Sunday, February 23, 2025
Sunday, February 23, 2025

Klive Special Article ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕೆಲವು ಮೆಲುಕುಗಳು

Date:

ಲೇ: ಗೋಪಾಲ್ ಯಡಗೆರೆ.ಹಿರಿಯ ವರದಿಗಾರರು. ಕನ್ನಡಪ್ರಭ. ಶಿವಮೊಗ್ಗ

Klive Special Article ಕತೆಗಳಿಗೆ ಎಂದೂ ಸಾವಿಲ್ಲ; ವ್ಯಕ್ತಿತ್ವ, ಕಲ್ಪನೆ, ಭಾವನೆಯ ವಿಕಾಸಕ್ಕೆ ಪೂರಕವಾಗಿದೆ: ಗೋಪಾಲ್‌ ಯಡಗೆರೆ
ಸಾಹಿತಿಗಳು, ಕಥೆಗಾರರು ತಂತ್ರಜ್ಞಾನದ ಅರಿವನ್ನು ಹೊಂದಬೇಕು
ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಥೆಗಳ ಪ್ರೇರಣೆಯು ಮಗುವಿನಿಂದ ಹಿಡಿದು ವಯಸ್ಕರವರೆಗೆ ಎಲ್ಲರಲ್ಲಿಯೂ ಕಲ್ಪನೆ, ಭಾವ ಮತ್ತು ವ್ಯಕ್ತಿತ್ವದ ವಿಕಸನಕ್ಕೆ ಪೂರಕವಾಗುತ್ತವೆ ಎಂದು ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಹೇಳಿದರು.

ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಏರ್ಪಡಿಸಿದ್ದ “ಕಥೆ ಹೇಳುವೆವು ಕೇಳಿ” ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೆಯೂ ಕಥೆಗಳು ಇದ್ದವು, ಈಗಲೂ ಇವೆ, ಮುಂದೇಯೂ ಇರುತ್ತವೆ. ಸಾಹಿತ್ಯ ಮತ್ತು ಕಥೆಗಳಿಗೆ ಯಾವತ್ತೂ ಸಾವಿಲ್ಲ ಎಂದರು.

ಕಥೆಗಳ ಕೇಳುವಿಕೆ ಮಗುವಿಗೆ ಹುಟ್ಟಿದ ಕೆಲವೇ ದಿನಗಳಿಂದ ಆರಂಭವಾಗುತ್ತದೆ. ಕಥೆಗಳ ಪ್ರೇರಣೆಯಿಂದ ಮಗುವಿನಲ್ಲಿ ಆಗುವ ಕಲ್ಪನೆಯ ವಿಕಾಸ, ವ್ಯಕ್ತಿತ್ವದ ವಿಕಾಸದಿಂದ ಮಗುವು ಆರೋಗ್ಯಕರವಾಗಿ ಬೆಳೆಯಲು ಸಹಕಾರಿಯಾಗುತ್ತವೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುತ್ತದೆ. ತಂದೆ-ತಾಯಿಯ ಮಡಿಲಲ್ಲಿ ಮಲಗಿ ರೋಚಕತೆಯಿಂದ, ಭಾವನಾತ್ಮಕತೆಯಿಂದ, ತಾದಾತ್ಮ್ಯತೆಯಿಂದ ಕತೆಗಳನ್ನು ಆಸ್ವಾದಿಸುತ್ತದೆ ಎಂದರು.

ಮೊದಲು ಕಥೆಗಳೆಂದರೆ ಅದು ಕೇಳುವ ಕಥೆಗಳಾಗಿದ್ದವು. ಈಗ ಕೇಳುವುದರ ಜೊತೆಗೆ ನೋಡುವ ಕಥೆಗಳು ಮುಂಚೂಣಿಗೆ ಬಂದು ಕೂತಿವೆ. ಕೇಳುವ ಕಥೆಗಳಲ್ಲಿ ಮಗು ತನ್ನದೇ ಕಲ್ಪನೆಯಿಂದ ಸ್ವೀಕರಿಸಿದರೆ, ನೋಡುವ ಕಥೆಗಳಲ್ಲಿ ಒಂದು ರೀತಿಯ ಈ ಕಲ್ಪನೆಯಿಲ್ಲದ ಸ್ಥಿತಿಯನ್ನು ಗಮನಿಸಬಹುದಾಗಿದೆ ಎಂದು ವಿಶ್ಲೇಷಿಸಿದರು.

