Friday, June 20, 2025
Friday, June 20, 2025

Klive Special Article ಕವಿ ಎಚ್ ಎಸ್ ವಿ.ಗೆ ಕಾವ್ಯಾರ್ಥ ನಮನ

Date:

ಡಾ.ಎನ್.ಸುಧೀಂದ್ರ.
ಪ್ರಧಾನ ಸಂಪಾದಕ.
ಕೆ ಲೈವ್ ಪೋರ್ಟಲ್.
ಶಿವಮೊಗ್ಗ

Klive Special Article ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಕವಿ ಡಾ ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಪ್ರಸಿದ್ಧ ” ಚಿನ್ನಾರಿ ಮುತ್ತ” ಸಿನಿಮಾ ಗೀತೆ.
ಓದುತ್ತಿದ್ದಂತೆ ನಮಗರಿವಿಲ್ಲದೇ ಏನೇಲ್ಲಾ ನಮ್ಮ ಬಳಿಯುದ್ದರೂ ಅದಕ್ಕೆ ಪೂರಕ,ಪೋಷಕ ಅಂಶಗಳಿರಬೇಕು ಎಂಬ‌ ಅನಿವಾರ್ಯ,ನಿಷ್ಠುರ ಸತ್ಯವನ್ನ ನಮಗೆ ಸರಳ ತಿಳಿಸುವ‌ ಗೀತೆ. ಓದುತ್ತಾ ಹೋಗಿ…
ನಿಮ್ಮದೇ ಯೋಚನಾ‌ ಲಹರಿಗೆ ಚಿಂತನೆಯ ಸಾಮಗ್ರಿ ಒದಗಿಸುವ‌ ಶಕ್ತಿ‌ ಸಾಹಿತ್ಯಕ್ಕಿದೆ.

ಕತೆ,ಕವಿತೆ,ನಾಟಕ, ಮಹಾ ಕಥನ‌ ಕಾವ್ಯ, ವಿಮರ್ಶೆ, ಚಲನಚಿತ್ರ ಕತೆ, ಸಂಭಾಷಣೆ, ನಿರ್ದೇಶನ., ಗಾಯನ, ಮಾತುಗಾರಿಕೆ…ಎಲ್ಲ ಅರಗಿಸಿಕೊಂಡ ಅಪೂರ್ವ‌‌ ಮಾನವೀಯ ಸಂವೇದನೆಗಳ‌ ಸಮ್ಮಿಳನ ಡಾ.ಎಚ್ಎಸ್ ವಿ.

ನೈಸರ್ಗಿಕವಾಗಿ‌ ಜನಿಸುವ ಮನುಷ್ಯ ಜೀವಿಗಳಲ್ಲೆ ಬುದ್ಧಿವಂತ.ನಿಜ. ಆದರೆ ಬುದ್ದಿವಂತಿಕೆ ಒಂದೇ ಸಾಕೆ? ಅದನ್ನ ಅಳವಡಿಸುವ‌
ಕ್ಷೇತ್ರ, ವಿಸ್ತಾರ, ಅಪಾರತೆ ಬೇಕಲ್ಲ? ಆ ಕ್ಷೇತ್ರವೇ ಮನುಷ್ಯನಿಗೆ ಕಾಣಿಸದಿದ್ದರೆ…. ಅವರ ಕವಿತೆಯ ಸಾಲು ಆರಂಭವಾಗುವುದೂ‌
ಹೀಗೆ….

“ರೆಕ್ಕೆ ಇದ್ದರೆ ಸಾಕೆ?
ಹಕ್ಕಿಗೆ ಬೇಕು‌‌ ಬಾನು.
ಬಯಲಲಿ ಹಾರುತ ತಾನು
ಮ್ಯಾಲೆ ಹಾರೋಕೆ?”

