Friday, March 20, 2026
Friday, March 20, 2026

Klive Special Article ಪ್ರೇಮ, ಕಾಮನೆಗಳ ಎರಕದ “ಕಾಡುವ ಹುಡುಗನ ಹಾಡು”

Date:

ಕೃತಿ ಅವಲೋಕನ

Klive Special Article “ಕಾಡುವ ಹುಡುಗನ ಹಾಡು” ಇದು ಶಿವಮೊಗ್ಗದ ಕಟೀಲು ಅಶೋಕ್ ಪೈ ಕಾಲೇಜಿನ ಉಪನ್ಯಾಸಕಿ ಬಿ ಎಸ್ ಅಂಜುಂ ಅವರ ಚೊಚ್ಚಲ ಕೃತಿ. ಒಲವ ಹಾಯಿದೋಣಿ ಎಂಬ ಅಡಿಬರಹ ಹೊಂದಿರುವ, ಪ್ರೇಮವೇ ಕಾವ್ಯವಾಗಿರುವ ಕೃತಿ ಇದು. ಯುವತಿಯೊಬ್ಬಳು ತನ್ನ ಪ್ರೇಮಿಗೆ ಪ್ರೇಮವನ್ನು ನಿವೇದಿಸುವ ಪರಿ ಇದರಲ್ಲಿದೆ. ಇಲ್ಲಿನ ಚುಟುಕು ಅಥವಾ ಕವನಗಳಲ್ಲ್ಲಿ ಅಸಂಖ್ಯಾತ ಉಪಮೇಯಗಳನ್ನು ಬಳಸಲಾಗಿದೆ. ತನ್ನಲ್ಲಿರುವ ಪ್ರೀತಿಯನ್ನು ಯುವತಿ ಯಾವ್ಯಾವ ರೀತಿಯಲ್ಲಿ ವಿವರಿಸಲು ಸಾಧ್ಯವೋ ಅವೆಲ್ಲ ಮಾರ್ಗವನ್ನು ಕೃತಿಯ ಲೇಖಕಿ ತೋರಿಸಿದ್ದಾರೆ. ವಯಸ್ಸನ್ನು, ಅನುಭವವನ್ನು ಮೀರಿದ ಹರಿಹರೆಯದ ಪ್ರೇಮದ ಸಹಜ ಭಾವ ಇಲ್ಲದರಲ್ಲಿ ಚಿತ್ರಿವಾಗಿದೆ.
ಪ್ರೀತಿ ಎಂದರೇನು ಎನ್ನುವುದರ ಅರ್ಥವನ್ನು ಅವರೇ ಕೃತಿಯಲ್ಲಿ ಒಂದೆಡೆ ಬರೆದಿದ್ದಾರೆ-

