Chamber of Commerce Shivamogga 11 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ(ಜೂನ್ 21)ಯ ಅಂಗವಾಗಿ ಸಾರ್ವಜನಿಕರಲ್ಲಿ ಪ್ರಕೃತಿದತ್ತ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಮತ್ತು ಆರೋಗ್ಯದ ಅರಿವು ಮೂಡಿಸುವ ಉದ್ದೇಶದಿಂದ ಶಿವಮೊಗ್ಗದ ಜವಳಿ ವರ್ತಕರ ಸಂಘದ ಆಯೋಜಕತ್ವದಲ್ಲಿ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮತ್ತೂರಿನ ಖ್ಯಾತ ಆಯುರ್ವೇದ ಪಂಡಿತರಾದ ವರುಣ್ ಆನಂದ್ ಗುರೂಜಿಯವರಿಂದ “ಉಚಿತ ನಾಡಿ ಪರೀಕ್ಷೆ ಶಿಬಿರ”ವನ್ನು ಯಶಸ್ವಿಯಾಗಿ ನಡೆಸಲಾಯಿತು.
“ಅಲೋಪತಿ” ಎಂಬ ಆಂಗ್ಲ ಔಷದ ಪದ್ದತಿಯ ಪ್ರಭಾವದಿಂದಾಗಿ ನಮ್ಮ ಪುರಾತನ ಕಾಲದ ವೈದ್ಯಕೀಯ ಚಿಕಿತ್ಸೆ ಕ್ರಮಗಳಲ್ಲಿ ಒಂದಾದ,ಕರಾರುವಕ್ಕಾದ “ನಾಡಿ ಪರೀಕ್ಷೆ” ಯ ಮಹತ್ವವೇ ಇಂದಿನ ಜನರಿಗೆ ತಿಳಿದಿಲ್ಲ, ನಮ್ಮ ಹಿರಿಯರು ಪ್ರಕೃತಿಯತ್ತ ಹೆಜ್ಜೆಗಳನ್ನು ಹಾಕುತ್ತಿದ್ದ ಕಾರಣ ಔಷಧಿ ರಹಿತ ಜೀವನವನ್ನು ಅವರುಗಳು ನಡೆಸುತ್ತಿದ್ದರು, ಶತಾಯುಷಿಗಳಾದರೂ ಸಹ ಆರೋಗ್ಯವಂತರಾಗಿಯೇ ಇರುತ್ತಿದ್ದರು. ಆದರೆ ಇಂದಿನ ಜನಾಂಗವು ಪ್ರಕೃತಿಗೆ ವಿರುದ್ದವಾಗಿ ಹೆಜ್ಜೆಗಳನ್ನು ಹಾಕುತ್ತ ಔಷದಗಳನ್ನೇ ಆಹಾರವನ್ನಾಗಿ ಮಾಡಿಕೊಂಡಿರುವುದರ ಪರಿಣಾಮ ಅನಾರೋಗ್ಯ ಪೀಡಿತರಾಗಿ ,ಅಲ್ಪಾಯುಷಿಗಳಾಗಿದ್ದಾರೆ. ಇಂದಿನವರ ಆಹಾರ ಪದ್ದತಿ ಸಹ ಸಹಜ ಪ್ರಕೃತಿಗೆ ವಿರುದ್ದವಾಗಿರುವುದರಿಂದ ಬಹುತೇಕ ಜನರು ಅನೇಕಾನೇಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈ ಕಾರಣದಿಂದ “ಹೈಟೆಕ್ ಆಸ್ಪತ್ರೆ”ಗಳ ಸಂಖ್ಯೆ ಸಹ ದಿನೇ ದಿನೇ ಹೆಚ್ಚುತ್ತಿರುವುದು ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ ಎಂದು ಆಯುರ್ವೇದ ವೈದ್ಯರಾದ ವರುಣ್ ಆನಂದ್ ರವರು ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಾ ತಿಳಿಸಿದರು. ನಾವಿಂದು ಸಣ್ಣಪುಟ್ಟ ಸಮಸ್ಯೆಗಳಿಗೆಲ್ಲ ಡಾಕ್ಟರ್ ಬಳಿ ಹೋಗುವುದು ಸರಿಯಲ್ಲ,ನಿತ್ಯ ಯೋಗ ಪ್ರಾಣಾಯಾಮಗಳ ಅಭ್ಯಾಸದಿಂದ ರೋಗ ಮುಕ್ತ ಜೀವನವನ್ನು ನಡೆಸಬಹುದಾಗಿದೆ ಎಂದರು. ನಮ್ಮ ಎಲ್ಲ ರೋಗಗಳಿಗೂ ಮೂಲವೆಂದರೆ “ತ್ರಿದೋಷ”ಗಳಾದ “ವಾತ-ಪಿತ್ತ-ಕಫ” ಎಂದರು. ವಾತ ಹೆಚ್ಚಾದರೆ ” ಕೊಬ್ಬು-ಮಬ್ಬು”,
ಪಿತ್ತ ಹೆಚ್ಚಾದರೆ “ಕೋಪ-ತಾಪ,
ಕಫ ಹೆಚ್ಚಾದರೆ ” ಕೆಮ್ಮು- ದಮ್ಮು ಎಂಬುದು ನಮ್ಮ ರೋಗದ ಸಮಸ್ಯೆಗಳನ್ನು ನಾವೇ ಅರಿಯುವ ಮೊದಲ “ಸ್ವಯಂ ಪರೀಕ್ಷೆ” ಎಂದು ತಿಳಿಸಿದರು.