ಇಂದಿನ ಮಕ್ಕಳು ಕೇಳುವಿಕೆ, ಓದುವಿಕೆಯಿಂದ ನೋಡುವ ಕಥೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ವಯಸ್ಕರರು ಬದಲಾದ ಡಿಜಿಟಲ್‌ ಫಾರ್ಮ ಮೂಲಕ ಕೇಳುವ ಕತೆಯತ್ತ ಆಕರ್ಷಿತರಾಗುತ್ತಿದ್ದಾರೆ. ಕಥೆಗಳ ಪ್ರಸ್ತುತತೆಯ ಮಾಧ್ಯಮಗಳು ಬದಲಾಗುತ್ತಿದೆಯೇ ಹೊರತು ಅದರ ಆಕರ್ಷಣೆ ಕಡಿಮೆಯಾಗಿಲ್ಲ ಎಂದು ಅಭಿಪ್ರಾಯಮಟ್ಟರು.

ಇಂದಿನ ಸಾಹಿತಿಗಳು, ಕತೆಗಾರರು ತಂತ್ರಜ್ಞಾನದ ಅರಿವನ್ನು ಹೊಂದ ಬೇಕು. ಹೊಸ ತಂತ್ರಜ್ಞಾನದ ಮೂಲಕ ಓದುಗರು, ಸಾಹಿತ್ಯಾಸಕ್ತರನ್ನು ತಲುಪಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ಶೈಲಜಾ, ಡಾ.ನಾಗೇಂದ್ರ ಆಚಾರ್ಯ, ಸಂಧ್ಯಾ ಗಾಜನೂರು, ನೇತ್ರಾವತಿ ಸೊರಬ, ಟಿ.ಜಿ.ಹರೀಶ್‌ ಆಳ್ವಾಸ್, ಈಶ್ವರಪ್ಪ ಮಂಕಳಲೆ, ಅಲಕ ತೀರ್ಥಹಳ್ಳಿ ಮತ್ತಿತರರು ಇದ್ದರು.


