ಶಿವಮೊಗ್ಗದ ಮನೆಮಾತು. ಒಂದು ರೀತಿ ಉದ್ಯಮಿಗಳ ಲೋಕದ ದಂತಕತೆ.
ಸಾಂಸ್ಕೃತಿಕ ಮನಸ್ಸು,
ದಣಿವರಿಯದ ಸಮಾಜ ಸೇವಕ …ಇಷ್ಟೆಲ್ಲಾ ಹೇಳಿದರೂ ಮತ್ತೂ ಇನ್ನೇನೋ ಹೇಳಬೇಕು ಅನಿಸುತ್ತದೆ ಹಿರಿಯ ಭಾರದ್ವಾಜ್ ಬಗ್ಗೆ. ಅವರು ಸಿಹಿಮೊಗೆಯ ಮರೆಯದ ಮಾಣಿಕ್ಯ.
ಇಡೀ ಶಿವಮೊಗ್ಗದ ವ್ಯವಹಾರ ಜಗತ್ತು , ಜಿಲ್ಲೆಯ ವ್ಯಾಪಾರ ವಹಿವಾಟುಗಳ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದ ಮನುಷ್ಯ.
ಮೊನ್ನೆ ಮೊನ್ನೆಯವರೆಗೂ ಸ್ಥಳೀಯವಾಗಿ ಕೆಲ ಹೊತ್ತು ಅವರು ನಡೆದು ಹೋಗುತ್ತಿದ್ದನ್ನ ಕಂಡಿದ್ದೆ. ಇಷ್ಟು ವಯಸ್ಸಾದರೂ ನಡೆದಾಡುತ್ತಿದ್ದಾರೆ ಪರವಾಗಿಲ್ಲ ಎಂದು ಅಭಿಮಾನ ಉಕ್ಕುತ್ತಿತ್ತು.
ಅವರು ನನಗೆ ಬಹಳ ವರ್ಷಗಳಿಂದಲೂ ಪರಿಚಯ. ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಭೇಟಿ ನೀಡುತ್ತಿದ್ದರು. ಶಿವಮೊಗ್ಗದಲ್ಲಿ ನಡೆದ ಹಲವಾರು ಸಭೆ ಸಮಾರಂಭಗಳಲ್ಲಿ ವೇದಿಕೆಯಲ್ಲಿರುತ್ತಿದ್ದರು.
ನೋಡಿ ಮಾತಾಡಿಸುತ್ತಿದ್ದರು.
ಒಮ್ಮೆ ಹಿರಿಯ ಸಂಗೀತಜ್ಞ ಡಾ.ಎಂ.ಬಾಲ ಮುರಳಿ ಕೃಷ್ಣ ಅವರ ಗಾಯನ ಕಚೇರಿಗೆ ನನ್ನನ್ನ ನಿರೂಪಣೆಗೆ ಕರೆಸಿದ್ದರು. ಕುವೆಂಪು ರಂಗ ಮಂದಿರದಲ್ಲಿ ಖ್ಯಾತ ಬಾಲಮುರಳಿಕೃಷ್ಣರಿಂದ ಸ್ಮರಣಿಕೆ ಸ್ವೀಕರಿಸಿದ ನೆನಪು ಹಸಿರಾಗಿದೆ.
ನಾನು ಜೊತೆಯಲ್ಲಿದ್ದಾಗ ಮಿಕ್ಕವರಿಗೆ ನಾನು ಸಂಕೋಚಪಡುವಷ್ಟು ಹೊಗಳಿ ಪರಿಚಯಿಸುತ್ತಿದ್ದರು.
ವಿವಿಧ ಸಂಘ ಸಂಸ್ಥೆಗಳಲ್ಲಿ ಅವರು ಪದಾಧಿಕಾರಿಗಳಾಗಿ
ಸೇವೆ ಸಲ್ಲಿಸಿದ್ದಾರೆ.
ಪ್ರಧಾನವಾಗಿ ಅವರು ಬೆಳೆಸಿದ ಶಿವಮೊಗ್ಗ ಚೇಂಬರ್ ಆಫ್ ಕಾಮರ್ಸ್ ಈಗ ತಿಲಕ ಪ್ರಾಯವಾಗಿ ನಿಂತಿದೆ.
ಶಿವಮೊಗ್ಗದ ಅಭಿವೃದ್ಧಿ ಬಗ್ಗೆ ಸದಾ ಚಿಂತಿಸುತ್ತಿದ್ದ ಮಾಗಿದ ಮನಸ್ಸಿನ ಚೇತನ
ಈಗ ನಮ್ಮನ್ನಗಲಿದ್ದಾರೆ.
ಅವರಿಗೆ ನಮ್ಮ ನುಡಿ ನಮನಗಳು