ಈ ಶಿಬಿರವು ಜನರಿಗೆ ಆಯುರ್ವೇದದ ಪ್ರಾಚೀನ ತತ್ವಗಳನ್ನು ಪರಿಚಯಿಸಿ, ಸ್ಟೆತಸ್ಕೋಪ್ ಇಲ್ಲದೇ, ತಮ್ಮ ಸಮಸ್ಯೆಗಳನ್ನು ತಾವೇ ಹೇಳಿಕೊಳ್ಳದೇ, ಕೇವಲ ನಾಡಿ ಪರೀಕ್ಷೆಯ ಮೂಲಕ ಆರೋಗ್ಯದ ಸ್ಥಿತಿಯನ್ನು, ಏರುಪೇರುಗಳನ್ನು ಆಯುರ್ವೇದ ಪಂಡಿತರು ಗುರುತಿಸಿ ಹೇಳುತ್ತಿದ್ದದನ್ನು ಕಂಡ ಜನರು ಆಶ್ಚರ್ಯಚಕಿತರಾಗಿದ್ದರು. ಸಮಸ್ಯೆಗೆ ಪರಿಹಾರವನ್ನು ಸಹ ಅಡಿಗೆ ಮನೆಯಲ್ಲಿ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಎಂದು ಪಂಡಿತರು ಹೇಳುತ್ತಿದ್ದಾಗ ಜನರು ಮೂಕವಿಸ್ಮಿತರಾಗಿದ್ದರು.ಅನೇಕರು ಇದೇ ಮೊದಲ ಬಾರಿಗೆ “ನಾಡಿ ಪರೀಕ್ಷೆ” ಯನ್ನು ಕಣ್ಣಾರೆ ಕಂಡು ಇಂತಹ “ಪ್ರಾಚೀನ ವಿದ್ಯೆ”ಗಳು ಇರುವುದು ನಮಗೆ ತಿಳಿದೇ ಇರಲಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.
Chamber of Commerce Shivamogga ಈ ಶಿಬಿರದಲ್ಲಿ ಸರಿ ಸುಮಾರು 150 ಜನರು ನಾಡಿ ಪರೀಕ್ಷೆ ಯ ಪ್ರಯೋಜನವನ್ನು ಮತ್ತು ವಿವಿಧ ಆರೋಗ್ಯ ಸಲಹೆಗಳನ್ನು ಪಡೆದರು.ಶಿಬಿರವು ಬೆಳಿಗ್ಗೆ 7•30 ಕ್ಕೆ ಪ್ರಾರಂಭವಾಗಿ 10•30 ಕ್ಕೆ ಮುಕ್ತಾಯಗೊಂಡಿತು. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ಶಿಬಿರ ಯಶಸ್ವಿಯಾಗಿ ನಡೆಯಿತು.
ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ ಮತ್ತು ಪದಾಧಿಕಾರಿಗಳು ವರುಣ್ ಆನಂದ್ ರವರಿಗೆ ಗೌರವ ಸನ್ಮಾನವನ್ನು ಮಾಡಿದರು. ಜ.ವ.ಸಂ.ನ ಮಾಜಿ ಅಧ್ಯಕ್ಷ ವೆಂಕಟೇಶ ಮೂರ್ತಿ ಯವರಿಗೆ ನಾಡಿ ಪರೀಕ್ಷೆ ಮಾಡುವ ಮೂಲಕವೇ ಶಿಬಿರ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ನಿರ್ವಹಣೆ ಅನಿಲ್ ಕುಮಾರ್. ಹೆಚ್.ಶೆಟ್ಟರ್ , ಸ್ವಾಗತ ಪಿ.ವಿ.ಪ್ರಭಾಕರ್, ವಂದನಾರ್ಪಣೆ ರಾಕೇಶ್ ಸಾಕ್ರೆ ನೆರವೇರಿಸಿದ ಈ ಶಿಬಿರದಲ್ಲಿ ಛೇಂಬರ್ ಆಫ್ ಕಾಮರ್ಸ್ ನ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ ಸುರೇಶ್ ಸಹ ಪಾಲ್ಗೊಂಡಿದ್ದರು.