Rovers Club Shimoga ಸಾಧನೆಗೆ ತಂದೆ ತಾಯಿಗಳ ಆಶೀರ್ವಾದ ಸಹಕಾರ ಹಾಗೂ ನಮ್ಮ ಶಾಲೆಯ ಶಿಕ್ಷಕರ ಮಾರ್ಗದರ್ಶನ ಮತ್ತು ನನ್ನ ಪರಿಶ್ರಮ ಏಕಾಗ್ರತೆ ಬಲ ನೀಡಿದೆ ಎಂದು ಶಿವಮೊಗ್ಗ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆತ್ಮೀಯ ಮಿತಲ್ ಹೇಳಿದರು.
ಅವರು ಇಂದು ಬೆಳಿಗ್ಗೆ ರೋವರ್ಸ್ ಕ್ಲಬ್ಬಿನ ಶಟ್ಟಲ್ ಕೋರ್ಟ್ ಆವರಣದಲ್ಲಿ ಶಟಲ್ ಆಟಗಾರರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪರೀಕ್ಷಾ ಸಮಯದಲ್ಲಿ ದಿನವಿಡೀ ಅಭ್ಯಾಸ ಮಾಡುತ್ತಿದ್ದೆ. ಹಾಗೆ ತಂದೆ ತಾಯಿಗಳಿಗೆ ಗೌರವ ಹಾಗೂ ಕಲಿತ ಶಾಲೆಗೆ ಮತ್ತು ಶಿಕ್ಷಣ ನೀಡಿದ ಗುರುಗಳಿಗೆ ಧನ್ಯವಾದವನ್ನು ತಿಳಿಸುತ್ತಿದ್ದೇನೆ. ಬರುವ ದಿನದಲ್ಲಿ ಐಎಎಸ್ ಅಧಿಕಾರಿಯಬೇಕೆಂಬ ಮಹಾದಾಸೆ ಇದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ರೋವರ್ಸ್ ಕ್ಲಬ್ ನ ನಿರ್ದೇಶಕರಾದ ಜಿ.ವಿಜಯ್ ಕುಮಾರ್ ಮಾತನಾಡಿ, ಮಕ್ಕಳ ಸಾಧನೆ ಮತ್ತು ಪ್ರತಿಭೆಯನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಯ ಗೌರವ ಹೆಚ್ಚುವುದರ ಜೊತೆಗೆ ಅವರ ಪ್ರತಿಭೆ ಇನ್ನಷ್ಟು ಅನಾವರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಅಭಿರುಚಿಯನ್ನು ಪೋಷಕರೂ ಅರಿತುಕೊಂಡು ಅಗತ್ಯ ಸಹಕಾರ ನೀಡಬೇಕು. ಪ್ರತಿಯೊಬ್ಬ ಮಗುವಿನ ಪ್ರತಿಭೆಯನ್ನು ಗುರುತಿಸುವುದರ ಜೊತೆಗೆ ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.
Rovers Club Shimoga ಮತ್ತೋರ್ವ ರೋವರ್ಸ್ ಕ್ಲಬ್ ನ ನಿರ್ದೇಶಕರಾದ ವಿನಾಯಕ್, ಅಗಡಿ ಮಹೇಶ್, ವಿದ್ಯಾರ್ಥಿನಿಗೆ ಸನ್ಮಾನಿಸಿ ಗೌರವಿಸಿದರು.
ಆತ್ಮೀಯ ಮಿತಲ್ ರವರು ಕರ್ನಾಟಕ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ರೋವರ್ಸ್ ಕ್ಲಬ್ ನ ಸದಸ್ಯರಾಗಿ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ್, ಸುಜಾತ ಪ್ರದೀಪ್ ಇವರ ಪುತ್ರಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ರೋವರ್ಸ್ ಕ್ಲಬ್ ನ ನೂತನ ಸದಸ್ಯರಾದ ಆಡಿಟರ್ ಸುರೇಶ್, ಈಶ್ವರ್, ಎಸ್.ಎ.ಸತ್ಯನಾರಾಯಣ ಹಾಗೂ ಶಟಲ್ ಆಟಗಾರರು ಉಪಸ್ಥಿತರಿದ್ದರು. ಇವರಿಗೆ ಕ್ಲಬ್ ನ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಿರ್ದೇಶಕರು ಅಭಿನಂದಿಸಿದರು.