DVS College of Arts, Science and Commerce ಬೌದ್ಧಿಕ ಆಸ್ತಿಗಳ ಹಕ್ಕು ರಾಷ್ಟ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ವಿದ್ಯಾರ್ಥಿಗಳು ಈ ವಿಷಯವನ್ನು ಆಳವಾಗಿ ಅರಿತು ಹೆಚ್ಚು ಹೆಚ್ಚು ಸಂಶೋಧನೆಗಳನ್ನು ಮಾಡಿ ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದು ನ್ಯಾಮತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಡಾ. ರಾಜಶೇಖರ್ ಜಿ.ಆರ್. ಹೇಳಿದರು.
ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಿದ್ದ “ಇಟೆಲೆಕ್ಟುಯಲ್ ಪ್ರಾಪರ್ಟಿ ರೈಟ್ಸ್ ಅಂಡ್ ಸೈಟೇಷನ್ ಮ್ಯಾನೇಜ್ಮೆಂಟ್” ವಿಚಾರವಾಗಿ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಭಾರತವು ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ವರ್ಷಗಳಿಂದ ವರ್ಷಕ್ಕೆ ಭಾರತದಲ್ಲಿ ನೋಂದಣಿಯಾಗುತ್ತಿರುವ ಪೇಟೆಂಟ್ಸ್, ಕಾಪಿರೈಟ್ಸ್, ಕೈಗಾರಿಕೆಗಳ ವಿನ್ಯಾಸಗಳು ಹೆಚ್ಚಾಗುತ್ತಿವೆ. ನಾವು ಅಭಿವೃದ್ಧಿಶೀಲ ರಾಷ್ಟ್ರವಾಗುವತ್ತ ದಾಪುಗಾಲಿಡುತ್ತಿದ್ದೇವೆ ಎಂದು ತಿಳಿಸಿದರು.
ಡಿವಿಎಸ್ ಕಾಲೇಜಿನ ಗ್ರಂಥಪಾಲಕ ನಿರಂಜನ ಕೆ ಮಾತನಾಡಿ, ಬೌದ್ಧಿಕ ಆಸ್ತಿ ಹಕ್ಕನ್ನು ವಿಸ್ಕೃತವಾಗಿ ಅಧ್ಯಯನ ಮಾಡಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಔನ್ನತ್ಯವನ್ನು ಕಾಣಬಹುದು ಮತ್ತು ಯಾವುದಾದರೂ ಮಾಹಿತಿಯನ್ನು ಯಾವುದೇ ಮೂಲದಿಂದ ಪಡೆದರೂ ಆ ಗ್ರಂಥಗಳ, ಲೇಖಕರ ಮಾಹಿತಿಯನ್ನು ಉಲ್ಲೇಖದಲ್ಲಿ ತಿಳಿಸಿದಾಗ ಆ ಗ್ರಂಥಗಳು ಉತ್ಕೃಷ್ಟವಾಗುತ್ತವೆ ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಕೋಶಾಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಯಾವುದೇ ಕೌಶಲ್ಯಗಳಿದ್ದರೆ, ಹೊಸ ಸಂಶೋಧನೆಗಳನ್ನು ಮಾಡಿದರೆ ತಕ್ಷಣ ಪೇಟೆಂಟ್ಗಳನ್ನು ಪಡೆದು ಆರ್ಥಿಕವಾಗಿ ಸದೃಢರಾಗುವ ಅವಕಾಶಗಳಿವೆ ಎಂದರು.
ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವೆಂಕಟೇಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯಗಳನ್ನು ಹೊರತಂದು ಮಾದರಿಯಾಗಲು ಕರೆ ನೀಡಿದರು.
DVS College of Arts, Science and Commerce ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ನಮ್ಮಲ್ಲಿ ಯಾವುದೇ ಜಾತಿ, ಧರ್ಮಗಳಿದ್ದರೂ ಎಲ್ಲರೂ ಒಂದಾಗಿ ರಾಷ್ಟ್ರವನ್ನು ಕಟ್ಟೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕ ಎನ್.ಕುಮಾರಸ್ವಾಮಿ, ಸಾನಿಯ ಆಪ್ಸಾ, ಇಳಾ ಬಿ.ಎಲ್ , ದೀಕ್ಷಾ ಇತರರಿದ್ದರು.