ಸಿನಿಮಾ ಗೀತೆಗಳು‌ ಅಂದಾಕ್ಷಣ ಅದರಲ್ಲೇನಿದೆ? ಎಂದು ಮೂಗುಮುರಿಯುತ್ತಿದ್ದ ಕಾಲ‌ ಈಗ ಕಳೆದು ಹೋಗಿದೆ. ಕನ್ನಡದ ಪ್ರಮುಖ ಕವಿಗಳ‌ ಕವಿತೆಗಳು ಸಿನಿಮಾಗಳಲ್ಲಿ ಅದ್ಭುತವಾಗಿ‌ ಚಿತ್ರೀಕರಣಗೊಂಡಿವೆ. ರೆಕ್ಕೆ ಅಂದರೆ ಫಕ್ಕನೆ ಹಕ್ಕಿಯ‌ ಪ್ರತಿಮೆ ನಮ್ಮೆದುರು‌‌ ನಿಲ್ಲುತ್ತದೆ. ಇಲ್ಲಿ ಮನುಷ್ಯನೂ ಒಂದು‌ ಹಕ್ಕಿಯೆ!. ಏಕೆಂದರೆ ಹುಟ್ಟಿನಿಂದ ವಿಚಾರಶೀಲ, ಸೃಜನಶೀಲ. ಆದರೆ ನಮ್ಮ‌ಸಾಮಾಜಿಕ ಆವರಣದ ಕೆಲ ಕಟ್ಟುಪಾಡು, ವ್ಯವಸ್ಥೆಯ ನಿರ್ಬಂಧಗಳಿಂದ ಮನುಷ್ಯನ ‌ಚಿಂತನೆ ಒಂದಿಲ್ಲೊಂದು ರೀತಿ‌ ನಿಯಂತ್ರಣಕ್ಕೊಳಪಡುತ್ತಾ ಸಾಗುತ್ತದೆ.

ಅದನ್ನೇ ಮಹಾಕವಿ ಕುವೆಂಪು ಸರಳೀಕರಿಸಿ ಹೇಳಿದ್ದಾರೆ.
” ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವ ಮಾನವ.‌ ಬೆಳೆಯುತ್ತ‌ ಅದನ್ನ ಅಲ್ಪ ಮಾನವನನ್ನಾಗಿ‌ ಮಾಡುತ್ತೇವೆ”

Klive Special Article ಹಕ್ಕಿಯದು ರೆಕ್ಕೆ. ರೆಕ್ಕೆಯದು ಬಡಿದು‌ಹಾರುವ ಸ್ವಭಾವ. ಅದಕ್ಕೆ ಗಗನವೇ ಬಯಲು. ‌ಆ ವಿಸ್ತಾರವೇ ಅದರ ಜಗತ್ತು. ಹಾರಿದಷ್ಟು ದೂರ ಅದರ ಬದುಕು. ನೋಡಿದಷ್ಟು ಅಗಲ ಆಳ‌ ಅದರ ಸೃಷ್ಟಿ ಸಾರ್ಥಕ. ಅದಕ್ಕೆ ಹಕ್ಕಿನೋಟ , ಪಕ್ಷನೋಟ ಎಂಬ ಮಾತು‌ ನಮ್ಮಲ್ಲಿದೆ.
ಇಡೀ ಭೂಮಿಯ ಮೇಲ್ಮೈ ಒಂದುಬಾರಿ‌ ವೀಕ್ಷಿಸುವ ಅದರ ದೃಷ್ಟಿಯ ಸಾಧ್ಯತೆ‌ ಮನುಷ್ಯನಿಗೂ‌ ಇದೆ. ಅದೇ ಅವನ ವೈಚಾರಿಕ ಶಕ್ತಿ. ಇದರಿಂದ ಇಡೀ‌ ವಿಶ್ವದ ಬದುಕನ್ನ ಸಹ್ಯ‌ವಾಗಿಸಿಕೊಳ್ಳಬಹುದು.
ಆದರೆ …

” ಬಯಲಲಿ ಹಾರುತ ತಾನು‌ ,ಮ್ಯಾಲೆ ಹಾರೋಕೆ..?” ಎಂಬಲ್ಲಿ‌ ಆ ಬಯಲು‌ ಮನುಷ್ಯನಿಗೆ ವಿಸ್ತಾರವಿಲ್ಲದ, ಕೇವಲ‌ ಸಂಕುಚಿತ ಆವರಣವಾಗಿಬಿಟ್ಟಿದೆ. ಹೀಗಾಗಿ ವಿಹಗದಂತೆ ಹಾರಿದರೂ ವಿಸ್ತಾರ ದೃಷ್ಟಿ ಇಲ್ಲದೇ ರೆಕ್ಕೆ ಬಡಿದದ್ದೇ ಸಾಧನೆ. ಹಾರಿದಷ್ಟು ದೂರವೇ ತನ್ನ ಪ್ರಗತಿ ಎಂಬ ‌ಆತ್ಮರತಿ ಹೊಂದಿದ್ದಾನೆ. ಅದನ್ನೇ ಕವಿ

” ಕಾಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು‌ ಕಾನು ಜಿಗಿದು‌ ಓಡೋಕೆ?” ಎಂದಿದ್ದಾರೆ.
ಮನುಷ್ಯನೀಗ ಭೂಜೀವಿ , ನಡೆದಾಡುವಷ್ಟು‌ ನೆಲವಿದೆ. ಆದರೆ ವೇಗದ ಜಿಂಕೆಯಾಗಲು ಅವನು‌ ಬಯಸಿದರೆ ಕಾಡು ಬೇಕು.
ಜಿಂಕೆಗೆ ಕಾಡು ಪ್ರದೇಶ,ಹಸಿರು‌.. ಬಹಳ ಪ್ರಿಯ. ಮನುಷ್ಯರಿಗೆ ಕಾಡು ನಾಡು ಎರಡೂ ಪ್ರಿಯ. ಆದರೆ ನಾಡಿನಲ್ಲಿ ಸಂಕುಚಿತ ಪ್ರವೃತ್ತಿ, ಕಾಡಿನ ಬಗ್ಗೆ ಅತೀ ಪ್ರಭುತ್ವ‌ತೋರಿ‌ ದಾಳಿಕೋರತನ ಇವುಗಳ ಬಗ್ಗೆ ಕವಿ‌ ವಿಡಂಬಿಸಿದ್ದಾರೆ.

“ಹೂವೊಂದಿದ್ದರೆ ಸಾಕೆ? ಬ್ಯಾಡವೆ ಗಾಳಿ ನೀವೇ ಹೇಳಿ. ಕಂಪ ಬೀರೋಕೆ? ಮುಖವೊದಿದ್ದರೆ ಸಾಕೆ ದುಂಬಿಯ ತಾವ, ಬ್ಯಾಡವೆ ಹೂವ ಜೇನ ಹೀರೋಕೆ.”

ಈ ಸಾಲುಗಳಲ್ಲಿ ಪ್ರಕೃತಿಯ ಸೃಷ್ಟಿಯಲ್ಲಿನ ಪರಸ್ಪರ ಆಂತರಿಕ ಬೆಸುಗೆಯ‌ ಸಂಬಂಧ ಸೂಚ್ಯವಾಗಿದೆ. ಹೂವರಳಿದರೆ ಕಂಪು ತಾನೇ ಹೊರಸೂಸುತ್ತದೆ. ಆದರೆ ಅದರ ಕಂಪನ್ನ ಹೊತ್ತೊಯ್ಯಲು‌ ವಾಹಕ ಸೌಲಭ್ಯನೀಡುವುದು ಗಾಳಿ.
ಗಾಳಿ ಮಾಧ್ಯಮವಾಗದಿದ್ದರೆ ಹೂಕಂಪು ಯಾರಿಗೂ ತಲುಪದು. ಹಾಗೇ ದುಂಬಿಗೆ ಹೀರುವ ಗುಣವಿದೆ. ಹೂವೇ ಇಲ್ಲದಿದ್ದರೆ
ಅದರ ಮುಖವಿದ್ದೂ ನಿಷ್ಪ್ರಯೋಜಕ ಹೀರಲು, ಮಕರಂದವುಳ್ಳ ಹೂವು ಬೇಕು. ಹೂವು ಕಂಪು,ಗಾಳಿ. ದುಂಬಿ ,ಮಕರಂದ ಆಂತರಂಗಿಕ ಸರಪಳಿ ಸಂಬಂಧ ಹೊಂದಿವೆ.