ಮಲೆನಾಡಿನ ಸಮಸ್ಯೆ ಬಗೆಹರಿಸಲು ಸಂಸದರುಗಳಿಗೆ ಬದ್ದತೆಯಿಲ್ಲ:ಕಲ್ಕುಳಿ ವಿಠ್ಠಲಹೆಗಡೆ

Klive Special Article ಶಿವಮೊಗ್ಗ ಸ್ಥಳೀಯ ಜನರ ಸಹಭಾಗಿತ್ವ ಇಲ್ಲದೆಯೆ ಯಾವುದೇ ಪರಿಸರ ಯೋಜನೆ ಯಶಸ್ವಿಯಾಗುವುದಿಲ್ಲ. ಸ್ಥಳೀಯ ಜನರ ವಿಶ್ವಾಸ ಪಡೆಯುವ ಸೌಜನ್ಯತೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ತೋರಬೇಕಿದೆ ಎಂದು ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಅಭಿಪ್ರಾಯಪಟ್ಟರು.
ಇಲ್ಲಿನ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಅವರು ಮಾತನಾಡಿ, ಖಾಕಿ ಬಟ್ಟೆ ಹಾಕಿದವರನ್ನೆಲ್ಲ ನೋಡಿದರೆ ಹೆದರುವ ಪರಿಸ್ಥಿತಿ ಮಲೆನಾಡಿನ ಜನರಲ್ಲಿದೆ. ಯಾವಾಗ ಯಾರು ತಮ್ಮ ಮನೆಗಳನ್ನು ತೆರೆವುಗೊಳಿಸುತ್ತಾರೆ ಎಂಬ ಭಯದಲ್ಲಿಯೆ ಬದುಕುವ ಪರಿಸ್ಥಿತಿ ಬಂದಿದೆ ಎಂದರು.
ಈ ಒತ್ತುವರಿ ಎಂಬ ಸಮಸ್ಯೆ ಶುರುವಾಗಿದ್ದೆ ಗೋದಾವರ್ಮನ್ ಕೇಸ್ ನಿಂದ. ಅರಣ್ಯ ಇಲಾಖೆ ಕಾಡಿನ ಮೇಲೆ ಹಿಡಿತ ಸಾಧಿಸುತ್ತಿದ್ದಾರೆ. ಒಂದು ಸಾರ್ವಜನಿಕ ಕಾರ್ಯಕ್ಕೆ ರಾಜ್ಯ ಸರ್ಕಾರದಿಂದ ಭೂಮಿ ನೀಡಲಾಗದ ಪರಿಸ್ಥಿತಿ ಇದೆ. ಎಲ್ಲವು ಕೇಂದ್ರ ಸರ್ಕಾರದ ಹಸಿರು ಪೀಠದ ಅನುಮತಿ ಪಡೆಯಬೇಕು. ಈ ಬಗ್ಗೆ ವಾದ ಮಾಡಬೇಕಾದ ರಾಜ್ಯದ ಸಂಸದರುಗಳಿಗೆ ತಿಳುವಳಿಕೆ ಮತ್ತು ಬದ್ದತೆಯಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದರು.

ವನ್ಯಜೀವಿ ಮತ್ತು ಮಾನವ ಸಂಘರ್ಷ ಜಾಸ್ತಿಯಾಗುತ್ತಿದೆ. ಆನೆಯ ಸ್ವಭಾವ ಗೊತ್ತಿಲ್ಲದ ಪ್ರದೇಶದಲ್ಲಿ ಆನೆಗಳು ಸಂಚರಿಸುತ್ತಿರುವುದು ಅಪಾಯಕಾರಿಯಾಗಿದೆ. ಆನೆಯ ಪಥವನ್ನು ಬದಲಾಯಿಸಲು ಯಾರಿಂದಲು ಸಾಧ್ಯವಿಲ್ಲ. ಆನೆಗಳ ನೆಲೆಯು ಹೇಮಾವತಿ ಡ್ಯಾಂನಲ್ಲಿ ಮುಳುಗಿ ಹೋಗಿದ್ದರಿಂದ, ಎಲ್ಲೆಂದರಲ್ಲಿ ಆನೆಗಳ ಓಡಾಟ ಕಾಣುತ್ತಿದೆ. ಆನೆಗಳಿಂದ ಸಾವಿಗೀಡಾದವರಿಗೆ ಪರಿಹಾರ ನೀಡಿ ಹೆಚ್ಚುಗಾರಿಕೆ ತೋರುವ ಜೊತೆಗೆ, ಪ್ರಾಣಿಗಳಿಗೆ ನೈಸರ್ಗಿಕ ನೆಲೆ ನೀಡುವ ಪ್ರಯತ್ನ ನಡೆಯಬೇಕಿದೆ ಎಂದು ತಿಳಿಸಿದರು. ಗೋಷ್ಟಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜೆ.ಕೆ.ರಮೇಶ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಉಪಸ್ಥಿತರಿದ್ದರು.

ಜಾಗತೀಕರಣದ ಹಿಡಿತಕ್ಕೆ ಸಿಲುಕಿ ನೆಲದ ಸಂಸ್ಕೃತಿಯೇ ನಾಶವಾಗುತ್ತಿದೆ
ಶಿವಮೊಗ್ಗ: ಜಾಗತೀಕರಣದ ಹಿಡಿತಕ್ಕೆ ಸಿಲುಕಿ ನೆಲದ ಸಂಸ್ಕೃತಿಯೇ ನಾಶವಾಗುತ್ತಿದೆ ಎಂದು ಲೇಖಕ ಡಾ. ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.

