾಗಿ ನಡೆಯುತ್ತದೆ! ಆಗ ‘ಪಲ್ಮಡಿ’ ಸಿಕ್ಕರೆ, ಈಗ ‘ಇಂಧನ ಖಾತೆ’ ಅಥವಾ ‘ಬೆಂಗಳೂರು ನಗರಾಭಿವೃದ್ಧಿ’ಯಂತಹ ಫಲವತ್ತಾದ ‘ಹಳ್ಳಿಗಳು’ ಸಿಗುತ್ತವೆ.

ನಾನು ಪಾಠ ಮುಂದುವರೆಸಿದೆ. ‘ಹಲ್ಮಿಡಿ ಶಾಸನದ ಕೊನೆಯಲ್ಲಿ ‘ಕಳ್ದೋನ್ ಮಹಾಪಾತಕನ್’ ಅಂತ ಶಾಪ ಇದೆ. ಅಂದ್ರೆ, ಈ ದಾನವನ್ನು ಕದ್ದವನು ಮಹಾಪಾಪಿ…’ ಅಂದೆ. ಕ್ಲಾಸಿನಲ್ಲಿದ್ದವರೆಲ್ಲಾ ನಗಲು ಶುರುಮಾಡಿದರು. ನಾನು ಯಾಕ್ರಲ್ಲಾ ಅಂದೆ, ಅದಕ್ಕೆ ‘ಇಂದಿನ ರಾಜಕೀಯದಲ್ಲಿ ಒಬ್ಬರು ಕೊಟ್ಟ ‘ಬಾಳ್ಗಳ್ಚು’ ಅನ್ನು ಇನ್ನೊಬ್ಬರು ‘ಆಪರೇಷನ್’ ಮಾಡಿ ಕಸಿದುಕೊಂಡರೆ, ಅವರನ್ನು ‘ಮಹಾಪಾತಕಿ’ ಅನ್ನಲ್ಲ, ‘ಚಾಣಾಕ್ಷ ರಾಜಕಾರಣಿ’ ಅಂತ ಕರೆಯುತ್ತಾರೆ ಸಾರ್’ ಅಂದುಬಿಟ್ಟರು!

Klive Special Article ಹಲ್ಮಿಡಿಯ ಕಥೆ ಹೀಗಾದರೆ, ನನ್ನ ಪಾಠದ ಗಾಡಿ ಬಾದಾಮಿಯ ಕಡೆಗೆ ಹೊರಳಿತು. ಇಲ್ಲಿ ಸಿಕ್ಕಿದ ಕಪ್ಪೆ ಅರಭಟ್ಟನಂತೂ ಇಂದಿನ ರಾಜಕೀಯ ‘ಪಿ.ಆರ್. ಟೀಮ್’ಗಳ ಪಿತಾಮಹ ಇದ್ದ ಹಾಗೆ. ಅವನ ‘ಬಯೋ’ ನೋಡಿ: ‘ಶಿಷ್ಟಜನಪ್ರಿಯನ್'(ಜೈಕಾರ ಕೂಗುವ ಸಜ್ಜನರಿಗೆ ಫೇವರಿಟ್), ‘ಕಷ್ಟಜನವರ್ಜಿತನ್'(ಸಮಸ್ಯೆ ಬಗೆಹರಿಸಿ ಎಂದವರನ್ನೇ ಕೆಟ್ಟವರೆಂದು ಭಾವಿಸಿ ಅವರಿಂದ ದೂರ) ಮತ್ತು ಎಲ್ಲದಕ್ಕಿಂತ ದೊಡ್ಡ ಬಿರುದು ‘ಕಲಿಯುಗ ವಿಪರೀತನ್’! ಇದು ಕೇಳಿ ನನಗೆ ಯಾರ್ಯಾರೋ ನಾಯಕರ ಟ್ವಿಟರ್ ಪ್ರೊಫೈಲ್‌ಗಳು ನೆನಪಾದವು. ‘ಜನಸೇವಕ’, ‘ರೈತ ನಾಯಕ’, ‘ಹೋರಾಟದ ಕಿಡಿ’, ‘ಬಡವರ ಬಂಧು’, ‘ಭ್ರಷ್ಟಾಚಾರ ವಿರುದ್ಧದ ಹೋರಾಟಗಾರ’, ‘ಆ ಪರ-ಈ ಪರ’… ಎಲ್ಲರೂ ತಮ್ಮನ್ನು ‘ಕಲಿಯುಗ ವಿಪರೀತರು’ ಅಂತಾನೇ ತಾನೇ ಬಿಂಬಿಸಿಕೊಳ್ಳೋದು?

