ಮಲೆನಾಡಿನಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ತುಂಗಾಭದ್ರ ನದಿ ತುಂಬಿ ಹರಿದಿದೆ.
ತುಂಗಾಭದ್ರ ನದಿಯಲ್ಲಿ ನೀರು ದಿನೇ ದಿನೆ ಹೆಚ್ಚಾದಂತೆ ದಾವಣಗೆರೆಯ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪ್ರವಾಹ ಸೃಷ್ಟಿಯಾಗುವ ಹಂತ ತಲುಪಿದೆ.
ತುಂಗಭದ್ರಾ ನದಿ ತುಂಬಿರುವುದರಿಂದ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯ ಕೆಲ ಭಾಗ ಮುಳುಗಿದೆ. ಆ ಭಾಗದಲ್ಲಿ ಯಾರು ಜನ ತೆರಳದಂತೆ ತಾಲೂಕು ಆಡಳಿತ ಸೂಚಿಸಿದೆ. ಇದಲ್ಲದೆ ಉಕ್ಕಡಗಾತ್ರಿಯ ಕರಿಬಸವೇಶ್ವರ ದೇವಸ್ಥಾನದ ಸ್ನಾನಘಟ್ಟ, ಜವಳಘಟ್ಟ ಸೇರಿ ಹದಿನೈದು ಅಂಗಡಿಗಳು ಜಲಾವೃತವಾಗಿವೆ.
ನದಿ ದಂಡೆಯಲ್ಲಿದ್ದ ಗಣಪತಿ ದೇವಸ್ಥಾನ ಮುಳುಗಿದ್ದರಿಂದ ನೀರಿನ ಸೆಳೆತ ಹೆಚ್ಚಾಗಿದೆ. ಪರಿಣಾಮ ಭಕ್ತರು ಅಲ್ಲಿಗೆ ತೆರಳದಂತೆ ದೇವಾಲಯದ ಕಮಿಟಿಯಿಂದ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇನ್ನು ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಕಡೆಯಿಂದ ಉಕ್ಕಡಗಾತ್ರಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಆದ್ದರಿಂದ, ಉಕ್ಕಡಗಾತ್ರಿ ಶ್ರೀ ಕ್ಷೇತ್ರಕ್ಕೆ ಬರಬೇಕು ಎಂದರೆ ಸುತ್ತುಹಾಕಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ.
15 ಅಡಿಯಷ್ಟು ನೀರು ನದಿಗೆ ಬಂದ್ರೆ ಶ್ರೀ ಕ್ಷೇತ್ರ ಜಲಾವೃತ ಆಗಲಿದೆ. ಈಗಾಗಲೇ ಈ ನದಿ ನೀರಿನಿಂದ ತಿಮ್ಮನಕಟ್ಟೆ ರಸ್ತೆ, ಫತೇಪುರ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಂಗಡಿಗಳಿಗೆ ನೀರು ನುಗ್ಗಿದೆ. 15 ದಿನಗಳಿಂದ ಅಂಗಡಿ ಬಂದ್ ಆಗಿವೆ ಎಂದು ಗ್ರಾಮಸ್ಥರಾದ ಗಜೇಂದ್ರಪ್ಪ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ತುಂಗಭದ್ರಾ ನದಿಯಲ್ಲಿ ಪ್ರಸ್ತುತವಾಗಿ 9.68 ಮೀಟರ್ ನಷ್ಟು ನೀರು ಹರಿಯುತ್ತಿದೆ. ಇನ್ನು 10 ಮೀಟರ್ಗಿಂತ ಹೆಚ್ಚು ನೀರು ನದಿಯಲ್ಲಿ ಬಂದರೆ ಪ್ರವಾಹ ಹೆಚ್ಚಾಗುವ ಭೀತಿಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದ 15 ಅಂಗಡಿಗಳು ಕೊಚ್ಚಿಕೊಂಡು ಹೋಗಿದೆ. ಅಂಗಡಿ ಮಾಲೀಕರಿಗೆ ದಿಕ್ಕು ತೋಚದಂತಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮಳೆಗಾಲದಲ್ಲಿ ನದಿಯಲ್ಲಿ ನೀರು ಹೆಚ್ಚಾದರೆ ಶ್ರೀ ಕ್ಷೇತ್ರಕ್ಕೆ ಹಾಗೂ ಅಂಗಡಿ ಮಾಲೀಕರಿಗೆ ಸಂಕಷ್ಟ ಎಂದು ಅಂಗಡಿ ಮಾಲೀಕರಾದ ಶಂಕರ್ ಅವರು ಹೇಳಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಹರಿಹರ ತಹಶೀಲ್ದಾರ್ ಅಶ್ವತ್ಥ ಅವರು ಉಕ್ಕಡಗಾತ್ರಿಗೆ ಭೇಟಿ ನೀಡಿ, ಯಾರು ನದಿಗೆ ಇಳಿಯದಂತೆ ತಾಕೀತು ಮಾಡಿದ್ದಾರೆ.