ಅವರು ಗುರುವಾರ 19ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗತೀಕರಣ ಮತ್ತು ಕನ್ನಡ ಅಸ್ಮಿತೆ ಕುರಿತ ಗೋಷ್ಠಿಯಲ್ಲಿ ಮಾತನಾಡಿ, ಜಾಗತೀಕರಣ ಎಂಬುದು ಒಂದು ಮಾಯಾವಿ ಭೂತವಾಗಿದೆ. ಸಾವಿರಾರು ವರ್ಷದ ಸಂಸ್ಕೃತಿಯ ಮೇಲೆ ಇದು ಪರಿಣಾಮ ಬೀರುತ್ತಿದೆ. ಗೌಡ, ಪಟೇಲ, ಶಾನುಭೋಗ ಈ ಮನೋಧರ್ಮದ ನೆರಳುಗಳು ಜಾಗತೀಕರಣದ ಒಳಗೆ ಇವೆ. ರೈತ ಸಂಸ್ಕೃತಿಯೂ ಸೇರಿದಂತೆ ಈ ನೆಲದ ಸಂಸ್ಕೃತಿಯೇ ಜಾಗತೀಕರಣದ ಹಿಡಿತಕ್ಕೆ ಸಿಕ್ಕು ಎಲ್ಲವನ್ನೂ ನಾಶ ಮಾಡುತ್ತಾ ಹೋಗುತ್ತಿವೆ ಎಂದರು.

ನಮಗೆ ಈಗ ಹಳ್ಳಿಗಳ ಉದ್ಧಾರ ಬೇಕಾಗಿಲ್ಲ. ಸ್ಮಾರ್ಟ್ ಸಿಟಿ ಮುಖ್ಯವಾಗುತ್ತಿದೆ. ಈ ಸ್ಮಾರ್ಟ್ ಸಿಟಿಗಳು ಕೂಡ ಜಾಗತೀಕರಣದ ಮತ್ತೊಂದು ಮುಖವಾಗಿದೆ. ಸರ್ಕಾರ ಇದಕ್ಕೆ ಮಣೆ ಹಾಕಿದ ಮೇಲಂತೂ ಇದು ಇನ್ನೂ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಾಲ್ ಸಂಸ್ಕೃತಿಯೂ ಸೇರಿಕೊಂಡಿದೆ. ಇದು ನಮ್ಮ ರೈತರನ್ನು ನಾಶ ಮಾಡುತ್ತಿವೆ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಇಂದು ಕನ್ನಡ ಭಾಷೆಗೆ ಧಕ್ಕೆ ಬರುತ್ತಿದೆ. ಹಿಂದಿ ನಮಗೆ ಸಾಕಷ್ಟು ತೊಂದರೆ ಕೊಡುತ್ತಿದೆ. ಇದಕ್ಕೆ ಕೇಂದ್ರದ ಆಶ್ರಯವಿದೆ. ಶೇ. 66ರಷ್ಟು ವೇಗದಲ್ಲಿ ಹಿಂದಿ ಬೆಳೆಯುತ್ತಿದ್ದರೆ ಇತರ ಭಾಷೆಗಳು ಶೇ. 7ರಷ್ಟು ಮಾತ್ರ ಬೆಳೆಯುತ್ತಿವೆ. ಅದರಲ್ಲೂ ಕನ್ನಡ ಶೇ. 3.7ರಷ್ಟು ಮಾತ್ರ ಕಡಿಮೆ ವೇಗದಲ್ಲಿ ಬೆಳೆಯುತ್ತಿದೆ ಎಂದರು.