ಬಾದಾಮಿ ಶಾಸನದ ತ್ರಿಪದಿಗಳಂತೂ ಇವತ್ತಿನ ರಾಜಕೀಯ ಧುರೀಣರ ಪ್ರೆಸ್‌ಮೀಟ್‌ನ ಡೈಲಾಗ್‌ಗಳೇ: ‘ಸಾಧುಗೆ ಸಾಧು, ಮಾಧೂರ್ಯ್ಯಂಗೆ ಮಾಧೂರ್ಯ್ಯಂ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್’. ಅಂದರೆ, ‘ನಮ್ಮ ಜೊತೆ ಚೆನ್ನಾಗಿದ್ದವರಿಗೆ ನಾವೂ ಒಳ್ಳೆಯವರು, ನಮ್ಮನ್ನು ಕೆಣಕಿದರೆ ನಾವು ಸುಮ್ಮನಿರಲ್ಲ. ನೀವು ಮಾಡಿಲ್ಲವೆ?’ ಎನ್ನುವಂತಹ ನೇರಾನೇರ ವಾರ್ನಿಂಗ್!
ಆದರೆ, ಕಪ್ಪೆ ಅರಭಟ್ಟ ಒಂದು ಕಡೆ ನಮ್ಮನ್ನು ಪೆಚ್ಚು ಮಾಡಿಬಿಟ್ಟ. ‘ವರನ್ತೇಜಸ್ವಿನೋ ಮೃತ್ತ್ಯರ್ನತು ಮಾನಾವಖಂಡನಂ’ ಅಂದರೆ, ‘ಅವಮಾನಕ್ಕಿಂತ ಸಾವೇ ವಾಸಿ’ ಅಂತ. ಈ ಸಾಲನ್ನು ಹೇಳಿದಾಗ ಇಡೀ ಕ್ಲಾಸ್ ಸೈಲೆಂಟ್ ಆಗಿಬಿಟ್ಟಿತು. ಇವತ್ತಿನ ರಾಜಕೀಯದ ಡಿಕ್ಷನರಿಯಲ್ಲಿ ‘ಮಾನ’, ‘ಅವಮಾನ’ ಅನ್ನೋ ಪದಗಳೇ ಇಲ್ಲ. ಸೀಡಿ ಪೆನ್‍ಡ್ರೈವ್ ಗಳೇ ಬರಲಿ, ನಾನಾ ಕಾರಣಗಳಿಗೆ ಜೈಲಿಗೇ ಹೋಗಿರಲಿ, ಟಿವಿ ಕ್ಯಾಮಾರಗಳ ಮುಂದೆ ಬಾಯಿಂಗ್ ಬಂದಾಗೆ ಬೈದೇ ಇರಲಿ, ಬೆಳಿಗ್ಗೆ ಬೈದವರ ಜೊತೆ ಸಂಜೆ ಮೈತ್ರಿ ಮಾಡಿಕೊಳ್ಳುವುದು ‘ರಾಜಕೀಯ ಅನಿವಾರ್ಯತೆ’ ಅಲ್ಲವೇ? ಅವಮಾನದ ಬದಲು ಅಧಿಕಾರವೇ ಪರಮ ಸುಖ ಎಂಬಂತಾಗಿದೆ ಅಲ್ಲವೇ?

ಶಾಸನದ ಕೊನೆಯಲ್ಲಿ ಕಪ್ಪೆ ಅರಭಟ್ಟನನ್ನು ‘ಕಟ್ಟಿದ ಸಿಂಘಮನ್ ಕೆಟ್ಟೊದ್ ಎಮಗೆನ್ದು ಬಿಟ್ಟವೊಲ್’(ಕಟ್ಟಿದ ಸಿಂಹವನ್ನು ತಾವೇ ಬಿಡಿಸಿಕೊಂಡು ಅದರ ಬಾಯಿಗೆ ತುತ್ತಾದಂತೆ) ಎಂದು ವರ್ಣಿಸಲಾಗಿದೆ. ಅವನನ್ನು ಕೆಣಕಿದ ಶತ್ರುಗಳು ನಾಶವಾದರಂತೆ. ಇಂದಿಗೂ ಅಧಿಕಾರದಲ್ಲಿರುವ ನಾಯಕರನ್ನು ಅವರ ಹಿಂಬಾಲಕರು ಇದೇ ರೀತಿ ‘ಸಿಂಹ’ ಎಂದು ಹೊಗಳುತ್ತಾರೆ. ಸಿಂಹಾದ್ರಿ ಸಿಂಹದ ಸಿನಿಮಾದ ‘ಸಿಂಹ ಸಿಂಹ’ ಹಾಡಿನೊಂದಿಗೆ ರೀಲ್ಸ್ ಮಾಡಿಯೂ ಹಾಕಿಕೊಂಡಿರುತ್ತಾರೆ. ವಿರೋಧಿಗಳು ಅವರನ್ನು ಕೆಣಕಿದರೆ, ಇ.ಡಿ., ಸಿ.ಬಿ.ಐ. ಎಂಬ ‘ಬೇಟೆಗಾರರು’ ಅವರ ಹಿಂದೆ ಬೀಳುತ್ತಾರೆ.

ಕೊನೆಗೆ, ಪಾಠ ಮುಗಿಸುವಾಗ ನನಗೆ ಅನ್ನಿಸಿದ್ದು.. ಆ ಹಲ್ಮಿಡಿ, ಬಾದಾಮಿಯ ಕಲ್ಲುಗಳು ಸಾವಿರ ವರ್ಷಗಳ ಹಿಂದೆಯೇ ನಮ್ಮ ಇವತ್ತಿನ ರಾಜಕೀಯವನ್ನು ನೋಡಿ ನಗುತ್ತಿವೆ. ಕಾಲ ಬದಲಾಗಿದೆ, ಕಲ್ಲಿನ ಜಾಗದಲ್ಲಿ ಟ್ವಿಟರ್ ಬಂದಿದೆ, ಅಷ್ಟೇ. ‘ಬಾಳ್ಗಳ್ಚು’ ಮತ್ತು ‘ಭಾಷಣ’ದ ರಾಜಕೀಯ ಮಾತ್ರ ಇನ್ನೂ ಹಸಿರಾಗಿದೆ. ಹುಡುಗರು ಈ ಶಾಸನಗಳ ಬಗ್ಗೆ ಕಲಿತರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರಿಗೆಲ್ಲಾ ಮುಂದಿನ ಚುನಾವಣೆಯಲ್ಲಿ ಯಾರಿಗೆ ಓಟು ಹಾಕಬಾರದು ಅನ್ನೋ ಜ್ಞಾನೋದಯವಾದಂತೆ ಕಾಣುತ್ತಿತ್ತು!

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...