  • ಪ್ರೀತಿ ಅರ್ಥ ಮಾಡಿಕೊಂಡರೆ ಅದೊಂದು ಅನುಭವ, ಕೇವಲ ನೋಡುವುದಾದರೆ ಅದೊಂದು ಸಂಬಂಧ, ಹೇಳುವುದಾದರೆ ಅದೊಂದು ಸುಂದರ ಶಬ್ದ, ಇಷ್ಟಪಟ್ಟರೆ ಅದೊಂದು ಜೀವನ, ನಿಭಾಯಿಸುವುದಾದರೆ ಅದೊಂದು ಆಣೆ, ಸಿಕ್ಕುಬಿಟ್ಟರೆ ಅದೇ ಸ್ವರ್ಗ
    ಪ್ರೀತಿ-ಪ್ರೇಮದ ಬಗ್ಗೆ ಸಾಕಷ್ಟು ಕೃತಿ ಬಂದಿದೆಯಾದರೂ ಅವುಗಳಂತೆ ಈ ಕೃತಿ ಇಲ್ಲ. ಹಾಗಾಗಿ ಒಮ್ಮೆ ಇದನ್ನು ಓದಬೇಕೆನಿಸುತ್ತದೆ. ಈ ಕೃತಿಯ ವಿಶೇಷವೆಂದರೆ, ಇಲ್ಲಿ ಒಲವನ್ನು ನಿವೇದಿಸಿರುವ ರೀತಿ ಓದುಗನನ್ನು ಸೆಳೆಯುತ್ತದೆ. ಒಂದಕ್ಕಿಂತ ಒಂದು ಹೊಸ ಉಪಮೆಗಳಿಂದ ನಮ್ಮೊಳಗೆ ಆವರಿಸಿಬಿಡುತ್ತವೆ. ಪದಲಾಲಿತ್ಯ ಮೆಚ್ಚುವಂತದ್ದು. ಕವಿತೆಯನ್ನು ಹೊಸೆದ ರೀತಿ ಮನೋಹರವಾದುದು. ಕೆಲವು ಕವಿತೆಗಳು ಎರಡು ಸಾಲಿನದ್ದಾದರೆ, ಇನ್ನು ಕೆಲವು ಮೂರು, ನಾಲ್ಕು, ಹೀಗೆ ಆರೇಳು ಸಾಲಿನವರೆಗೆ ಬೆಳೆಯುತ್ತಾ ಹೋಗಿವೆ. ಅತಿ ಸುಲಭದಲ್ಲಿ ಓದುಗ ಅರ್ಥೈಸಿಕೊಳ್ಳುವ ಸಾಲುಗಳು ಇಲ್ಲಿವೆ. ಕೃತಿಯ ತುಂಬಾ ಹೀಗೆ ಸರಳ, ಸುಂದರ ಶೈಲಿಯಲ್ಲಿ, ಪ್ರೀತಿಯ ಎರಕವಿದೆ.
    ಬೆನ್ನುಡಿ ಬರೆದ ಸುಧೀಂದ್ರ ಅವರು ಹೇಳಿರುವಂತೆ, ಓದುತ್ತ ಹೋದಂತೆ ಓದುಗನೇ ಕವಿಯಾಗಿ ಭಾವನೆಯ ಸೋನೆಮಳೆಯಲ್ಲಿ ನೆನೆಯುವಂತೆ ಮಾಡುವ ಮೋಡಿ ಇಲ್ಲಿದೆ. ಇದು ನಿಜಕ್ಕೂ ಸತ್ಯ. ಇಡೀ ಕೃತಿ ಪ್ರೀತಿಯ ಸೋನೆಮಳೆಯಲ್ಲೇ ಮಿಂದಿದೆ.
    ಇಲ್ಲಿ ಆಕರ್ಷಿಸುವ ಕೆಲವು ಸಾಲುಗಳಿವೆ: ನಿನ್ನ ಮನಸ್ಸಿನ ಪಾಸ್ ವರ್ಡ್ ಹೇಳಿಬಿಡು, ಪ್ರೀತಿಯನ್ನು ಇನ್ಸ್ಟಾಲ್ ಮಾಡಬೇಕಿದೆ

ಇಂತಹ ಸುಂದರ ಸಾಲುಗಳು ಓದುಗನನ್ನು ಆಕರ್ಷಿಸುತ್ತವೆ.

ಇನ್ನೊಂದು ಸಾಲು ಗಮನಿಸಿ:

ಆತ ಕೇಳಿದ, ಅದೆಷ್ಟು ಪ್ರೀತಿ ನಿನಗೆ ನನ್ನ ಮೇಲೆಂದು? ನಾ ಹೇಳಿದೆ, ನೀನು ನನಗೆ ಆಧಾರ್ ಕಾರ್ಡ್ ಫೋಟೋದಲ್ಲೂ ಸುಂದರವಾಗಿ ಕಾಣುವಷ್ಟು
ಆಧಾರ ಕಾರ್ಡಿನಲ್ಲಿ ಫೋಟೊ ಎಷ್ಟು ಸುಂದರವಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅದರ ಫೋಟೊ ನೋಡಿದಾಗಲೂ ನಿನ್ನ ಸುಂದರ ಮುಖವೇ ಅಲ್ಲಿ ಕಾಣುವಷ್ಟು ಪ್ರೀತಿ ಇದೆ.
ಅತಿ ಚಿಕ್ಕ ಕವನ ಸಂಕಲನ ಇದಾದರೂ ಒಮ್ಮೆ ಕೈಯ್ಯಲ್ಲಿ ಪುಸ್ತಕ ಹಿಡಿದರೆ ಓದಿಸಿಕೊಂಡು ಹೋಗುವುದರ ಜೊತೆಗೆ ಪ್ರತಿ ಸಾಲುಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಇದಕ್ಕೆ ಸಾಕಷ್ಟು ಉದಾಹರಣೆ ಕೊಡಬಹುದು:

Klive Special Article ನಿನ್ನ ಪ್ರೀತಿಯ ಅಲೆಯಿಂದ ಈಜುವುದು ತಿಳಿದಿದ್ದರೂ ಮುಳುಗುವುದಷ್ಟನ್ನೇ ಇಷ್ಟಪಡುವಷ್ಟು ಪ್ರೀತಿ ಇದೆ

ನಿನಗಿಂತ ಚೆನ್ನಾಗಿರುವವರು ಇದ್ದಾರೆನೋ ಗೊತ್ತಿಲ್ಲ. ಏಕೆಂದರೆ, ನಿನ್ನ ಹೊರತು ಬೇರೆ ಯಾರನ್ನೂ ನಾ ನೋಡಿಲ್ಲ