45 ಸಾವಿರ ಕನ್ನಡ ಶಾಲೆಗಳು ಮುಚ್ಚಿವೆ ಎಂದರೆ ಕನ್ನಡ ಉಳಿಯುವುದಾದರೂ ಹೇಗೆ? ಜನಸಂಖ್ಯೆ ಬೆಳವಣಿಗೆಗೆ ಅನುಗುಣವಾಗಿ ಭಾಷೆ ಕೂಡ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣವೇ ಇಲ್ಲ. ನಮ್ಮಲ್ಲಿ ಮಾತ್ರ ಜನಸಂಖ್ಯೆ ನಿಯಂತ್ರಣವಿದೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷ ಡಾ.ಜೆ.ಕೆ. ರಮೇಶ್ ಇದ್ದರು. ಷಣ್ಮುಖಾಚಾರ್ ನಿರೂಪಿಸಿದರು. ಕಾರ್ತಿಕ್ ಸ್ವಾಗತಿಸಿ, ಶಂಕರ್ ವಂದಿಸಿದರು.


ಸಿನಿಮಾ ಮತ್ತು ಸಾಹಿತ್ಯ ಎರಡೂ ಭಿನ್ನ ಅನುಭವ ನೀಡುತ್ತವೆ

ಶಿವಮೊಗ್ಗ: ಸಿನಿಮಾಕ್ಕೂ ಸಾಹಿತ್ಯಕ್ಕೂ ನಂಟು ಇದ್ದರೂ ಕೂಡ ಇವೆರಡೂ ವಿಭಿನ್ನ ಅನುಭವಗಳನ್ನು ನೀಡುತ್ತವೆ ಎಂದು ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಸಂವಾದ, ಸಾದೃಶ್ಯ-ವೈದೃಶ್ಯಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,
ಸಿನಿಮಾ ಮತ್ತು ಸಾಹಿತ್ಯ ಮತ್ತು ಎರಡೂ ಅಭಿವ್ಯಕ್ತಿಸುತ್ತವೆ. ಅನುಭವಗಳನ್ನು ಶೋಧಿಸುತ್ತವೆ. ನಿರ್ದಿಷ್ಟ ವ್ಯಾಕರಣವೂ ಇರುತ್ತದೆ. ಮನರಂಜನೆಯೂ ಇರುತ್ತದೆ. ಆದರೆ, ಅವರೆಡೂ ಬೇರೆ ಬೇರೆ ಕೋನಗಳಲ್ಲಿ ಸೃಷ್ಟಿಯಾಗುತ್ತವೆ ಎಂದರು.

