Chamber of Commerce Shivamogga ರಾಜ್ಯ ಸರ್ಕಾರವು ವಾಣಿಜ್ಯ ವಾಹನಗಳ ಜೀವಮಾನ ತೆರಿಗೆ ನೋಂದಣಿ ಶುಲ್ಕವನ್ನು ಹೆಚ್ಚಿಸಿರುವ ಬಗ್ಗೆ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಕಳವಳ ವ್ಯಕ್ತಪಡಿಸಿದೆ.
ಈಗಾಗಲೇ ವಿದ್ಯುತ್ ದರ, ನೀರಿನ ಶುಲ್ಕ, ಆಸ್ತಿ ತೆರಿಗೆ, ಕಸ ಸಂಗ್ರಹ ಶುಲ್ಕ, ಸಾರಿಗೆ ಸಂಬಂಧಿತ ವೆಚ್ಚಗಳ ಹೆಚ್ಚಳದಿಂದ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಸತತ ದರ ಏರಿಕೆಗಳಿಂದ ಒಟ್ಟಾರೆ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮದ ವ್ಯವಹಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆಯ ಪರಿಣಾಮ ಬೀರಲಿದೆ. ವಿಶೇಷವಾಗಿ ಸಣ್ಣ, ಅತಿ ಸಣ್ಣ, ಮತ್ತು ಮಧ್ಯಮ ಗಾತ್ರದ ಎಂ ಎಸ್ ಎಂ ಇ ಉದ್ಯಮಗಳು ದರ ಏರಿಕೆಯಿಂದ ಹೆಚ್ಚಾದ ವೆಚ್ಚಗಳ ಪರಿಣಾಮದಿಂದ ಉದ್ಯಮವನ್ನು ನಡೆಸಲು ಕಷ್ಟಪಡುತ್ತಿವೆ. ಎಂಎಸ್ಎಂಇಗಳ ಅಸ್ತಿತ್ವಕ್ಕೆ ಅಪಾಯ ಉಂಟುಮಾಡುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.
ವಾಣಿಜ್ಯ ವಾಹನಗಳ ನೋಂದಣಿ ಶುಲ್ಕದಲ್ಲಿನ ಹೆಚ್ಚಳವು ಸಾರಿಗೆ ಮತ್ತು ಪೂರೈಕೆ ಸರಪಳಿಗಳ ವೆಚ್ಚಗಳನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಸಿದ್ಧಪಡಿಸಿದ ಸರಕು ಮತ್ತು ಸೇವೆ ಬೆಲೆ ಹೆಚ್ಚಾಗಿ ಉದ್ಯಮ ಮತ್ತು ಗ್ರಾಹಕನ ಮೇಲೆ ಮೇಲೆ ಪರಿಣಾಮ ಬೀರುತ್ತದೆ. ಮದ್ಯದ ಬೆಲೆಗಳ ಹೆಚ್ಚಳದಿಂದ ಜಿಲ್ಲಾ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿರೀಕ್ಷೆಯಿದೆ. ನಾವುಗಳು ಸರ್ಕಾರದ ತನ್ನ ಆದಾಯವನ್ನು ಹೆಚ್ಚಿಸುವ ಅಗತ್ಯವನ್ನು ಅರ್ಥಮಾಡಿಕೊಂಡಿದ್ದರೂ ದರ ಹೆಚ್ಚಳದ ಕ್ರಮಗಳು ಈ ಸಮಯದಲ್ಲಿ ಸೂಕ್ತವಲ್ಲ. ಇದರಿಂದ ವ್ಯಾಪಾರ ಮತ್ತು ವಾಣಿಜ್ಯೋದ್ಯಮಗಳ ಮೇಲೆ ಹೆಚ್ಚಿನ ಹೊರೆ ಬೀಳದಂತೆ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಸಮತೋಲಿತ ಪರಿಹಾರಗಳನ್ನು ಕಂಡುಕೊಳ್ಳಲು ಸರ್ಕಾರವು ಉದ್ಯಮದ ಪಾಲುದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂವಾದದಲ್ಲಿ ತೊಡಗಿಸಿಕೊಳ್ಳಬೇಕೆಂದು ನಾವುಗಳು ಒತ್ತಾಯಿಸುತ್ತೇವೆ ಎಂದು ಬಿ.ಗೋಪಿನಾಥ್ ತಿಳಿಸಿದ್ದಾರೆ.
Chamber of Commerce Shivamogga ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಬೆಳವಣಿಗೆಗಳ ಅನುಕೂಲಕರ ವಾತಾವರಣ ಮುಂದುವರಿಯಲು ಸರ್ಕಾರದೊಂದಿಗೆ ಸಹಕರಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಸದಾ ಸಿದ್ಧವಾಗಿದೆ ಎಂದು ಬಿ.ಗೋಪಿನಾಥ್ ತಿಳಿಸಿದ್ದಾರೆ.