ಸೊರಬ ತಾಲೂಕಿನ ಉದ್ರಿ ಗ್ರಾಮದ ತೋಗರ್ಸಿ ಮಾರ್ಗದ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೊಡಕಾಗುವಂತೆ ಕಟಾವು ಮಾಡಿದ ಮೆಕ್ಕೆಜೋಳವನ್ನು ಹರವಿ ಒಣಗಿಸಲಾಗುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಸರ್ಕಾರದಿಂದ ಟಾರ್ಪಲ್ ಮತ್ತಿತರ ಸೌಲಭ್ಯಗಳನ್ನು ನೀಡುತ್ತಿದ್ದರೂ ಸಹ ಕೆಲ ರೈತರು ರಸ್ತೆಯ ಮೇಲೆಯೇ ಮೆಕ್ಕೆ ಜೋಳವನ್ನು ಒಕ್ಕರಣೆ ಮಾಡುತ್ತಿದ್ದಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿದೆ. ಇತ್ತೀಚೆಗೆ ಉದ್ರಿ ಸಮೀಪದ ಯಡಗೊಪ್ಪ ಗ್ರಾಮದಲ್ಲಿ ರಸ್ತೆ ಬದಿ ಒಣ ಹಾಕಿದ ಜೋಳವನ್ನು ತಪ್ಪಿಸಲು ಹೋಗಿ ಅಪಘಾತಗೊಂಡು ಯುವಕನೋರ್ವ ಮೃತಪಟ್ಟಿದ್ದನು. ಆದರೆ, ಉದ್ರಿ ಭಾಗದಲ್ಲಿ ಮಾತ್ರ ಕೆಲ ರೈತರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.
ರಾತ್ರಿ ವೇಳೆಯಂತೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದು ಚಲಿಸುವಂತಾಗಿದೆ. ಜೋಳದ ಮೇಲೆ ಕಪ್ಪು ಬಣ್ಣದ ಟಾರ್ಪಲ್ ಹೊದಿಸಲಾಗಿರುತ್ತದೆ. ಇದು ವಾಹನ ಸವಾರರಿಗೆ ಗೋಚರಿಸುವುದಿಲ್ಲ. ಅನೇಕರು ಬಿದ್ದು ಎದ್ದು ಹೋದ ಘಟನೆಗಳಿವೆ.
ಮತ್ತೊಂದಡೆ ಒಂದು ವಾಹನ ಬಂದರೆ, ಮತ್ತೊಂದು ವಾಹನ ಚಲಿಸಲು ಸ್ಥಳಾವಕಾಶವೇ ಇಲ್ಲದಂತೆ ರಸ್ತೆ ಮೇಲೆ ಮೆಕ್ಕೆ ಜೋಳ ಒಣಗಿಸಲಾಗುತ್ತಿದೆ ಎನ್ನುವುದು ವಾಹನ ಸವಾರರ ಆರೋಪ.
ವಾಹನ ಸವಾರರ ಜೀವಕ್ಕೆ ಸಂಚಕಾರ ತರುತ್ತಿರುವ ರಸ್ತೆ ಬದಿ ಮೆಕ್ಕೆಜೋಳ ಒಣಗಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.