ಸಾಹಿತ್ಯದಲ್ಲಿ ಶೇ. 90ರಷ್ಟು ವಿಚಾರಗಳು ಇದ್ದರೆ, ಸಿನಿಮಾದಲ್ಲಿ ಅದು ಶೇ. 10ಕ್ಕೆ ಇಳಿದು ವ್ಯವಹಾರಿಕವಾಗಿ ಉತ್ಪಾದನಾ ಕ್ಷೇತ್ರಕ್ಕೆ ಇಳಿದುಬಿಡುತ್ತದೆ. ಪುಸ್ತಕವನ್ನು ನಿಧಾನವಾಗಿ ಓದಬಹುದು. ಬಿಟ್ಟು ಬಿಟ್ಟು ಓದಬಹುದು. ಆದರೆ ಸಿನಿಮಾ ಹಾಗಲ್ಲ. ಅದನ್ನು ಬಿಡುಗಡೆಯಾದ ದಿನ ನೋಡಬೇಕು. ಮತ್ತು ಅದರ ಭವಿಷ್ಯ ಅಂದೇ ತೀರ್ಮಾನವಾಗುತ್ತದೆ ಎಂದರು.
ಸಾಹಿತ್ಯಕ್ಕೆ ಪರದಾಟವಿರುವುದಿಲ್ಲ. ಸಿನಿಮಾಕ್ಕೆ ಪರದಾಟವಿರುತ್ತದೆ. ಸಿನಿಮಾ ಜೂಜಾಗಿಯೂ ಮಾರ್ಪಾಡಾಗುತ್ತದೆ. ನೂರಾರು ಕಾರ್ಮಿಕರು ಸೇರಿ ಸಿನಿಮಾ ಮಾಡಬೇಕಾಗುತ್ತದೆ. ಆದರೆ ಸಾಹಿತ್ಯಕ್ಕೆ ಆ ರೀತಿಯ ಕಷ್ಟಗಳು ಇರುವುದಿಲ್ಲ. ಅದೊಂದು ಧ್ಯಾನದ ಪರಿಸ್ಥಿತಿ. ಆದರೆ, ಸಿನಿಮಾ ಹಾಗಲ್ಲ. ಅದು ವರ್ಣ. ಕಾದಂಬರಿ ಸಿನಿಮಾಗಳು ಯಶಸ್ವಿಯಾಗಿದ್ದರೂ ಕೂಡ ಅದು ವಿಭಿನ್ನ ರೀತಿಯಲ್ಲಿ ಸಿನಿಮಾ ಮರುಕಟ್ಟೆಗೆ ತಕ್ಕಂತೆ ರೂಪುಗೊಳ್ಳಲೇಬೇಕಾಗುತ್ತದೆ. ಹಾಗಾಗಿಯೇ ಕಲಾತ್ಮಕ ಚಿತ್ರಗಳಿಗೆ ಮಾರುಕಟ್ಟೆ ಇರುವುದಿಲ್ಲ. ಅದು ಜನರನ್ನು ತಲುಪುವುದಿಲ್ಲ. ಇಂದಿನ ಹೊಸ ಯುವಕರು ಕಡಿಮೆ ಬಜೆಟ್ ನಲ್ಲಿ ಒಳ್ಳೆಯ ಸಿನಿಮಾ ಮಾಡಬೇಕು ಎಂದರು.
ಸೈಮಾ ಫಿಲಂಫೇರ್ ಅವಾರ್ಡ್ ಪುರಸ್ಕೃತ ಶಿವಮೊಗ್ಗದ ಎಸ್. ಅರ್ಜುನ್ ಕುಮಾರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಗೋಷ್ಠಿಯಲ್ಲಿ ರಂಗಕರ್ಮಿ ಜಿ.ಆರ್. ಲವ , ಸಾಹಿತಿ, ಅಂಕಣಕಾರ ಬಿ. ಚಂದ್ರೇಗೌಡ ಉಪಸ್ಥಿತರಿದ್ದರು.

ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಮಲೆನಾಡು ಬದುಕಿನ ಸವಾಲುಗಳು ಕುರಿತ ಗೋಷ್ಟಿಯಲ್ಲಿ ಪರಿಸರ ತಜ್ಞ ಕಲ್ಕುಳಿ ವಿಠ್ಠಲಹೆಗಡೆ ಮಾತನಾಡಿದರು.


ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿರುವ ಶಿವಮೊಗ್ಗ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ಆಯೋಜಸಿದ್ದ ಕುರಿತ ಗೋಷ್ಟಿಯಲ್ಲಿ “ಕಥೆ ಹೇಳುವೆವು ಕೇಳಿ” ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ಗೋಪಾಲ್‌ ಯಡಗೆರೆ ಮಾತನಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Club Shivamogga ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ: ರೊ. ರೂಪ ಪುಣ್ಯಕೋಟಿ

Rotary Club Shivamogga ಇಂದು ಆರೋಗ್ಯವೆ ಭಾಗ್ಯ. ಪ್ರತಿನಿತ್ಯದ ಜಂಜಾಟದಿಂದ,...

Kateel Ashok Pai Memorial College ಆರೋಗ್ಯದ ಮೂರು ಸೂತ್ರಗಳನ್ನು ಪಾಲಿಸಿ-ಡಾ ಧನಂಜಯ ಸರ್ಜಿ

Kateel Ashok Pai Memorial College ಮಂಡಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ...

Madhu Bangarappa ನಗರದ ಆಸ್ತಿ ಮಾಲೀಕರ ಸ್ವತ್ತಿನ ದಾಖಲೆಗಳನ್ನು ಸೃಜಿಸಲು ನಕ್ಷಾ ಯೋಜನೆ ಸಹಕಾರಿ : ಸಚಿವ ಎಸ್. ಮಧು ಬಂಗಾರಪ್ಪ

Madhu Bangarappa ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಅಸ್ತಿಗಳ ಭೂ...