ನನ್ನ ಕೈಬರಹ ನಿನ್ನಷ್ಟು ಸುಂದರವಾಗಿಲ್ಲ ಗೆಳೆಯ ಹೌದು, ನಾನು ನಿನ್ನನ್ನು ಪ್ರತಿದಿನ ನನ್ನ ಸಾಲುಗಳಲ್ಲಿ ಅಲಂಕರಿಸುವುದನ್ನು ನಿಲ್ಲಿಸಿಲ್ಲ

ನಿನ್ನ ಒಂದು ನೋಟಕ್ಕೆ ನನ್ನದು ಆ ಗತಿಯಾದರೆ ಇನ್ನು ನಿಮ್ಮನೆಯ ಕನ್ನಡಿಯ ಪರಿಸ್ಥಿತಿ ಏನಾಗಿದೆಯೋ ಏನೋ

ಇಂತಹ ವಿಶೇಷ ಅರ್ಥದ ಜೊತೆ ಪ್ರೀತಿ-ಪ್ರೇಮ ಹೇಗಿರಬೇಕು, ಅದನ್ನು ಹೇಗೆ ನಿವೇದಿಸಬಹುದು, ಯಾವುದೇ ಅಶ್ಲೀಲತೆ ಇಲ್ಲದೆ ಓದುಗನನ್ನು ಆಕರ್ಷಿಸುವ ಪರಿ, ಪ್ರೀತಿ ಎಷ್ಟು ಪರಿಶುದ್ಧ ಎನ್ನುವುದನ್ನು ಸರಳ, ಸುಂದರವಾಗಿ ಚಿತ್ರಿಸಿದ್ದಾರೆ. ಹುಡುಗ-ಹುಡುಗಿಯರು ಪ್ರೇಮ ಕವನ ಬರೆಯುವುದು ಸಾಮಾನ್ಯ ಎನ್ನುವುದು ಸತ್ಯವಾದರೂ ಹೊಸ ಮಾದರಿಯಲ್ಲಿ ಹೇಗೆ ಬರೆಯಬಹುದು ಎನ್ನುವುದಕ್ಕೆ ಇಲ್ಲಿನ ಸಾಲುಗಳು ಸಾಕ್ಷಿಯಾಗುತ್ತವೆ. ಜೊತೆಗೆ ಹೊಸ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುವ ಶಕ್ತಿಯನ್ನು ಇಲ್ಲಿನ ಕವನಗಳು ಹೊಂದಿವೆ.
ಇಲ್ಲಿ ಒಲವನ್ನು ನಿವೇದಿಸಿಕೊಂಡ ಮಾದರಿ ವಿಶೇಷವೆನಿಸುತ್ತದೆ. ಕವಯಿತ್ರಿ ಪ್ರೇಮಾನುಭವವನ್ನೇ ಕಟ್ಟಿಕೊಟ್ಟಿದ್ದಾರೆ. ವಿಶೇಷ ಅನುಭೂತಿ ಕವಿತೆಯಲ್ಲಿದೆ. ಬರೆಯುವ ಶೈಲಿ ಚಂದವಿದೆ.
ಏನೇ ಆಗಲಿ, ಹೋಗಲಿ, ಇರಲಿ, ನನಗೆ ನೀನೇ ಬೇಕು, ನಿನಗಿಂತ ಒಳ್ಳೆಯವರು ಸಿಗಬಹುದು. ಆದರೂ ನೀನೇ ನನಗೆ ಸಿಕ್ಕಿದ್ದರೆ ಒಳ್ಳೆಯದು
ಎನ್ನುವ ಸಾಲಿನ ಮೂಲಕ ಉತ್ಕಟ ಪ್ರೇಮದ ಪರಿ, ತವಕವನ್ನು ಆಕರ್ಷಣೀಯವಾಗಿ ಕಟ್ಟಿಕೊಟ್ಟಿದ್ದಾರೆ. ಯುವಕ-ಯುವತಿಯರು ಹೆಚ್ಚಾಗಿ ಇಂತಹ ಕೃತಿಗಳನ್ನು ಹೆಚ್ಚು ಇಷ್ಟಪಡಬಹುದಾದರೂ ಎಲ್ಲ ಓದುಗರೂ ಪ್ರೀತಿಯನ್ನು ನಾವೆಣಿಸಿದ್ದಕ್ಕಿಂತ ಚೆನ್ನಾಗಿ ಕವಯಿತ್ರಿ ಇಲ್ಲಿ ವಿವರಿಸಿದ್ದನ್ನು ಗಮನಿಸಬಹುದು.

ದತ್ತಾತ್ರೇಯ ಹೆಗಡೆ ಶಿವಮೊಗ್ಗ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...