ಮುಂದಿನ ಪಂಕ್ತಿಗಳು ಮತ್ತಷ್ಟು ಅರ್ಥಭರಿತವಾಗಿವೆ

” ನೀರೊಂದಿದ್ದರೆ ಸಾಕೆ? ಬ್ಯಾಡವೆ ಹಳ್ಳ ಬಲ್ಲವ ಬಲ್ಲ.ತೊರೆಯು‌ ಹರಿಯೋಕೆ. ಮೋಡ ಇದ್ದರೆ ಸಾಕೆ ಬ್ಯಾಡವೆ ಭೂಮಿ ಹೇಳಿ ಸ್ವಾಮಿ,ಮಳೆಯು ಸುರಿಸೋಕೆ”

ನೀರು ಸುಮ್ಮನೆ ನಿಂತರೆ ಹಳ್ಳ. ಬರೀ‌ ಕೆಸರು. ಆದರೆ ತೊರೆಯಾದರೆ ಹರಿಯುತ್ತದೆ. ಬದುಕು ಚಲನಶೀಲ ಆಗಬೇಕು. ಅದನ್ನೇ ಕವಿ ” ಬಲ್ಲವ ಬಲ್ಲ” ಎಂಬ ಲೋಕನೀತಿ ಹೇಳಿದ್ದಾರೆ. ಮತ್ತೂ ಮುಂದುವರೆದು
ಮೋಡ ಹನಿಗಳೊಡೆಯ.
ಜಲಸಿರಿ ಇದೆ. ಎಲ್ಲಿಗೆ ಸುರಿಯ ಬೇಕು?
ಎಲ್ಲಿಗೆ ಸುರಿಯ ಬೇಕು?
ಎಂದರೆ ಭೂಮಿಗೆ.
ಹಾಗಾಗಿ ನೀರು ಶೇಖರಣಗೊಂಡ ಮೋಡದ ಶ್ರಮ ಪರಿಪೂರ್ಣವಾಗಲು ಭೂಮಿ ಬೇಕೇಬೇಕು.
ಸಿರಿವಂತಿಕೆಯುಳ್ಳ ಜನ ,ನೆಲದ ಬದುಕನ್ನ ಹಸನು ಮಾಡಬೇಕು. ಆ ಕಾರ್ಯವಾಗಬೇಕಾದರೆ ,ಭೂಮಿಯಂತೆ ಹೃದಯ ವೈಶಾಲ್ಯತೆ ಹೊಂದಬೇಕು.
ಅವರೇ ಭೂಮಿಯಾಗಬೇಕು ಇದು ಕವಿಯ ಬಯಕೆ.
ಆದ್ದರಿಂದ
“ರೆಕ್ಕೆ ಇದ್ದರೆ ಸಾಕೆ?”
ಎಂಬ ಪ್ರಶ್ನೆಯ ಹೂಬಾಣ ನಮ್ಮೆಲ್ಲರ ಎದೆಗೆ ಹೂಡಿದ
ಮೃದು ಹೃದಯಿ
ಕವಿ.ಹೆಚ್.ಎಸ್.
ವೆಂಕಟೇಶ ಮೂರ್ತಿ‌
ದೊಡ್ಡ ಪ್ರಶ್ನೆಯನ್ನೇ
ನಮಗೆಲ್ಲಾ ಹಾಕಿ
ತಾವು ತಮ್ಮ ಇಹದ ಯಾತ್ರೆ ಮುಗಿಸಿದರು.
ಕವಿಗೆ ಸಾವಿಲ್ಲ.ಹಾಗಯೇ ಅವರೆತ್ತಿರುವ ಪ್ರಶ್ನೆ, ಅಚ್ಚರಿ, ಆತಂಕ ,
ಅನುಭವ ದ್ರವ್ಯದ ಕೊರತೆಗಳಿಗೆ ಸಹೃದಯರು‌ಉತ್ತರ ಹುಡುಕಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Health and Family Welfare Department ಖಾಲಿ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಕರೆ

District Health and Family Welfare Department ಕರ್ನಾಟಕ ಮೆದುಳು ಆರೋಗ್ಯ...

Rahul Gandhi ಶಿವಮೊಗ್ಗ ಯುವ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿಯವರ ಹುಟ್ಟುಹಬ್ಬ ಆಚರಣೆ

Rahul Gandhi ರಾಹುಲ್ ಗಾಂಧಿಯವರ ಹುಟ್ಟುಹಬ್ಬ - ಶಿವಮೊಗ್ಗ ಯುವ ಕಾಂಗ್ರೆಸ್...